ಅನುರಾಗ್ ತಿವಾರಿ ಅವರು ಸತ್ತಿದ್ದು ಉಸಿರುಗಟ್ಟಿದ್ದರಿಂದ!
ನವದೆಹಲಿ, ಮೇ 23 : ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ನಿಗೂಢ ಸಾವಿನ ತನಿಖೆಯನ್ನು ಸಿಬಿಐಗೆ ಉತ್ತರಪ್ರದೇಶ ಸರಕಾರ ವಹಿಸುತ್ತಿದ್ದಂತೆ, ಅಚ್ಚರಿಯ ಸಂಗತಿಯೊಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ.
ಅದೇನೆಂದರೆ, ಅವರು ಸಾವಿಗೀಡಾಗಿದ್ದು ಉಸಿರುಗಟ್ಟಿದ್ದರಿಂದ. 6 ದಿನಗಳ ಹಿಂದೆ ದೆಹಲಿಯ ಹಜರತ್ ಗಂಜ್ ನಲ್ಲಿ ಅವರು ಶವವಾಗಿ ಪತ್ತೆಯಾದಾಗ, ತಿವಾರಿಯವರು ಹೃದಯಾಘಾತದಿಂದ ಸತ್ತಿದ್ದರು ಎಂದು ಹೇಳಲಾಗಿತ್ತು. ಮರಣೋತ್ತರ ಪರೀಕ್ಷೆಯ ಪ್ರಥಮ ವರದಿಯ ನಂತರ ಈ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಂತಾಗಿದೆ.
ಮರಣೋತ್ತರ ಪರೀಕ್ಷೆಯ ಪ್ರಥಮ ವರದಿ ಬಂದ ನಂತರ, ತಿವಾರಿ ಅವರದು ಸಹಜ ಸಾವಲ್ಲ, ಅದೊಂದು ಕೊಲೆ ಎಂದು ಅವರ ಕುಟುಂಬದವರು ಹೇಳುತ್ತಲೇ ಬಂದಿದ್ದಕ್ಕೆ ಭಾರೀ ಪುಷ್ಟಿ ಸಿಕ್ಕಂತಾಗಿದೆ. ಆದರೆ, ಕರ್ನಾಟಕದ ಮಂತ್ರಿಗಳು ಮತ್ತು ಅಧಿಕಾರಿಗಳು ತಿವಾರಿ ಸಾವಿನ ಹಿಂದೆ ಯಾರದೂ ಕೈವಾಡವಿಲ್ಲ ಎಂದು ಹೇಳುತ್ತಿದ್ದಾರೆ. [ಅನುರಾಗ್ ತಿವಾರಿ ಸಾವು, ಈಗ ಮರ್ಡರ್ ಕೇಸ್]
ಅನುರಾಗ್ ತಿವಾರಿ ಅವರು ತೀರಿಕೊಂಡ ದಿನ ಅವರೊಂದಿಗೆ ಅವರ ಸಹೋದ್ಯೋಗಿಯೊಬ್ಬರು ಅವರ ಜೊತೆಗಿದ್ದಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ, ಅನುರಾಗ್ ಅವರು ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು, ಅವರ ಮೇಲೆ ಸಾಕಷ್ಟು ಒತ್ತಡಗಳಿದ್ದವು ಎಂದು ಆರೋಪಿಸಿರುವುದು ಕೂಡ ಈ ಅನುಮಾನಗಳಿಗೆ ಕಾರಣವಾಗಿದೆ.
ಬೀದರ್ ನಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದ ತಿವಾರಿ ಅವರ ದೇಹದ ಕೆಲ ಭಾಗಗಳನ್ನು, ರಕ್ತವನ್ನು ಮತ್ತು ಹೃದಯವನ್ನು ಪರೀಕ್ಷೆಗಾಗಿ ತೆಗೆದಿರಿಸಲಾಗಿದ್ದು, ಅವುಗಳ ಪರೀಕ್ಷೆಯ ನಂತರ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆಯಿದೆ. [ಮತ್ತೊಬ್ಬ ಡಿಕೆ ರವಿ? ಅನುರಾಗ್ ಸಾವಿನಲ್ಲೂ ರಾಜಕೀಯ]