ರೈತರಲ್ಲಿ ಕೈಮುಗಿದು ಕೇಳುತ್ತೇನೆ, ನಾವು ಮಾತುಕತೆಗೆ ಸಿದ್ಧರಿದ್ದೇವೆ ಬನ್ನಿ: ಮೋದಿ
ನವದೆಹಲಿ, ಡಿಸೆಂಬರ್ 18: ನಾವು ರೈತರಲ್ಲಿ ಕೈಮುಗಿದು ಕೇಳುತ್ತೇವೆ, ನಿಮ್ಮೆಲ್ಲಾ ಸಮಸ್ಯೆಗಳ ಕುರಿತು ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ರೈತರಲ್ಲಿ ಮನವಿ ಮಾಡಿದ್ದಾರೆ.
ರೈತರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ, ಅವರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎನ್ನುವ ಭರವಸೆಯನ್ನೂ ನೀಡುತ್ತೇವೆ, ದಯವಿಟ್ಟು ಮಾತುಕತೆಗೆ ಬನ್ನಿ ಎಂದು ಮೋದಿ ಕೇಳಿಕೊಂಡಿದ್ದಾರೆ.
ನಮ್ಮ ತಲೆ ಬಾಗಿಸಿ ಕೈಮುಗಿದು ನಮ್ರತೆಯಿಂದ ಅವರ ಭಯವನ್ನು ಹೋಗಲಾಡಿಸಲು ಸಹಾಯ ಮಾಡುತ್ತೇವೆ, ಕಾಳಜಿ ಇದ್ದರೆ ಮಾತುಕತೆಗೆ ದಯವಿಟ್ಟು ಬನ್ನಿ ಎಂದಿದ್ದಾರೆ.

ರಾತ್ರೋ ರಾತ್ರಿ ತಂದ ಕಾನೂನುಗಳಲ್ಲ
ಕೃಷಿ ಸುಧಾರಣೆಗಳ ಬಗ್ಗೆ ಪ್ರತಿ ಸರ್ಕಾರವು ಕಳೆದ ಎರಡು ದಶಕಗಳಿಂದ ಚರ್ಚಿಸುತ್ತಿದೆ. ಈ ಕಾನೂನನ್ನು ರಾತ್ರೋ ರಾತ್ರಿ ತಂದಿಲ್ಲ, ಕಳೆದ 22 ವರ್ಷಗಳಲ್ಲಿ ಪ್ರತಿ ಸರ್ಕಾರ, ರಾಜ್ಯ ಇವುಗಳ ಬಗ್ಗೆ ಚರ್ಚಿಸಿದೆ. ರೈತರ ಸಂಘಟನೆ, ಕೃಷಿ ತಜ್ಞರು, ಅರ್ಥಶಾಸ್ತ್ರಜ್ಞರು, ವಿಜ್ಞಾನಿಗಳು ಮತ್ತು ಪ್ರಗತಿಪರರ ಜತೆ ಕೂತು ಸಮಾಲೋಚನೆಗಳು ನಡೆದಿವೆ. ಇಂದು ಕಾನೂನು ವಿರೋಧಿಸುವ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲೇ ಈ ಕಾನೂನುಗಳ ಕುರಿತು ಭರವಸೆ ನೀಡಿದ್ದವು ಎಂದರು.

ಎಲ್ಲಾ ಕ್ರೆಡಿಟ್ ಮೋದಿಗೆ ಸಿಗುತ್ತೆ ಎನ್ನುವ ಆತಂಕ
ಈ ಪಕ್ಷಗಳಿಗೆ ಇಂದು ನೋವುಂಟಾಗಿದೆ, ಅವರು ತಮ್ಮನ್ನು ತಾವು ಕೇಳಿಕೊಳ್ಳುತ್ತಿದ್ದಾರೆ, ನಮಗೆ ಏನು ಮಾಡಲು ಸಾಧ್ಯವಿಲ್ಲ, ಮೋದಿ ಹೇಗೆ ಮಾಡಬಹುದು, ಕ್ರೆಡಿಟ್ ಅವರಿಗೆ ಏಕೆ ಸಿಗಬೇಕು, ಅದಕ್ಕೆ ಪ್ರತಿಕ್ರಿಯೆಯೆಂದರೆ ನೀವು ಕ್ರೆಡಿಟ್ನ್ನು ಇಟ್ಟುಕೊಳ್ಳುತ್ತೀರಿ, ನಾನು ನಿಮ್ಮ ಸ್ವಂತ ಪ್ರಣಾಳಿಕೆಗೆ ಮನ್ನಣೆ ನೀಡುತ್ತೇನೆ.

ನನಗೆ ಯಾವ ಕ್ರೆಡಿಟ್ ಬೇಡ
ನನಗೆ ಯಾವ ಕ್ರೆಡಿಟ್ ಬೇಡ, ರೈತರ ಜೀವನ ಸುಧಾರಿಸಬೇಕು ಎಂಬುದಷ್ಟೇ ಬಯಸುತ್ತೇನೆ. ರೈತರ ದಾರಿ ತಪ್ಪಿಸುವುದನ್ನು ನಿಲ್ಲಿಸಿ ಎಂದು ಕೇಳಿಕೊಂಡಿದ್ದಾರೆ.
ಇಂದು ನಾನು ನಿಮ್ಮ ಬಗ್ಗೆ ಯಾವುದೇ ಕಾಳಜಿ ಇಲ್ಲದ ಅಥವಾ ನಿಜವಾದ ಕಾಳಜಿ ಹೊಂದಿದವರನ್ನು ಬಹಿರಂಗಪಡಿಸಲು ಬಯಸುತ್ತೇನೆ, ನಮ್ಮ ರೈತರನ್ನು ಈ ಕೃಷಿ ಕಾನೂನುಗಳ ಹೆಸರಿನಲ್ಲಿ ತಪ್ಪುದಾರಿಗೆಳೆಯುವ ಮತ್ತು ಪ್ರಚೋದಿಸಲ್ಪಡುವ ಎಲ್ಲರಿಗೂ ನಾನು ಎಚ್ಚರಿಸಲು ಬಯಸುತ್ತೇನೆ ಎಂದರು.

ಭಯವನ್ನು ಹುಟ್ಟಿಸುವ ಮೂಲಕ ಭರವಸೆ ಗಳಿಸುವ ಯತ್ನ
ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ 2018ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಯನ್ನು ಉಲ್ಲೇಖಿಸಿದರು. ಕಾಂಗ್ರೆಸ್ ಸುಳ್ಳು ಹೇಳುವುದು ಬಿಟ್ಟು ಬೇರೇನೂ ಮಾಡುವುದಿಲ್ಲ, ಭಯವನ್ನು ಹುಟ್ಟಿಸುವ ಮೂಲಕ ತಮ್ಮ ಭರವಸೆಯಲ್ಲಿಟ್ಟುಕೊಳ್ಳಲು ಭಯಸುತ್ತಾರೆ ಎಂದು ದೂರಿದರು.












Click it and Unblock the Notifications