ಲಡಾಖ್ ಘರ್ಷಣೆ:'ಶಸ್ತ್ರಾಸ್ತ್ರ' ನಿಯಮವನ್ನು ಬದಲಿಸಿದ ಭಾರತೀಯ ಸೇನೆ
ನವದೆಹಲಿ, ಜೂನ್ 22: ಲಡಾಖ್ ಘರ್ಷಣೆ ಬಳಿಕ LACಯಲ್ಲಿ ಚೀನಾದ ವಿರುದ್ಧ ಹೋರಾಡಲು ಸೇನೆಯು ಆಯುಧ ನಿಯಮವನ್ನು ಬದಲಿಸಿದೆ.
ಫೀಲ್ಡ್ ಕಮಾಂಡರ್ಗಳಿಗೆ ತುರ್ತು ಸನ್ನಿವೇಶದಲ್ಲಿ ಬಂದೂಕನ್ನು ಬಳಸಲು ಅನುಮತಿ ನೀಡಲಾಗಿದೆ. ನರೇಂದ್ರ ಮೋದಿಯವರು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವುದಾಗಿ ತಿಳಿಸಿದ್ದರು, ಇದಾದ ಬಳಿಕ ಸೇನೆ ಈ ನಿರ್ಧಾರವನ್ನು ಕೈಗೊಂಡಿದೆ.
ಚೀನಾ ಮತ್ತು ಭಾರತದ ಗಡಿಯಲ್ಲಿ ನಡೆದ ಎರಡೂ ದೇಶಗಳ ನಡುವಿನ ಕಾದಾಟದಲ್ಲಿ 20 ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಗಡಿಯಲ್ಲಿದ್ದ ಸೈನಿಕರು ಹುತಾತ್ಮರಾಗಿದ್ದು ಏಕೆ, ಅವರ ಬಳಿ ಆಯುಧಗಳು ಇರಲಿಲ್ಲವೇ, ಆಯುಧಗಳಿದ್ದರೂ ಯಾಕೆ ಬಳಸಿಕೊಂಡಿಲ್ಲ ಇಂತಹ ನೂರಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದವು.
Explained Story: ದೂರದ ಚೀನಾ ಭಾರತದ ಗಡಿಗೆ ಹೊಂದಿಕೊಂಡಿದ್ದು ಹೇಗೆ?
ಆದರೆ 1996 ಹಾಗೂ 2005ರ ಒಪ್ಪಂದದ ಪ್ರಕಾರ ಅವುಗಳನ್ನು ಬಳಸುವಂತಿರಲಿಲ್ಲ ಎಂಬ ಸತ್ಯ ಬಳಿಕ ತಿಳಿದುಬಂದಿತ್ತು.
ಇದೀಗ ಅಸಾಮಾನ್ಯ ಸನ್ನಿವೇಶಗಳಲ್ಲಿ ಸೈನಿಕರು ಬಂದೂಕುಗಳನ್ನು ಬಳಸಲು ಸಂಪೂರ್ಣ ಅಧಿಕಾರ ಹೊಂದಿರುತ್ತಾರೆ ಎಂದು ಭಾರತೀಯ ಸೇನೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
1996 ಹಾಗೂ 2005ರ ಒಪ್ಪಂದದಲ್ಲಿ ಏನಿತ್ತು?
1996 ಹಾಗೂ 2005ರಲ್ಲಿ ಭಾರತ ಹಾಗೂ ಚೀನಾದ ನಡುವೆ ನಡೆದ ಒಪ್ಪಂದದಲ್ಲಿ ಎರಡೂ ದೇಶಗಳು ಒಬ್ಬರಿಗೊಬ್ಬರು ಗುಂಡು ಹಾರಿಸಿಕೊಳ್ಳುವಂತಿಲ್ಲ, ಹಾಗೆಯೇ ಎರಡೂ ದೇಶಗಳು ಸ್ಫೋಟಕ ವಸ್ತುಗಳನ್ನು ಬಳಸುವಂತಿಲ್ಲ ಎಂದು ಹೇಳಲಾಗಿತ್ತು. ಭಾರತೀಯ ಸೇನೆಯು ಇದ್ಯಾವುದನ್ನೂ ಬಳಸದೆ ಮುಷ್ಠಿ ಯುದ್ಧಕ್ಕಿಳಿದಿತ್ತು.
ರೂಲ್ಸ್ ಆಫ್ ಎಂಗೇಜ್ಮೆಂಟ್ನಲ್ಲಿ ಬದಲಾವಣೆ
ರೂಲ್ಸ್ ಆಫ್ ಎಂಗೇಜ್ಮೆಂಟ್ನಲ್ಲಿ ಗಮನಾರ್ಹ ಬದಲಾವಣೆಯೊಂದನ್ನು ತರಲಾಗಿದ್ದು, ಲೈನ್ ಆಫ್ ಕಂಟ್ರೋಲ್ ನಲ್ಲಿ ಗಡಿ ಕಾಯುತ್ತಿರುವ ಸೈನಿಕರು ಯುದ್ಧತಂತ್ರದ ಮಟ್ಟದಲ್ಲಿ ಸನ್ನಿವೇಶವನ್ನು ಎದುರಿಸಲು ಬಂದೂಕು ಬಳಸಲು ಅಧಿಕಾರ ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಈ ಬದಲಾವಣೆಯಿಂದಾಗಿ ಭಾರತೀಯ ಕಮಾಂಡರ್ಗಳು ಎಲ್ಎಸಿಯಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಚೀನಾ ಸೈನ್ಯ ಬಳಸುತ್ತಿರುವ ಕ್ರೂರ ತಂತ್ರಗಳನ್ನು ಪರಿಹರಿಸಲು ಈ ತಿದ್ದುಪಡಿ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚೀನಾ ಹೇಳಿಕೆಗೆ ಉತ್ತರ ನೀಡಿದ ಭಾರತ ವಿದೇಶಾಂಗ ಸಚಿವಾಲಯ
ಗಲ್ವಾಣ್ ಕಣಿವೆ ಘರ್ಷಣೆ ಬಳಿಕ ತಿದ್ದುಪಡಿ
ಈ ರೂಲ್ಸ್ ಆಫ್ ಎಂಗೇಜ್ಮೆಂಟ್ ನಿಯಮಗಳನ್ನು ಗಲ್ವಾನ್ ಪ್ರದೇಶದಲ್ಲಿ ನಡೆದ ಘರ್ಷಣೆಯ ಐದು ದಿನಗಳ ನಂತರ ತಿದ್ದುಪಡಿ ಮಾಡಲಾಗಿದೆ. ಈ ಕುರಿತು ಸರ್ವಪಕ್ಷ ಸಭೆಯಲ್ಲಿಯೂ ಪ್ರಧಾನಿ ಮೋದಿ ಹೇಳಿದ್ದು, ಸೈನಿಕರು ಗಡಿಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ನೀಡಲಾಗಿದೆ. ಮತ್ತು ಭಾರತ ತನ್ನ ನಿಲುವನ್ನು ಚೀನಾಕ್ಕೆ ತಿಳಿಸಿದೆ ಎಂದು ಹೇಳಿದ್ದರು.
ನಾವು ಯಾರನ್ನೂ ಯುದ್ಧಕ್ಕೆ ಪ್ರಚೋದಿಸುವುದಿಲ್ಲ
ನಾವು ಎಂದಿಗೂ ಯಾರೊಂದಿಗೂ ಯುದ್ಧಕ್ಕೆ ಪ್ರಚೋದಿಸುವುದಿಲ್ಲ, ಹಾಗೆಯೇ ಸಾರ್ವಭೌಮತೆಯಲ್ಲಿ ರಾಜಿಯನ್ನೂ ಮಾಡಿಕೊಳ್ಳುವುದಿಲ್ಲ. ಸಮಯ ಬಂದಾಗಲೆಲ್ಲಾ, ಸಮಗ್ರತೆ, ಸಾರ್ವಭೌಮತ್ವವನ್ನು ರಕ್ಷಿಸುವಲ್ಲಿ ನಮ್ಮ ಶಕ್ತಿ, ಸಾಮರ್ಥ್ಯವನ್ನು ಸಾಬೀತು ಪಡಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಭಾರತೀಯರು ಚೀನಾದ ಗಡಿ ದಾಟಿದ್ದಾರೆ ಎನ್ನುವುದು ಸುಳ್ಳು ಎಂದರು.