Get Updates
Get notified of breaking news, exclusive insights, and must-see stories!

ಭಾರತೀಯರೆನಿಸಿಕೊಳ್ಳಲು ಇನ್ಮುಂದೆ ಹಿಂದಿ ಕಡ್ಡಾಯ?

ಬೆಂಗಳೂರು, ಆ. 10: ನಾವು ಭಾರತೀಯರು ಎಂದು ಸಾಬೀತು ಮಾಡಿಕೊಳ್ಳಲು ಇನ್ನುಮುಂದೆ ಹಿಂದಿ ಭಾಷೆಯನ್ನೂ ಕಡ್ಡಾಯವಾಗಿ ಕಲಿಯಲೇ ಬೇಕಾ? ಇಂಥದ್ದೊಂದು ಪ್ರಶ್ನೆ ಇದೀಗ ಎದುರಾಗಿದೆ. ಇದು ಸಾಮಾನ್ಯ ಜನರಿಗೆ ಎದುರಾಗಿದ್ದರೆ ಅಷ್ಟೊಂದು ಮಹತ್ವವಿರುತ್ತಿರಲಿಲ್ಲ. ದಕ್ಷಿಣ ಭಾರತದ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಹಿಂದಿ ಭಾಷೆಯಲ್ಲಿ ಮಾತನಾಡಿಲ್ಲ ಎಂಬ ವಿಚಾರವನ್ನು ಇಟ್ಟುಕೊಂಡು ಹೀಯಾಳಿಸಲಾಗಿದೆ.

Recommended Video

      ರಾಜಸ್ಥಾನ ವಿಧಾನಸಭೆ ಅಧಿವೇಶನ ಆಗಸ್ಟ್ 14ರಿಂದ | Oneindia Kannada

      ಜೊತೆಗೆ ನೀವು ನಿಜವಾಗಿಯೂ ಭಾರತೀಯರಾ? ಎಂಬ ಪ್ರಶ್ನೆಯನ್ನೂ ಮಾಡಿದ್ದಾರೆ. ಪರೋಕ್ಷ ಪ್ರಯತ್ನಗಳ ಮೂಲಕ ದಕ್ಷಿಣ ಭಾರತೀಯರ ಮೇಲೆ ಹಿಂದಿ ಭಾಷೆಯನ್ನು ಹೇರುವ ಪ್ರಯತ್ನಗಳು ಹಿಂದಿನಿಂದಲೂ ನಡೆದಿವೆ. ಹಿಂದಿ ಮಾತನಾಡುವುದಿಲ್ಲ ಎಂಬ ಒಂದೇ ಕಾರಣಕ್ಕೆ ದಕ್ಷಿಣ ಭಾರತದ ಅನೇಕ ಅರ್ಹ ರಾಜಕಾರಣಿಗಳು ಪ್ರಧಾನಿಯಂತಹ ಉನ್ನತ ಹುದ್ದೆಗಳಿಗೇರದಂತೆ ತಡೆಯಲಾಗಿದೆ.

      ಈಗ ಮತ್ತೊಮ್ಮೆ ಹಿಂದಿಯಲ್ಲಿ ಮಾತನಾಡದೇ ಇದ್ದುದಕ್ಕೆ ದಕ್ಷಿಣ ಭಾರತದ ಪ್ರಭಾವಿ ಸಂಸದೆಯೊಬ್ಬರನ್ನು ಸಾಮಾನ್ಯ ಭದ್ರತಾ ಸಿಬ್ಬಂದಿಯೊಬ್ಬ ಎಲ್ಲರೆದುರೇ ಲೇವಡಿ ಮಾಡಿದ್ದಾನೆ. ಅದನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅತ್ಯುಗ್ರವಾಗಿ ಖಂಡಿಸಿದ್ದಾರೆ. ಏನದು ಘಟನೆ? ಇಲ್ಲಿದೆ ವಿವರ.

      ನೀವು ಭಾರತೀಯರೇ?

      ನೀವು ಭಾರತೀಯರೇ?

      ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಹೇರುವ ಯತ್ನಗಳು ಇಂದು-ನಿನ್ನೆಯದಲ್ಲ. ಬಹಳ ಹಿಂದಿನಿಂದಲೂ ಬಲವಂತವಾಗಿ ಹಿಂದಿ ಭಾಷೆಯನ್ನು ದಕ್ಷಿಣ ಭಾರತೀಯರ ಮೇಲೆ ಹೇರುವ ವಿಫಲ ಪ್ರಯತ್ನಗಳು ಆಗಾಗ ನಡೆಯುತ್ತಲೇ ಇವೆ. ರಾಜಕೀಯದಲ್ಲಿ ಹಿಂದಿ ಗೊತ್ತಿಲ್ಲದವರಿಗೆ ದೆಹಲಿ ಮಟ್ಟದಲ್ಲಿ ಭವಿಷ್ಯವಿಲ್ಲ ಎಂಬ ಮಾತನ್ನು ಸ್ವತಃ ಪ್ರಭಾವಿ ರಾಜಕಾರಣಿಗಳೇ ಹೇಳುತ್ತಾರೆ.

      ಭಾಷೆ ಕಾರಣಕ್ಕೆ ಅರಿವಾಲಯಂ ಸಂಸದೆ ಕನಿಮೋಳಿ ಅವರನ್ನು ‘ನೀವು ಭಾರತೀಯರೇ' ಎಂದು ಪ್ರಶ್ನಿಸಿದ ಘಟನೆ ನಡೆದಿದೆ. ಸೋದರಿ ಕನಿಮೋಳಿಗೆ ಆದ ಅಪಮಾನದ ವಿರುದ್ಧ ನನ್ನದೂ ಧ್ವನಿ ಇದೆ. ಇದೇ ಹೊತ್ತಲ್ಲೇ, ಹಿಂದಿ ವ್ಯಾಮೋಹ, ಹಿಂದಿ ರಾಜಕಾರಣ, ಹಿಂದಿ ಶ್ರೇಷ್ಠತೆ ವ್ಯಸನ ದಕ್ಷಿಣ ಭಾರತದ ನಾಯಕರ, ಜನರ ಅವಕಾಶಗಳನ್ನು ಕಸಿದ ವಿಚಾರ ಚರ್ಚಾರ್ಹ ಎಂದು ಮಾಜಿ ಸಿಎಂ ಎಚ್‌ಡಿಕೆ ಟ್ವೀಟ್ ಮಾಡಿದ್ದಾರೆ.

      ಹಿಂದಿ ರಾಜಕಾರಣವು ದಕ್ಷಿಣ ಭಾರತದ ಹಲವು ನಾಯಕರ ಪ್ರಧಾನಿಯಾಗುವ ಅವಕಾಶ ಕಸಿದಿದೆ. ಅದರಲ್ಲಿ ಎಚ್.ಡಿ. ದೇವೇಗೌಡ, ಕರುಣಾನಿಧಿ, ಕಾಮರಾಜರ ಹೆಸರುಗಳು ಪ್ರಧಾನ. ಆದರೆ ಈ ವ್ಯೂಹವನ್ನು ದೇವೇಗೌಡರು ಭೇದಿಸಿ ಅತ್ಯುನ್ನತ ಪಟ್ಟ ಅಲಂಕರಿಸಿದರಾದರೂ, ಭಾಷೆ ವಿಚಾರಕ್ಕೆ ಅವರನ್ನು ಮೂದಲಿಸಿದ, ಗೇಲಿ ಮಾಡಿದ, ಕನ್ನಡತನ ಪ್ರಶ್ನಿಸಿದ ಪ್ರಸಂಗಗಳು ಆಗಿ ಹೋಗಿವೆ ಎಂದು ಹಿಂದಿ ಭಾಷಿಕರ ಉದ್ದಟತನವನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಖಂಡಿಸಿದ್ದಾರೆ. ಅಷ್ಟಕ್ಕೂ ಕನಿಮೋಳಿ ಅವರನ್ನು ಪ್ರಶ್ನಿಸಿದ್ದು ಯಾರು?

      ಹಿಂದಿ ಅವಮಾನ

      ಹಿಂದಿ ಅವಮಾನ

      ತಮಿಳುನಾಡಿನ ಡ್ರಾವಿಡ ಮುನ್ನೆತ್ರ ಕಳಗಂ ಪಕ್ಷದ ಅರಿವಾಲಯಂ ಸಂಸದೆ, ದಿ. ಮಾಜಿ ಸಿಎಂ ಕರುಣಾನಿಧಿ ಪುತ್ರಿ ಕನಿಮೋಳಿ ಅವರ ಭಾರತೀಯತೆಯನ್ನು ಸಾಮಾನ್ಯ ಪೊಲೀಸನೊಬ್ಬ ಪ್ರಶ್ನೆ ಮಾಡಿದ್ದಾರೆ. ಏರ್‌ಪೋರ್ಟ್‌ ಒಂದರಲ್ಲಿ ಕನಿಮೋಳಿ ಅವರು ಸಿಐಎಸ್‌ಎಫ್‌ ಸಿಬ್ಬಂದಿಯನ್ನು ಇಂಗ್ಳಿಷ್ ಅಥವಾ ತಮಿಳಿನಲ್ಲಿ ಮಾತನಾಡಲು ವಿನಂತಿಸಿದ್ದಾರೆ. ಆಗ ಹಿಂದಿ ಭಾಷಿಕ ಸಿಐಎಸ್‌ಎಫ್‌ ಸಿಬ್ಬಂದಿ ಅತ್ಯಂತ ತುಚ್ಛವಾಗಿ ನೀವು ನಿಜಕ್ಕೂ ಭಾರತೀಯರಾ ಎಂದು ಪ್ರಶ್ನೆ ಮಾಡಿದ್ದಾನೆ.

      ಟ್ವೀಟ್‌ನಲ್ಲಿ ತಮಗಾದ ಅವಮಾನವನ್ನು ಹೇಳಿಕೊಂಡಿರುವ ಕನಿಮೋಳಿ ಅವರು, ಇಂದು ಏರ್‌ಪೋರ್ಟ್‌ನಲ್ಲಿ ಹಿಂದಿ ಬಾರದ್ದಕ್ಕೆ ನೀವು ಭಾರತೀಯರಾ ಎಂದು ಪ್ರಶ್ನಿಸಿದ್ದಾರೆ ಎಂದಿದ್ದರೆ. ಆದರೆ ಯಾವ ವಿಮಾನ ನಿಲ್ದಾಣದಲ್ಲಿ ಈ ಪ್ರಕರಣವಾಗಿದೆ ಎಂಬುದನ್ನು ಅವರು ಹೇಳಿಲ್ಲ.

      ಹಿಂದಿ ರಾಜಕಾರಣ

      ಹಿಂದಿ ರಾಜಕಾರಣ

      ಭಾರತದ ಪ್ರಧಾನ ಮಂತ್ರಿಯಾಗಿದ್ದ ದೇವೇಗೌಡರಿಂದ ಕೆಂಪು ಕೋಟೆಯಲ್ಲಿ ಹಿಂದಿಯಲ್ಲೇ ಭಾಷಣ ಮಾಡಿಸುವಲ್ಲಿ ಹಿಂದಿ ರಾಜಕಾರಣ ಯಶಸ್ವಿಯಾಗಿತ್ತು. ಬಿಹಾರ ಮತ್ತು ಉತ್ತರ ಪ್ರದೇಶದ ಬಹುದೊಡ್ಡ ರೈತ ಸಮುದಾಯದ ದೃಷ್ಟಿಯಿಂದ ಅಂದು ದೇವೇಗೌಡರು ಹಿಂದಿಯಲ್ಲೇ ಮಾತನಾಡಿದರು. ಅಷ್ಟರ ಮಟ್ಟಿಗೆ ಈ ದೇಶದಲ್ಲಿ ಹಿಂದಿ ರಾಜಕಾರಣ ಕೆಲಸ ಮಾಡುತ್ತದೆ.

      ಇಂಥದ್ದೇ ಅನುಭವ ನನಗೂ ಆಗಿವೆ. ನಾನೂ 2 ಬಾರಿ ಸಂಸದನಾಗಿದ್ದವನು. ಸಂಸತ್‌ನಲ್ಲಿ ಕನ್ನಡದಲ್ಲಿ ಮಾಡಲಾಗುವ ಭಾಷಣಗಳ ಬಗ್ಗೆ ಆಳುವ ವರ್ಗ ದಿವ್ಯ ನಿರ್ಲಕ್ಷ್ಯ ತೋರುತ್ತದೆ. ಅಲ್ಲದೆ, ಹಿಂದಿ ವ್ಯಾಮೋಹಿ ರಾಜಕಾರಣಿಗಳ ವರಸೆಗಳನ್ನು ಹತ್ತಿರದಿಂದ ನಾನು ಕಂಡಿದ್ದೇನೆ. ಹಿಂದಿಯೇತರ ರಾಜ್ಯಗಳ ರಾಜಕಾರಣಿಗಳೆಂದರೆ ಬಹುತೇಕರಿಗೆ ಅಲ್ಲಿ ಅಪತ್ಯವೇ ಸರಿ ಎಂದು ತಮ್ಮ ಅನುಭವವನ್ನು ಮಾಜಿ ಸಿಎಂ ಎಚ್‌ಡಿಕೆ ನೆನಪಿಸಿಕೊಂಡಿದ್ದಾರೆ.

      ಉದ್ಯೋಗದಲ್ಲೂ ರಾಜಕೀಯ

      ಉದ್ಯೋಗದಲ್ಲೂ ರಾಜಕೀಯ

      ರಾಜಕಾರಣ ಹೊರತುಪಡಿಸಿ ಔದ್ಯೋಗಿಕ ಕ್ಷೇತ್ರಕ್ಕೆ ಬಂದರೆ, ಕೇಂದ್ರ ಸರ್ಕಾರದ ಕೆಲ ಹುದ್ದೆಗಳ ಪರೀಕ್ಷೆಗಳನ್ನು ಇಂಗ್ಲಿಷ್‌-ಹಿಂದಿಯಲ್ಲೇ ಬರೆಯಬೇಕಿದೆ. ಅದರಲ್ಲಿ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆಸಂಸ್ಥೆ (IBPS) ಕೂಡ ಒಂದು. ಈ ಬಾರಿಯ ಅಧಿಸೂಚನೆಯಲ್ಲಿ ಕನ್ನಡಕ್ಕೆ ಸ್ಥಾನವೇ ಇಲ್ಲ. ಹೀಗಾಗಿ ಕನ್ನಡದ ಉದ್ಯೋಗಾಕಾಂಕ್ಷಿಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇದು ನಿಲ್ಲಬೇಕು.

      ಅಧಿಕೃತ ಭಾಷೆಗಳಲ್ಲಿ ಹಿಂದಿಯೂ ಒಂದು ಎಂದು ಕೇಂದ್ರ ಸರ್ಕಾರ ಬಾಯಿ ಮಾತಿಗಷ್ಟೇ ಹೇಳುತ್ತದೆ. ಆದರೆ, ಹಿಂದಿ ಅಭಿವೃದ್ಧಿಗಾಗಿ ದೇಶ, ವಿದೇಶದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕೇಂದ್ರವು ಕೋಟ್ಯಂತರ ಮೊತ್ತ ವಿನಿಯೋಗಿಸುತ್ತದೆ. ಇದು ರಹಸ್ಯ ಕಾರ್ಯಸೂಚಿಗಳಲ್ಲೊಂದು. ಪ್ರಾಮಾಣಿಕ ಭಾಷಾಭಿಮಾನದಿಂದ ಮಾತ್ರ ಇವುಗಳನ್ನು ಮೆಟ್ಟಿಸಲು ಸಾಧ್ಯ ಎಂದು ಮಾಜಿ ಸಿಎಂ ಎಚ್‌ಡಿಕೆ ಹೇಳಿದ್ದಾರೆ. ಜೊತೆಗೆ ಸಂತ ಶಿಶುನಾಳ ಶರೀಫರ ತತ್ವಪದವನ್ನು ಹಿಂದಿ ಭಾಷೆ ಹೇರಿಕೆಗೆ ಸಂಬಂಧಿಸಿದಂತೆ ಹಂಚಿಕೊಂಡಿದ್ದಾರೆ.

      ಭಾಷೆ ಪಂಥ ನಡಿದ್ಹಾಂಗಾಗಲಿ

      ಹಾಸ್ಯ ಮಾಡಿ ಜನರೆಲ್ಲರು ನಗಲಿ

      ಈ ಶಿಶುನಾಳಧೀಶ ಸದ್ಗುರುವಿನ

      ಲೇಸಾದ ದಯವೊಂದು ಕಡೆತನಕಿರಲಿ

      - ಶಿಶುನಾಳ ಶರೀಫರು

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+