ಉಪೇಂದ್ರ ಥರಾ 'ನಾನವನಲ್ಲ, ನಾನವನಲ್ಲ' ಎನ್ನುವ ಸಂಸದ !
ಮಹಾರಾಷ್ಟ್ರದ ಶಿವಸೇನೆಯ ಸಂಸದ ರವೀಂದ್ರ ಗಾಯಕ್ವಾಡ್ ಅವರ ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಗಾಯಕ್ವಾಡ್ ಸರ್ ನೇಮ್ ಹೊಂದಿರುವ ಮಹಾರಾಷ್ಟ್ರದ ಸಂಸದ ಸುನಿಲ್ ಗೂ ಪ್ರಕರಣದ ಬಿಸಿ ತಟ್ಟಿದೆ.
ನವದೆಹಲಿ, ಮಾರ್ಚ್ 31: ಯಾರೋ ಮಾಡಿದ ತಪ್ಪಿಗೆ ಹೆಚ್ಚು ಕಡಿಮೆ ಅದೇ ವ್ಯಕ್ತಿಯ ಹೆಸರನ್ನೇ ಹೋಲುವ ಬೇರೆ ವ್ಯಕ್ತಿಗಳೂ ಕಷ್ಟಗಳನ್ನು ಎದುರಿಸಬೇಕಾಗುವುದು ಸಾಮಾನ್ಯ ಸಂಗತಿ. ಅಂಥ ವ್ಯಕ್ತಿಗಳು 'ಬುದ್ಧಿವಂತ' ಚಿತ್ರದಲ್ಲಿ ಉಪೇಂದ್ರ ಹೇಳುವಂತೆ 'ನಾನವನಲ್ಲ, ನಾನವನಲ್ಲ..' ಎಂದು ಹೇಳುತ್ತಲೇ ತಾವು ಒಳಗಾಗಿರುವ ಅನವಶ್ಯಕ ತನಿಖೆಗಳು, ಪರೀಕ್ಷೆಗಳನ್ನು ದಾಟಿ ಬರುವ ಹೊತ್ತಿಗೆ ಸಾಕು ಸಾಕಾಗಿರುತ್ತದೆ.
ಮಹಾರಾಷ್ಟ್ರದ ಶಿವಸೇನೆಯ ಸಂಸದ ರವೀಂದ್ರ ಗಾಯಕ್ವಾಡ್ ಅವರ ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ದೊಡ್ಡ ರಾದ್ಧಾಂತ ಮಾಡಿಕೊಂಡಿರುವುದು ಎಲ್ಲರಿಗೂ ತಿಳಿದ ವಿಚಾರ. ರವೀಂದ್ರ ಗಾಯಕ್ವಾಡ್ ಅವರನ್ನು ಏರ್ ಇಂಡಿಯಾ ಸೇರಿದಂತೆ ಭಾರತದಲ್ಲಿ ವಿಮಾನ ಯಾನ ಸೇವೆ ನೀಡುತ್ತಿರುವ ಎಲ್ಲಾ ಸಂಸ್ಥೆಗಳೂ ಬಹಿಷ್ಕಾರ ಮಾಡಿವೆ. ಅದರ ಬಿಸಿ ಈಗ, ಮಹಾರಾಷ್ಟ್ರದ ಮತ್ತೊಬ್ಬ ಸಂಸದ ಸುನಿಲ್ ಗಾಯಕ್ವಾಡ್ ಅವರಿಗೂ ತಟ್ಟಿದೆ.
ಸುನಿಲ್ ಗಾಯಕ್ವಾಡ್ ಅವರು ಲಾಥೂರ್ ಕ್ಷೇತ್ರದ ಸಂಸದ. ಬಿಜೆಪಿಗೆ ಸೇರಿದವರು. ಆದರೆ, ಇವರಿಗೆ ಈಗ ಹೊಸ ಸಮಸ್ಯೆ ತಲೆದೋರಿದೆ. ಅವರ ಹೆಸರಿನ ಜತೆಯಿರುವ 'ಗಾಯಕ್ವಾಡ್' ಹಾಗೂ 'ಮಹಾರಾಷ್ಟ್ರದ ಸಂಸದ' ಎಂಬ ಪದನಾಮ ಅವರನ್ನು ಏರ್ ಪೋರ್ಟ್ ಗಳಲ್ಲಿ ನಾನಾ ತೊಂದರೆಗೆ ಈಡು ಮಾಡುತ್ತಿವೆಯಂತೆ.
ಈ ಬಗ್ಗೆ ಅವರು ವಿಮಾನ ಯಾನ ಸಚಿವಾಲಯಕ್ಕೂ ದೂರು ನೀಡಿರುವ ಅವರು ಅವರು ಪಡುತ್ತಿರುವ ಕಷ್ಟಗಳ ಬಗ್ಗೆ ವಿವರಣೆ ನೀಡಿದ್ದಾರೆ. ಸುನಿಲ್ ಅವರ ಸಹಾಯಕರು ಇವರಿಗೆ ಟಿಕೆಟ್ ಬುಕ್ ಮಾಡಲು ಹೋದಾಗ ಅವರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ತಮ್ಮನ್ನು ಅಗತ್ಯಕ್ಕಿಂತ ಹೆಚ್ಚಾಗಿ ಪರೀಕ್ಷಿಸಲಾಗುತ್ತದೆ. ನಾನು ನನ್ನೊಂದಿಗೆ ಹಲವಾರು ಗುರುತಿನ ಚೀಟಿಗಳನ್ನು ಕೊಂಡೊಯ್ಯಬೇಕಾಗಿದೆ. ಪ್ರತಿಬಾರಿಯೂ ಇಂಥ ಸಾಕಷ್ಟು ಪರೀಕ್ಷೆಗಳು ನಡೆದ ನಂತರವೇ ನನಗೆ ವಿಮಾನದೊಳಕ್ಕೆ ಬಿಡಲಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಇಷ್ಟಕ್ಕೇ ಅವರ ಗೋಳು ಮುಗಿಯುವುದಿಲ್ಲ. ಕೆಲವು ವಿಮಾನಗಳಲ್ಲಿ ನಾನು ಮೊದಲ ಸಾಲಿನ ಸೀಟುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಟಿಕೆಟ್ ಬುಕ್ ಮಾಡಿದರೆ, ವಿಮಾನ ನಿಲ್ದಾಣ ತಲುಪಿದಾಗ ನನಗೆ ಕೊನೆಯ ಸಾಲಿನ ಆಸನಗಳಲ್ಲಿ ಕೂರಿಸಲಾಗುತ್ತಿದೆ ಎಂದೂ ಅವರು ದೂರಿದ್ದಾರೆ.
ಪಾಪ, ಯಾರೋ ಮಾಡಿದ ತಪ್ಪಿಗೆ, ಆ ವ್ಯಕ್ತಿಯ ಸರ್ ನೇಮ್ ಇಟ್ಟುಕೊಂಡಿದ್ದಕ್ಕೆ ಸುನಿಲ್ ಗಾಯಕ್ವಾಡ್ ಅವರು ಹೀಗೆ ನಾನಾ ರೀತಿಯ ಫಜೀತಿಗಳನ್ನು ಎದುರಿಸಬೇಕಾಗಿದೆ.