ಸುಕೇಶ್ ಚಂದ್ರಶೇಖರ್ ಲಂಚ ಆರೋಪ ತಳ್ಳಿಹಾಕಿದ ಅರವಿಂದ ಕೇಜ್ರಿವಾಲ್
ನವದೆಹಲಿ, ನವೆಂಬರ್ 1: ಪ್ರಸ್ತುತ ಜೈಲಿನಲ್ಲಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್ ರಕ್ಷಣೆಗಾಗಿ 10 ಕೋಟಿ ಪಾವತಿಸುವಂತೆ ಒತ್ತಾಯಿಸಲಾಗಿತ್ತು ಎಂದು ಬಂಧಿತ ಸುಕೇಶ್ ಚಂದ್ರಶೇಖರ್ ಆರೋಪಿಸಿದ್ದಾರೆ.
ಈ ಆರೋಪವನ್ನು ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ತಳ್ಳಿಹಾಕಿದ್ದಾರೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರಿಗೆ ಪತ್ರ ಬರೆದಿರುವ ಸುಕೇಶ್ ಚಂದ್ರಶೇಖರ್, 'ದಕ್ಷಿಣ ಭಾರತದಲ್ಲಿ ಪಕ್ಷದ ಪ್ರಮುಖ ಹುದ್ದೆ ಹಾಗೂ ರಾಜ್ಯಸಭಾ ಸ್ಥಾನದ ಭರವಸೆ ನೀಡಲಾಗಿತ್ತು. ಆ ಹಿನ್ನೆಲೆಯಲ್ಲಿ ಎಎಪಿಗೆ 50 ಕೋಟಿಗೂ ಹೆಚ್ಚು ಹಣವನ್ನು ಪಾವತಿಸಿರುವುದಾಗಿ ತಿಳಿಸಿದ್ದಾರೆ.

ಎಎಪಿ 'ವಂಚನೆಗಳ ಪಕ್ಷ' ಎಂಬುದಕ್ಕೆ ಪುರಾವೆಯಾಗಿ ಅಕ್ಟೋಬರ್ 7 ರಂದು ಸುಕೇಶ್ ಚಂದ್ರಶೇಖರ್ ಕಳುಹಿಸಿದ ಪತ್ರವಿದೆ ಎಂದು ಬಿಜೆಪಿ ಆರೋಪಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅರವಿಂದ ಕೇಜ್ರಿವಾಲ್, 'ಬಿಜೆಪಿಯ ಆರೋಪಗಳು ಸಂಪೂರ್ಣವಾಗಿ ಕಾಲ್ಪನಿಕ' ಎಂದು ಹೇಳಿದ್ದಾರೆ.
ಭಾನುವಾರ ಸಂಭವಿಸಿದ ಗುಜರಾತ್ನ ಮೋರ್ಬಿ ದುರಂತದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಹತಾಶ ಯತ್ನ ಇದಾಗಿದೆ ಎಂದು ಕೇಜ್ರಿವಾಲ್ ಪ್ರತ್ಯುತ್ತರ ನೀಡಿದ್ದಾರೆ.
'ಮೊರ್ಬಿ ದುರಂತವು ನಿನ್ನೆ ಅಷ್ಟೇ ನಡೆದಿದೆ. ಆದರೆ, ಅದು ಇಂದು ಯಾವತ್ತೋ ನಡೆದ ದುರಂತದ ಹಾಗೆ ಭಾಸವಾಗುತ್ತಿದೆ. ಎಲ್ಲಾ ಟಿವಿ ಚಾನೆಲ್ಗಳು ಈ ವಿಚಾರದ ಕುರಿತು ನಿನ್ನೆ ಮಾತನಾಡಿದವು. ಆದರೆ, ಇಂದು ಮೊರ್ಬಿ ಪ್ರಕರಣ ಕಣ್ಮರೆಯಾಗಿದೆ. ಈಗ ಟಿವಿ ಚಾಲೆನ್ಗಳಲ್ಲಿ ಸುಕೇಶ್ ಚಂದ್ರಶೇಖರ್ ಮಾಡಿದ ಆರೋಪಗಳ ಕುರಿತು ಚರ್ಚೆ ಆಗುತ್ತಿದೆ. ಇದು ಮೊರ್ಬಿ ದುರಂತದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿದೆ. ಇದು ಸಂಪೂರ್ಣ ಕಾಲ್ಪನಿಕ ಕಥೆಯಂತೆ ಕಾಣುತ್ತಿಲ್ಲವೇ' ಎಂದು ಕೇಜ್ರಿವಾಲ್ ಸುದ್ದಿಗಾರರನ್ನು ಪ್ರಶ್ನಿಸಿದ್ದಾರೆ.

'ಗುಜರಾತ್ ಚುನಾವಣೆಗೂ ಮುಂಚಿತವಾಗಿ ಬಿಜೆಪಿಯವರು ಭಯಭೀತರಾಗಿದ್ದಾರೆ. ಇಷ್ಟು ವರ್ಷಗಳಲ್ಲಿ ನಡೆದ ಗುಜರಾತ್ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎದುರಾಳಿಗಳಾಗಿದ್ದವು. ಈ ಬಾರಿ ಅವರು ಎಎಪಿ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆ ಬಂದೊದಗಿದೆ. ಹೀಗಾಗಿ, ಬಿಜೆಪಿ ನಾಯಕರು ಹತಾಶರಾಗಿದ್ದಾರೆ' ಎಂದು ಟೀಕಿಸಿದ್ದಾರೆ.
'ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಮದ್ಯ ನೀತಿ ಹಗರಣದ ಆರೋಪ ಹೊರಿಸಲು ಪ್ರಯತ್ನಿಸಿದರು. ಅದರಲ್ಲಿ ಬಿಜೆಪಿ ಸಫಲವಾಗಲಿಲ್ಲ. ಈಗ ಪ್ರಾಮಾಣಿಕ ವ್ಯಕ್ತಿ ಸತ್ಯೇಂದ್ರ ಜೈನ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ಒಬ್ಬ ಕಳ್ಳನನ್ನು ಬಳಸಿಕೊಳ್ಳಲಾಗಿದೆ' ಎಂದು ಬಿಜೆಪಿ ವಿರುದ್ಧ ಕೇಜ್ರಿವಾಲ್ ಹರಿಹಾಯ್ದಿದ್ದಾರೆ.
ದರೋಡೆಕೋರನ ಮನೆಯಲ್ಲಿಯೇ ದರೋಡೆ: ಬಿಜೆಪಿ
ಲೆಫ್ಟಿನೆಂಟ್ ಗವರ್ನರ್ ಅವರಿಗೆ ಸುಕೇಶ್ ಚಂದ್ರಶೇಖರ್ ಬರೆದ ಪತ್ರದ ಸ್ಕ್ರೀನ್ಶಾಟ್ಗಳನ್ನು ಹಲವು ಬಿಜೆಪಿ ನಾಯಕರು ಹಂಚಿಕೊಂಡಿದ್ದಾರೆ.
'ದರೋಡೆಕೋರನ ಮನೆಯಲ್ಲಿಯೇ ದರೋಡೆ ನಡೆದಿದೆ. ಆ ದರೋಡೆಕೋರನ ಹೆಸರು ಸುಕೇಶ್ ಚಂದ್ರಶೇಖರ್. ದರೋಡೆಕೋರನನ್ನು ವಂಚಿಸಿದ ವ್ಯಕ್ತಿ ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದ್ರ ಜೈನ್' ಎಂದು ಬಿಜೆಪಿಯ ಸಂಬಿತ್ ಪಾತ್ರ ಹೇಳಿದ್ದಾರೆ.
ಸೆಲೆಬ್ರಿಟಿಗಳು ಹಾಗೂ ಉದ್ಯಮಿಗಳು ಸೇರಿದಂತೆ ದೇಶದ ಪ್ರತಿಷ್ಠಿತ ವ್ಯಕ್ತಿಗಳಿಂದ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಸುಕೇಶ್ ಚಂದ್ರಶೇಖರ್ 2017 ರಿಂದ ಜೈಲಿನಲ್ಲಿದ್ದಾನೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಪ್ರಮುಖ ಆರೋಪಿಯಾಗಿದ್ದಾನೆ. ಆತನನ್ನು ತಿಹಾರ್ ಜೈಲಿನಲ್ಲಿ ಇಡಲಾಗಿದೆ.
ಕೆಲ ದಿನಗಳಲ್ಲಿ ನಡೆಯಲಿರುವ ಗುಜರಾತ್ ಚುನಾವಣೆಯು ದೇಶದ ಕುತೂಹಲವನ್ನು ಕೆರಳಿಸಿದೆ. ಈ ಹಿಂದೆ ಗುಜರಾತ್ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಈಗ ಎಎಪಿ ಬಿಜೆಪಿಗೆ ಪೈಪೋಟಿ ಒಡ್ಡುತ್ತಿದೆ. ಆ ಹಿನ್ನೆಲೆಯಲ್ಲಿ ಎಎಪಿ ಹಾಗೂ ಬಿಜೆಪಿ ನಡುವಿನ ಸಂಘರ್ಷ ತಾರಕಕ್ಕೆ ಏರಿದೆ. ದೆಹಲಿ ಹಾಗೂ ಪಂಜಾಬ್ನಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಎಎಪಿ, ಗುಜರಾತ್ನಲ್ಲೂ ತನ್ನ ನೆಲೆ ಕಂಡುಕೊಳ್ಳಲು ಯತ್ನ ನಡೆಸಿದೆ. ಒಂದು ವೇಳೆ ಗುಜರಾತ್ನಲ್ಲಿ ಎಎಪಿ ನೆಲೆ ಕಂಡುಕೊಂಡರೆ, ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಹಿನ್ನೆಡೆಯಾಗಲಿದೆ ಎಂಬ ಮಾತುಗಳೂ ಕೇಳಿಬಂದಿವೆ.












Click it and Unblock the Notifications