ಅರ್ನಬ್ಗೆ ಬೆದರಿಕೆ: ಮಹಾರಾಷ್ಟ್ರ ವಿಧಾನಸಭೆ ಕಾರ್ಯದರ್ಶಿಗೆ ಸುಪ್ರೀಂಕೋರ್ಟ್ ಸಮನ್ಸ್
ನವದೆಹಲಿ, ನವೆಂಬರ್ 6: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಬೆದರಿಕೆ ಒಡ್ಡಿದ ಆರೋಪದಲ್ಲಿ ಮಹಾರಾಷ್ಟ್ರ ವಿಧಾನಸಭಾ ಕಾರ್ಯದರ್ಶಿಗೆ ಸುಪ್ರೀಂಕೋರ್ಟ್ ಶುಕ್ರವಾರ ಸಮನ್ ನೀಡಿದೆ. ಅರ್ನಬ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರದಂತೆ ತಡೆಯಲು ಮಹಾರಾಷ್ಟ್ರ ಪ್ರಯತ್ನ ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಕೋರ್ಟ್ ಹೇಳಿದೆ.
ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಮತ್ತು ಹಕ್ಕುಚ್ಯುತಿ ಸಮಿತಿಯು ಹಕ್ಕುಚ್ಯುತಿ ಮಂಡನೆ ಉಲ್ಲಂಘನೆ ಮಾಡಿದ ಆರೋಪದಲ್ಲಿ ವಿಚಾರಣೆ ನಡೆಸುವ ಸಂಬಂಧ ಅರ್ನಬ್ ಗೋಸ್ವಾಮಿ ಅವರಿಗೆ ನೋಟಿಸ್ ನೀಡಿದ್ದ ಪ್ರಕರಣದಲ್ಲಿ ಅದರ ವಿರುದ್ಧ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸದಂತೆ ಅಕ್ಟೋಬರ್ 13ರಂದು ವಿಧಾನಸಭೆ ಕಾರ್ಯದರ್ಶಿ ಅರ್ನಬ್ ಗೋಸ್ವಾಮಿಗೆ ಪತ್ರ ಬರೆದಿದ್ದರು. ಇದರ ವಿರುದ್ಧ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
32 ನೇ ವಿಧಿಯಡಿ ನಾಗರಿಕರು ತಮ್ಮ ಹಕ್ಕುಗಳನ್ನು ಚಲಾಯಿಸುವುದನ್ನು ತಡೆಯುವ ಅಂತಹ ಪ್ರಯತ್ನಗಳು ನ್ಯಾಯಾಂಗ ಆಡಳಿತದ ಹಸ್ತಕ್ಷೇಪಕ್ಕೆ ಅವಕಾಶ ನೀಡುವಂತಹ ಗಂಭೀರ ಪ್ರಕರಣವಾಗುತ್ತದೆ ಎಂದ ನ್ಯಾಯಪೀಠ, ಕಾರ್ಯದರ್ಶಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.

ಕಾರ್ಯದರ್ಶಿಯು ಅಕ್ಟೋಬರ್ 13ರಂದು ಬರೆದ ಪತ್ರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಜಾರಿ ಮಾಡಬಾರದು ಎಂಬ ಬಗ್ಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ.
'ಸುಪ್ರೀಂಕೋರ್ಟ್ನಲ್ಲಿ ನೀವು ಹೇಗೆ ಈ ನೋಟಿಸ್ ಸಲ್ಲಿಸಿದ್ದೀರಿ ಎಂದು ಅಧಿಕಾರಿ ಪ್ರಶ್ನಿಸಿದ್ದಾರೆ. ಅವರಿಗೆ ಎಷ್ಟು ಧೈರ್ಯ. ಈ ನ್ಯಾಯಾಲಯವನ್ನು ತಡೆಯುವುದನ್ನು ಯಾರಿಗೂ ಸಾಧ್ಯವಿಲ್ಲ' ಎಂದು ಬೊಬ್ಡೆ ಕಿಡಿಕಾರಿದರು.
ಮಹಾರಾಷ್ಟ್ರ ವಿಧಾನಸಭೆಯು ಅರ್ನಬ್ ವಿರುದ್ಧದ ಹಕ್ಕುಚ್ಯುತಿ ನಿರ್ಣಯ ಉಲ್ಲಂಘನೆಗೆ ಸಂಬಂಧಿಸಿದ ವಿಚಾರಣೆಗಳು ರಹಸ್ಯವಾಗಿರಬೇಕು ಎಂದು ಅರ್ನಬ್ ಅವರಿಗೆ ಕಳುಹಿಸಿದ ಪತ್ರದಲ್ಲಿ ಸೂಚಿಸಲಾಗಿತ್ತು. ಅದನ್ನು ಅವರು ಯಥಾವತ್ತಾಗಿ ಸುಪ್ರೀಕೋರ್ಟ್ಗೆ ಅರ್ಜಿಯಲ್ಲಿ ತಿಳಿಸಿದ್ದರು.
ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಸೆ. 16ರಂದು ತಮಗೆ ಕಳುಹಿಸಲಾಗಿದ್ದ 60 ಪುಟಗಳ ಹಕ್ಕುಚ್ಯುತಿ ನೋಟಿಸ್ ವಿರುದ್ಧ ಅರ್ನಬ್, ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ಅರ್ನಬ್ ಅವರನ್ನು ಬಂಧಿಸದಂತೆಯೂ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.












Click it and Unblock the Notifications