ಶ್ರದ್ಧಾ ವಾಕರ್ನಂತೆಯೇ ಮರ್ಡರ್ ಮಾಡಿದ ದೆಹಲಿ ಮಹಿಳೆ- ಪುತ್ರನ ಬಂಧನ
ನವದೆಹಲಿ ನವೆಂಬರ್ 28: ಶ್ರದ್ಧಾ ವಾಕರ್ ಅವರ ಕ್ರೂರ ಹತ್ಯೆಯ ಭೀಕರತೆಯನ್ನು ದೇಶದಲ್ಲಿ ಇನ್ನೂ ಯಾರೂ ಕೂಡ ಮರೆತಿಲ್ಲ. ಅದಾಗಲೆ ಮತ್ತೊಂದು ಇಂಥದ್ದೇ ಕ್ರೂರ ಪ್ರಕರಣ ಬೆಳಕಿಗೆ ಬಂದಿದೆ. ದೆಹಲಿ ನಗರದ ಪೂರ್ವ ಭಾಗದಲ್ಲಿ ಅಂತಹುದೇ ಅಪರಾಧವನ್ನು ಭೇದಿಸಿದ್ದೇವೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.
ತನ್ನ ಮಗನ ಸಹಾಯದಿಂದ ಪತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸ್ ಅಪರಾಧ ವಿಭಾಗ ಮಹಿಳೆಯನ್ನು ಬಂಧಿಸಿದೆ. ಪತಿಗೆ ವಿವಾಹೇತರ ಸಂಬಂಧವಿದೆ ಎಂದು ಮಹಿಳೆ ಶಂಕಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯ ನಂತರ, ತಾಯಿ-ಮಗ ಇಬ್ಬರೂ ದೇಹವನ್ನು 22 ತುಂಡುಗಳಾಗಿ ಕತ್ತರಿಸಿ, ಅವುಗಳನ್ನು ಫ್ರಿಡ್ಜ್ನಲ್ಲಿ ಸಂಗ್ರಹಿಸಿ, ಪೂರ್ವ ದೆಹಲಿಯ ಹಲವಾರು ನೆರೆಹೊರೆಗಳಲ್ಲಿ ವಿಲೇವಾರಿ ಮಾಡಿದ್ದಾರೆ.
28 ವರ್ಷದ ಅಫ್ತಾಬ್ ಪೂನಾವಾಲಾ ತನ್ನ ಪ್ರೇಯಸಿ ಶ್ರದ್ಧಾ ವಾಕರ್ಳನ್ನು ಕತ್ತು ಹಿಸುಕಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ನಂತರ ದಕ್ಷಿಣ ದೆಹಲಿಯ ಮೆಹ್ರೌಲಿ ಅರಣ್ಯದಲ್ಲಿ ಎಸೆದ ರೀತಿಯಲ್ಲಿ ಈ ಪ್ರಕರಣ ಹೋಲುತ್ತದೆ.
ಪತಿಯನ್ನು ಕೊಂದು 22 ತುಂಡುಗಳಾಗಿ ಕತ್ತರಿಸಿದ ಪತ್ನಿ
ಜೂನ್ನಲ್ಲಿ ಪಾಂಡವ್ ನಗರದಲ್ಲಿ ಪೊಲೀಸರಿಗೆ ಮೊದಲು ದೇಹದ ಭಾಗಗಳು ಪತ್ತೆಯಾಗಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ. ಆದರೆ ದೇಹದ ತುಂಡುಗಳು ಕೊಳೆತಿದ್ದರಿಂದ ತನಿಖೆ ಪ್ರಗತಿಯಲ್ಲಿದೆ. ಈ ತಿಂಗಳ ಆರಂಭದಲ್ಲಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಘೋರ ವಿವರಗಳು ಮುನ್ನೆಲೆಗೆ ಬರಲು ಪ್ರಾರಂಭಿಸಿದಾಗ, ಅಪರಿಚಿತ ದೇಹದ ಭಾಗಗಳು ಆಕೆಯದೇ ಎಂದು ಸಹ ತನಿಖೆ ನಡೆಸಲಾಯಿತು.
ತ್ರಿಲೋಕಪುರಿಯಲ್ಲಿ ಕೊಲೆಯಾದ ವ್ಯಕ್ತಿ
ಇದೀಗ ಅವು ಅಂಜನ್ ದಾಸ್ ಎಂಬುವರಿಗೆ ಸೇರಿದವು ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ದಾಸ್ ವಿವಾಹೇತರ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಆತನ ಪತ್ನಿ ಪೂನಂ ಮತ್ತು ಆಕೆಯ ಪುತ್ರ ದೀಪಕ್ ಅವರು ದಾಸ್ ಅವರನ್ನು ಜೂನ್ನಲ್ಲಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂಜನ್ ದಾಸ್ ಅವರಿಗೆ ಮೊದಲು ನಿದ್ರೆ ಮಾತ್ರೆಗಳನ್ನು ನೀಡಿ ನಂತರ ಕೊಲೆ ಮಾಡಲಾಗಿದೆ. ತ್ರಿಲೋಕಪುರಿಯಲ್ಲಿ ಈ ಅಪರಾಧ ನಡೆದಿದ್ದು, ದೇಹದ ಭಾಗಗಳನ್ನು ಪೂರ್ವ ದೆಹಲಿಯ ಪಾಂಡವ್ ನಗರ ಮತ್ತು ಹತ್ತಿರದ ಪ್ರದೇಶಗಳಲ್ಲಿ ವಿಲೇವಾರಿ ಮಾಡಲಾಗಿದೆ.
ಸಿಸಿಟಿವಿ ಕ್ಯಾಮಾರಾದಲ್ಲಿ ದೃಶ್ಯ ಸೆರೆ
ನೆರೆಹೊರೆಯಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಆಘಾತಕಾರಿ ದೃಶ್ಯಾವಳಿಗಳು ಸೆರೆಯಾಗಿವೆ. ದೀಪಕ್ ತಡರಾತ್ರಿಯಲ್ಲಿ ಕೈಯಲ್ಲಿ ಚೀಲವನ್ನು ಹಿಡಿದುಕೊಂಡು ಹೋಗುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ದೇಹದ ತುಂಡುಗಳನ್ನು ಎಸೆಯಲು ದೀಪಕ್ ಅವರು ಬ್ಯಾಗ್ ಹಿಡಿದು ಓಡಾಡಿದ ದೃಶ್ಯಗಳಲ್ಲಿ ಇದೂ ಒಂದು ಎಂದು ಪೊಲೀಸರು ಹೇಳುತ್ತಾರೆ. ದೀಪಕ್ ಅವರನ್ನು ಅವರ ತಾಯಿ ಪೂನಂ ಅವರೂ ಹಿಂಬಾಲಿಸುತ್ತಿರುವುದು ಕಂಡುಬಂದಿದೆ. ಮತ್ತೊಂದು ಕ್ಲಿಪ್ ಹಗಲಿನಲ್ಲಿ ಅವುಗಳನ್ನು ತೋರಿಸುತ್ತದೆ. ದೇಹದ ತುಂಡುಗಳನ್ನು ಕ್ರಮೇಣ ಎಸೆಯಲು ಅವರು ಹಲವಾರು ಕಡೆ ಪ್ರಯಾಣ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರದ್ಧಾ ಕೊಲೆಯಾಗಿದ್ದು ಹೇಗೆ?
ಕಳೆದ ಮೇ ತಿಂಗಳಲ್ಲಿ ಶ್ರದ್ಧಾ ವಾಕರ್ ಎಂಬ ಯುವತಿಯ ಹತ್ಯೆಯಾಗಿದ್ದು ಇತ್ತೀಚೆಗಷ್ಟೆ ಬೆಳಕಿಗೆ ಬಂದಿದೆ. ಆಕೆಯ ಪ್ರಿಯತಮ ಅಫ್ತಾಬ್ ಆಕೆಯನ್ನು ಕೊಂದು 35 ತುಂಡುಗಳನ್ನಾಗಿ ಮಾಡಿ ಕೆಲ ತಿಂಗಳು ಫ್ರಿಡ್ಜ್ನಲ್ಲಿ ಇರಿಸಿ ಬಳಿಕ ಎಲ್ಲೆಡೆ ಎಸೆಯಲಾಗಿತ್ತು. ಆ ಬಳಿಕ ದೇಹದ ತುಂಡುಗಳನ್ನು ಸಂಗ್ರಹಿಸಲಾಗುತ್ತಿದೆ. ಶ್ರದ್ಧಾಳ ದೇಹದ ಸಂಪೂರ್ಣ ದೇಹದ ಭಾಗಗಳು ಇನ್ನೂ ಕೂಡ ಪತ್ತೆಯಾಗಿಲ್ಲ. ಅದರ ಪರಿಶೀಲನೆಯಲ್ಲಿದ್ದ ಪೊಲೀಸರಿಗೆ ಅಂಜನ್ ದಾಸ್ ದೇಹದ ಭಾಗಗಳು ಸಿಕ್ಕಿವೆ. ಇದರಿಂದ ದೇಶದಲ್ಲಿ ಮತ್ತಷ್ಟು ಭೀತಿ ಹೆಚ್ಚಾಗಿದೆ.