'ಹಾಸ್ಯಗಾರ ರಾಜಕುಮಾರ': ರಾಹುಲ್ ಗಾಂಧಿಯನ್ನು ಮೂದಲಿಸಿದ ಜೇಟ್ಲಿ
ನವದೆಹಲಿ, ಸೆಪ್ಟೆಂಬರ್ 20: ರಫೇಲ್ ಯುದ್ಧ ವಿಮಾನ ಒಪ್ಪಂದ ಮತ್ತು 15 ಕೈಗಾರಿಕಾ ಸಂಸ್ಥೆಗಳಿಗೆ ಸಾಲ ಮನ್ನಾ ಮಾಡಿದ್ದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ.
'ಹಾಸ್ಯಗಾರ ರಾಜಕುಮಾರ'ನ ಸುಳ್ಳುಗಳು ಎಂಬ ಫೇಸ್ಬುಕ್ ಪೋಸ್ಟ್ ಬರೆದಿರುವ ಅರುಣ್ ಜೇಟ್ಲಿ, ವಿಕಸನ ಹೊಂದಿರುವ ಪ್ರಜಾಪ್ರಭುತ್ವದಲ್ಲಿ ಸುಳ್ಳಿನ ಕಂತೆಯನ್ನೇ ಅವಲಂಬಿಸಿರುವ ಜನರು ಸಾರ್ವಜನಿಕ ಜೀವನದಲ್ಲಿ ಬದುಕಲು ಅನರ್ಹ ಎಂದು ಪರಿಗಣಿಸಲಾಗುತ್ತದೆ ಎಂಬುದಾಗಿ ಹೇಳಿದ್ದಾರೆ.
ಜೇಟ್ಲಿ ಈ ಹೇಳಿಕೆಯನ್ನು ಟ್ವಿಟ್ಟರ್ನಲ್ಲಿಯೂ ಪ್ರಕಟಿಸಿದ್ದು, ಇದಕ್ಕೆ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜಿವಾಲಾ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಯುದ್ಧ ಜೋರಾಗಿ ಸಾಗಿದೆ.
|
ಸುಳ್ಳು ಸೃಷ್ಟಿಸುವ ತಂತ್ರ
ನೀವು ರಫೇಲ್ ಒಪ್ಪಂದದ ಬಗ್ಗೆ ಸುಳ್ಳು ಹೇಳಿದಿರಿ. ಎನ್ಪಿಎ ಬಗ್ಗೆ ಸುಳ್ಳು ಹೇಳಿದಿರಿ. ಅವರ ತಂತ್ರ ಸರಳವಾಗಿದೆ- ಒಂದು ಸುಳ್ಳನ್ನು ಸೃಷ್ಟಿಸುವುದು ಮತ್ತು ಅದನ್ನು ಅನೇಕ ಬಾರಿ ಪುನರಾವರ್ತಿಸುವುದು. ಇಲ್ಲಿ ಅವರ ಹೇಳಿಕೆಗೆ ಮತ್ತು ಭಾಷಣಗಳಿಗಾಗಿ ಕಡೇಪಕ್ಷ ಕೆಲವು ವಸ್ತು ಸಿಕ್ಕಿವೆ. ಇಲ್ಲದಿದ್ದರೆ ಅದು ವಿಷಯರಹಿತ ಕಾಂಗ್ರೆಸ್ ಆಗಿಯೇ ಉಳಿಯುತ್ತಿತ್ತು ಎಂದು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ಗೆ ಅನ್ವಯವಾಗದ ನಿಯಮ
'ರಫೇಲ್ ಒಪ್ಪಂದದ ಬಗ್ಗೆ ನಾನು ಎತ್ತಿದ ಪ್ರಶ್ನೆಗಳಿಗೆ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಒಂದು ಪ್ರಬುದ್ಧ ಪ್ರಜಾಪ್ರಭುತ್ವದಲ್ಲಿ ಸುಳ್ಳಿನ ಮೇಲೆಯೇ ನಿಂತಿರುವವರನ್ನು ಸಾರ್ವಜನಿಕ ಜೀವನಕ್ಕೆ ಅನರ್ಹರು ಎಂದು ಪರಿಗಣಿಸಲಾಗುತ್ತದೆ. ಸುಳ್ಳು ಹೇಳುವಾಗ ಸಿಕ್ಕಿಬಿದ್ದ ಕಾರಣಕ್ಕೆ ಅನೇಕರನ್ನು ರಾಜಕೀಯ ಪಕ್ಷಗಳಿಂದ ಓಡಿಸಲಾಗಿತ್ತು. ಆದರೆ, ಈ ನಿಯಮವು ಕಾಂಗ್ರೆಸ್ ಪಕ್ಷದಂತಹ ವಂಶಾಡಳಿತ ಸಂಸ್ಥೆಯಲ್ಲಿ ಅನ್ವಯವಾಗುವುದಿಲ್ಲ' ಎಂದು ಜೇಟ್ಲಿ ವ್ಯಂಗ್ಯವಾಡಿದ್ದಾರೆ.

ಸಾಲಮನ್ನಾ ಕೂಡ ಸುಳ್ಳು
'ರಫೇಲ್ ಸೃಷ್ಟಿ'ಯು ಮೊದಲ ದೊಡ್ಡ ಸುಳ್ಳಾದರೆ, 15 ಕೈಗಾರಿಕಾ ಸಂಸ್ಥೆಗಳ 2.50 ಲಕ್ಷ ಕೋಟಿ ರೂ. ಸಾಲವನ್ನು ಮೋದಿ ಮನ್ನಾ ಮಾಡಿದ್ದಾರೆ ಎಂದು ಪದೇಪದೇ ಹೇಳುತ್ತಿರುವುದು ಮತ್ತೊಂದು ಸುಳ್ಳು. ರಾಹುಲ್ ಗಾಂಧಿ ಪುನರಾವರ್ತಿಸುವ ಹೇಳಿಕೆಯ ಪ್ರತಿ ಪದವೂ ಸುಳ್ಳಿನಿಂದ ಕೂಡಿರುತ್ತದೆ ಎಂದು ಜೇಟ್ಲಿ ಆರೋಪಿಸಿದ್ದಾರೆ.

ಸಾರ್ವಜನಿಕ ಭಾಷಣ ತಮಾಷೆಯಲ್ಲ
'ವಾಸ್ತವಗಳ ವಿರುದ್ಧವಾದ ನಿಮ್ಮ ಕಲ್ಪಿತ ಸುಳ್ಳುಗಳು ಕಾನೂನಾತ್ಮಕ ಪ್ರಶ್ನೆಗಳನ್ನು ಹುಟ್ಟಿಹಾಕುತ್ತದೆ. ಸಾರ್ವಜನಿಕ ಭಾಷಣಗಳು ಅತ್ಯಂತ ಗಂಭೀರವಾದದ್ದು. ಅದು 'ನಗುವಿನ ಸವಾಲಿನ' ಆಟವಲ್ಲ. ಅದನ್ನು ಅಪ್ಪುಗೆ, ಕಣ್ಣು ಮಿಟುಕಿಸುವುದು ಅಥವಾ ಸುಳ್ಳಿನ ಕಂತೆಗಳ ಪುನರಾವರ್ತನೆಯ ಮಟ್ಟಕ್ಕೆ ಇಳಿಸಲಾಗದು' ಎಂದಿದ್ದಾರೆ.
|
'ಜೈಟ್-ಲೈ': ಸುರ್ಜೆವಾಲಾ ಲೇವಡಿ
ಜೇಟ್ಲಿ ಹೇಳಿಕೆಗೆ ಟ್ವಿಟ್ಟರ್ನಲ್ಲಿ ಕಟು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ, ನಿಜ 'ಜೈಟ್-ಲೈ'ಜಿ, ವ್ಯರ್ಥ ಬ್ಲಾಕ್ ಬರಹಗಳ ವಿದೂಷಕನ ಪಾತ್ರ ಮುಂದುವರಿಸಿದ್ದೀರಿ ಎಂದು ವ್ಯಂಗ್ಯವಾಡಿದ್ದಾರೆ.
ಜತೆಗೆ ಮೂರು ಪ್ರಶ್ನೆಗಳನ್ನು ಅವರು ಜೇಟ್ಲಿ ಮುಂದಿರಿಸಿದ್ದಾರೆ.
* ರಫೇಲ್ ಅವ್ಯವಹಾರದಲ್ಲಿ ಸಿಲುಕಿಕೊಂಡಾಗ ನಿಂದನೆಯ ಹಿಂದೆ ಅಡಗಿದ್ದೇಕೆ?
* 30 ಸಾವಿರ ಕೋಟಿ ಒಪ್ಪಂದಕ್ಕೆ ಎಚ್ಎಎಲ್ ಅನ್ನು ಸೂಪರ್ಸೀಡ್ ಮಾಡಿದ್ದೇಕೆ?
* ರಫೇಲ್ ಹಗರಣದಲ್ಲಿ 41 ಸಾವಿರ ಕೋಟಿ ನಷ್ಟವಾಗಿದ್ದರ ಕುರಿತು ಏಕೆ ಉತ್ತರವಿಲ್ಲ?












Click it and Unblock the Notifications