ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ತೆಲಂಗಾಣಕ್ಕೆ ಹೊಸ ರಾಜ್ಯಪಾಲರ ನೇಮಕ
ನವದೆಹಲಿ, ಸೆ.01: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾನುವಾರದಂದು ರಾಜ್ಯಪಾಲರ ನೇಮಕಾತಿ ಕುರಿತಂತೆ ಆದೇಶ ಹೊರಡಿಸಿದೆ. ಬಿಜೆಪಿ ಹಿರಿಯ ಮುಖಂಡ ಕಲ್ ರಾಜ್ ಮಿಶ್ರಾರನ್ನು ರಾಜಸ್ಥಾನದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಕಚೇರಿಯಿಂದ ಹೊರಡಿಸಲಾಗಿರುವ ಪ್ರಕಟಣೆಯಂತೆ ರಾಜಸ್ಥಾನ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಕೇರಳ ಹಾಗೂ ತೆಲಂಗಾಣ ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕವಾಗಿದೆ.
ಹೊಸ ನೇಮಕಾತಿ ಹೀಗಿದೆ:
ರಾಜ್ಯ-ರಾಜ್ಯಪಾಲ
ರಾಜಸ್ಥಾನ: ಕಲ್ ರಾಜ್ ಮಿಶ್ರಾ
ಮಹಾರಾಷ್ಟ್ರ: ಭಗತ್ ಸಿಂಘ್ ಕೋಶ್ಯಾರಿ
ಹಿಮಾಚಲ ಪ್ರದೇಶ: ಬಂಡಾರು ದತ್ತಾತ್ರೇಯ
ಕೇರಳ: ಆರಿಫ್ ಮೊಹಮ್ಮದ್ ಖಾನ್
ತೆಲಂಗಾಣ: ತಮಿಳು ಇಸೈ ಸೌಂದರರಾಜನ್.
ಕರ್ನಾಟಕ ಸೇರಿ 9 ರಾಜ್ಯಗಳಿಗೆ ಹೊಸದಾಗಿ ನೇಮಕಾತಿ ನಡೆಯಬೇಕಿದೆ. ಕರ್ನಾಟಕ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿ 9 ರಾಜ್ಯಗಳ ರಾಜ್ಯಪಾಲರ ಅವಧಿ ಪೂರ್ಣಗೊಳ್ಳುತ್ತಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಒಬ್ಬರೇ ರಾಜ್ಯಪಾಲರಿದ್ದರು, ಈಗ ತೆಲಂಗಾಣಕ್ಕೆ ಹೊಸ ರಾಜ್ಯಪಾಲರ ನೇಮಕವಾಗಿದೆ. ಛತ್ತೀಸ್ ಗಢ, ಮಿಜೋರಾಂಗೆ ಹೊಸ ನೇಮಕವಾಗಬೇಕಿದೆ.
ರಾಜ್ಯಪಾಲ ಹುದ್ದೆಗೆ ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ ಹಾಗೂ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಹೆಸರು ಈಗ ಮುಂಚೂಣಿಗೆ ಬಂದಿದೆ. ಅದರಲ್ಲೂ ಇವರಿಬ್ಬರ ಹೆಸರು ಕರ್ನಾಟಕದ ರಾಜ್ಯಪಾಲ ಹುದ್ದೆ ಬಲವಾಗಿ ಕೇಳಿ ಬಂದಿದೆ. ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಸದ್ಯ 80ಪ್ಲಸ್ ವಯಸ್ಸಾಗಿದ್ದು, ಅವರ ಅಧಿಕಾರ ಅವಧಿ ಸೆಪ್ಟೆಂಬರ್ ತಿಂಗಳಿಗೆ ಐದು ವರ್ಷ ಪೂರ್ಣಗೊಳ್ಳಲಿದೆ.

ರಾಜ್ಯಪಾಲರುಗಳನ್ನು ಬದಲಾಯಿಸುವ ಪದ್ಧತಿ ಸಾಮಾನ್ಯ
ಕೇಂದ್ರದಲ್ಲಿ ಹೊಸದಾಗಿ ಸರ್ಕಾರ ರಚನೆಯಾದಾಗ ರಾಜ್ಯಗಳ ರಾಜ್ಯಪಾಲರುಗಳನ್ನು ಬದಲಾಯಿಸುವ ಪದ್ಧತಿ ಸಾಮಾನ್ಯವಾಗಿ ನಡೆಯುತ್ತಾ ಬಂದಿದೆ. ಇದು ನಿಯಮವಲ್ಲದಿದ್ದರೂ ಹೀಗೊಂದು ಪದ್ಧತಿ ಹಿಂದಿನಿಂದಲೂ ಇದೆ. ಈಗ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಹಿರಿಯ ನಾಯಕರಿಗೆ ರಾಜ್ಯಪಾಲ ಹುದ್ದೆಯನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ರಾಜ್ಯಪಾಲರ ನೇಮಕವನ್ನು ರಾಷ್ಟ್ರಪತಿಗಳು ಮಾಡುತ್ತಾರೆಯಾದರೂ ಅದನ್ನು ಸೂಚಿಸುವುದು ಕೇಂದ್ರದಲ್ಲಿ ಆಡಳಿತದಲ್ಲಿರುವ ಸರ್ಕಾರವೇ.

ಹಿರಿಯ ಮುಖಂಡರು ರಾಜ್ಯಪಾಲರಾಗಿದ್ದಾರೆ
ಹಾಲಿ ರಾಜ್ಯಪಾಲರ ಪೈಕಿ ಅತ್ಯಂತ ಹಿರಿಯರಾಗಿರುವ 87 ವರ್ಷದ ಕಲ್ಯಾಣ್ ಸಿಂಗ್(ರಾಜಸ್ಥಾನ), ಕರ್ನಾಟಕ ಮೂಲದ 87 ವರ್ಷದ ಪಿವಿ ಆಚಾರ್ಯ(ನಾಗಾಲ್ಯಾಂಡ್) ಹಾಗೂ 85 ವರ್ಷದ ರಾಮ್ ನಾಯಕ್(ಉತ್ತರಪ್ರದೇಶ) ಅವರ ಅವಧಿಯನ್ನು ವಿಸ್ತರಿಸಲಾಗಿದೆಯೇ ಎಂಬ ಕುತೂಹಲವಿದೆ. ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿರುವ ಕೇಸರಿನಾಥ ತ್ರಿಪಾಠಿ ಅವರಿ 84 ವರ್ಷ, ಅವರ ಅವಧಿ ಜುಲೈನಲ್ಲಿ ಮುಕ್ತಾಯಗೊಳ್ಳಲಿದೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಗೆ ಈ ಎರಡೂ ರಾಜ್ಯಗಳು ಮಹತ್ವದ್ದಾಗಿವೆ.

ಮಹಾರಾಷ್ಟ್ರ, ಕೇರಳ, ತೆಲಂಗಾಣಕ್ಕೆ ಹೊಸ ರಾಜ್ಯಪಾಲರ ನೇಮಕ
ಆರೆಸ್ಸೆಸ್ ಹಿರಿಯರಾದ ಗುಜರಾತಿನ ರಾಜ್ಯಪಾಲ ಓಪಿ ಕೊಹ್ಲಿ(83), ಗೋವಾ ಗವರ್ನರ್ ಮೃದುಲಾ ಸಿನ್ಹಾ, ಮಹಾರಾಷ್ಟ್ರದ ಗವರ್ನರ್ ಸಿ ವಿದ್ಯಾಸಾಗರ್ ರಾವ್ (78) ಅವರ ಸ್ಥಾನಗಳು ಬದಲಾಗಲಿದೆ. ಈ ಹಿಂದೆ ಆಂಧ್ರಪ್ರದೇಶದ ರಾಜ್ಯಪಾಲ ಹುದ್ದೆಗೆ ಸುಷ್ಮಾ ಸ್ವರಾಜ್ ಹೆಸರು ಕೇಳಿ ಬಂದಿತ್ತು. ಆದರೆ, ನಂತರ ಸುಷ್ಮಾ ಅಲ್ಲಗೆಳೆದಿದ್ದರು. ಈಗ ಯುಪಿಎ ಅವಧಿಯಲ್ಲಿ ನೇಮಕವಾಗಿರುವ ರಾಜ್ಯಪಾಲರನ್ನು ಹೊಂದಿರುವ ರಾಜ್ಯಗಳಲ್ಲಿ ಬದಲಾವಣೆ ನಿರೀಕ್ಷಿತವಾಗಿದೆ. ತೆಲಂಗಾಣದ ನರಸಿಂಹನ್ ಸ್ಥಾನಕ್ಕೆ ಪುದುಚೇರಿ ರಾಜ್ಯಪಾಲರಾಗಿರುವ ಲೆಫ್ಟಿನಂಟ್ ಗವರ್ನರ್ ಕಿರಣ್ ಬೇಡಿ ಅವರ ಹೆಸರು ಕೇಳಿ ಬಂದಿತ್ತು ಆದರೆ, ಕಿರಣ್ ಬೇಡಿ ಅವರು ಪುದುಚೇರಿಯಲ್ಲೇ ಉಳಿಯಲಿದ್ದಾರೆ.

ಕರ್ನಾಟಕಕ್ಕೆ ರಾಜ್ಯಪಾಲರು ಯಾರು?
ಸಾಧ್ವಿ ಉಮಾ ಭಾರತಿ ಅವರನ್ನು ಕರ್ನಾಟಕದ ರಾಜ್ಯಪಾಲೆಯನ್ನಾಗಿ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಕರ್ನಾಟಕದ ಜೊತೆ ಉತ್ತಮ ನಂಟನ್ನು ಹೊಂದಿದ್ದಾರೆ ಕೂಡಾ. ಕಳೆದ ಲೋಕಸಭೆ ಚುನಾವಣೆ ಸ್ಪರ್ಧಿಸಿಲ್ಲ, ಮೋದಿ ಸರ್ಕಾರ್ 2.0ರಲ್ಲಿ ಯಾವುದೇ ಸಚಿವ ಸ್ಥಾನವನ್ನೂ ನೀಡಿಲ್ಲ. ಮಿಕ್ಕಂತೆ 16ನೇ ಲೋಕಸಭೆಯಲ್ಲಿ ಸ್ಪೀಕರ್ ಆಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಇರುವ ಸುಮಿತ್ರಾ ಮಹಾಜನ್ ಹೆಸರು ಕೇಳಿ ಬಂದಿದೆ.












Click it and Unblock the Notifications