Get Updates
Get notified of breaking news, exclusive insights, and must-see stories!

K. Annamalai: ಕೆ. ಅಣ್ಣಾಮಲೈ ಕೈ ತಪ್ಪಲಿದೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ

ಚೆನ್ನೈ, ಏಪ್ರಿಲ್ 01: ತಮಿಳುನಾಡು ರಾಜ್ಯದಲ್ಲಿ ಹಲವು ರಾಜಕೀಯ ಬೆಳವಣಿಗೆ ನಡೆಯುತ್ತಿದೆ. 2026ರ ವಿಧಾನಸಭೆ ಚುನಾವಣೆಗೆ ದಿ. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ನಿರೀಕ್ಷೆ ಇದೆ. ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಡಲಿದ್ದಾರೆ? ಎಂಬ ಸುದ್ದಿಗಳು ಹಬ್ಬಿವೆ.

ಈ ಕುರಿತು Indianexpress ನಲ್ಲಿ exclusive ವರದಿಯೊಂದು ಪ್ರಕಟವಾಗಿದೆ. ಕಳೆದ ವಾರ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ನವದೆಹಲಿಯಲ್ಲಿ ಕೇಂದ್ರ ಸಚಿವ, ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಭೇಟಿಯಾಗಿದ್ದರು. ಈ ಭೇಟಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮೈತ್ರಿಯ ಕುರಿತು ಕುತೂಹಲ ಮೂಡಿಸಿದೆ.

Annamalai May Step Down As Tamil Nadu BJP Chief

2023ರಲ್ಲಿ ರಾಜಕೀಯ ಅಭಿಪ್ರಾಯಗಳು ಭಿನ್ನವಾದ ಕಾರಣ ತಮಿಳುನಾಡಿನಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿ ಮುರಿದುಬಿದ್ದಿತ್ತು. ವರದಿಯಂತೆ ಇದಕ್ಕೆ ಮುಖ್ಯ ಕಾರಣ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ. ಈಗ ಪುನಃ ಮೈತ್ರಿ ಮಾಡಿಕೊಳ್ಳಬೇಕಾದರೆ ಎಡಪ್ಪಾಡಿ ಕೆ. ಪಳನಿಸ್ವಾಮಿ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಕೆ. ಅಣ್ಣಾಮಲೈ ನಡೆ ಮುಂದೇನು?; 2026ರ ಚುನಾವಣೆಯನ್ನು ಬಿಜೆಪಿ ಮತ್ತು ಎಐಎಡಿಎಂಕೆ ಒಟ್ಟಾಗಿ ಎದುರಿಸಬೇಕಾದರೆ ನಾಯಕತ್ವದಲ್ಲಿ ಬದಲಾವಣೆ ಅನಿವಾರ್ಯವಾಗಿದೆ. ಏಕೆಂದರೆ ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹಾಗೂ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಒಂದೇ ಸಮುದಾಯಕ್ಕೆ ಸೇರಿದ್ದಾರೆ.

Annamalai May Step Down As Tamil Nadu BJP Chief

ಅಮಿತ್ ಶಾ ಮತ್ತು ಕೇಂದ್ರ ನಾಯಕರನ್ನು ದೆಹಲಿಯಲ್ಲಿ ಭೇಟಿಯಾಗಿದ್ದ ಕೆ. ಅಣ್ಣಾಮಲೈ ಈ ಕುರಿತು ಸಹ ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಬಿಜೆಪಿ ಮತ್ತು ಎಐಎಡಿಎಂಕೆ ನಡುವಿನ ಮೈತ್ರಿಯ ಮೊದಲ ಹೆಜ್ಜೆಯೇ ಕೆ. ಅಣ್ಣಾಮಲೈ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದು ಎಂದು ಅಂದಾಜಿಸಲಾಗುತ್ತಿದೆ.

40 ವರ್ಷದ ಕೆ. ಅಣ್ಣಾಮಲೈ ಬಿಜೆಪಿ ಪಕ್ಷದ ಪಾಲಿಗೆ ಭವಿಷ್ಯದಲ್ಲಿ ರಾಜ್ಯ ರಾಜಕೀಯದಲ್ಲಿ ಬಹಳ ಮುಖ್ಯವಾಗಿದ್ದಾರೆ. ಅದರಲ್ಲೂ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್, ನಟ ವಿಜಯ್ ಎದುರಿಸಲು ಬಿಜೆಪಿಗೆ ಯುವ ನಾಯಕರ ಅಗತ್ಯವಿದೆ. ಆದ್ದರಿಂದ ಕೆ. ಅಣ್ಣಾಮಲೈ ಕೆಳಗಿಳಿಸಲು ಬಿಜೆಪಿ ನಾಯಕರು ಒಪ್ಪುತ್ತಾರೆಯೇ? ಎಂಬುದು ಸದ್ಯದ ಪ್ರಶ್ನೆ.

ರಾಜ್ಯ ಸರ್ಕಾರದ ವಿರುದ್ಧದ ಹಲವು ಹೋರಾಟದಲ್ಲಿ ಕೆ. ಅಣ್ಣಾಮಲೈ ಸಾಕಷ್ಟು ಪ್ರಭಾವಿಯಾಗಿ ಕೆಲಸ ಮಾಡಿದ್ದಾರೆ. ಆದರೆ ಬಿಜೆಪಿ ರಾಜ್ಯದಲ್ಲಿ ರಾಜಕೀಯವಾಗಿ ಇದುವರೆಗೂ ಯಶಸ್ಸು ಕಂಡಿಲ್ಲ. ಈಗ ಕೆ. ಅಣ್ಣಾಮಲೈ ದೆಹಲಿ ನಾಯಕರ ಭರವಸೆ ನಂಬಲಿದ್ದಾರೆ, ಪಕ್ಷದ ಭವಿಷ್ಯಕ್ಕಾಗಿ ಪಕ್ಷದ ತಂತ್ರವನ್ನು ಒಪ್ಪಲಿದ್ದಾರೆ "ದೆಹಲಿ ನನಗೆ ಉತ್ತಮ ಭವಿಷ್ಯದ" ಭರವಸೆ ಕೊಟ್ಟಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.

"ಪಕ್ಷದ ನಿಷ್ಠೆ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅಧ್ಯಕ್ಷ ಸ್ಥಾನ ಇರಲಿ, ಪಕ್ಷದ ಸಾಮಾನ್ಯ ಕಾರ್ಯಕರ್ತನ ಸ್ಥಾನ ಇರಲಿ. ಪಕ್ಷಕ್ಕಾಗಿ ಸದಾ ಕೆಲಸ ಮಾಡುತ್ತೇನೆ. ಅದರಲ್ಲಿ ಯಾವುದೇ ಅನುಮಾನ ಬೇಡ" ಎಂಬ ಸಂದೇಶವನ್ನು ಅಣ್ಣಾಮಲೈ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ನೀಡಿದ್ದಾರೆ.

ತಮಿಳುನಾಡಿನ ಬಿಜೆಪಿ ನಾಯಕರೊಬ್ಬರು ಮಾತನಾಡಿ, "ಕೆ. ಅಣ್ಣಾಮಲೈ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲಿ ಅಥವ ಸ್ಥಾನ ಬಿಟ್ಟುಕೊಡಲಿ. ಬಿಜೆಪಿಯ ರಾಜ್ಯ ರಾಜಕಾರಣದ ಭವಿಷ್ಯದ ದೃಷ್ಟಿಯಲ್ಲಿ ಅವರೊಬ್ಬ ಪ್ರಭಾವಿ ನಾಯಕ. ಅವರು ಕೇಂದ್ರದಲ್ಲಿ ಯಾವುದೇ ಹುದ್ದೆ ಪಡೆಯಲಿ ಅಥವ ರಾಜ್ಯದಲ್ಲಿಯೇ ಬೇರೆ ಹುದ್ದೆಯಲ್ಲಿ ಇರಲಿ. ಅವರ ಹೋರಾಟಗಳು ಹಾಗೆಯೇ ಮುಂದುವರೆಯಲಿವೆ" ಎಂದು ಹೇಳಿದ್ದಾರೆ.

ಕೆ. ಅಣ್ಣಾಮಲೈ ರಾಜೀನಾಮೆ ನೀಡಿದರೆ ಅವರ ಸ್ಥಾನ ಯಾರಿಗೆ? ಎಂಬುದು ಸದ್ಯದ ಪ್ರಶ್ನೆ. ಒಂದು ವೇಳೆ ಅಣ್ಣಾಮಲೈ ರಾಜೀನಾಮೆ ಕೊಟ್ಟರೆ ನೈನಾರ್ ನಾಗೇಂದ್ರನ್ ರಾಜ್ಯಾಧ್ಯಕ್ಷರಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಈ ಹಿಂದೆ ಎಐಎಡಿಎಂಕೆ ಪಕ್ಷದಲ್ಲಿದ್ದ ನಾಗೇಂದ್ರನ್ ತಿರುನಲ್ವೇಲಿ ಭಾಗದ ಪ್ರಭಾವಿ ನಾಯಕ.

ನೈನಾರ್ ನಾಗೇಂದ್ರನ್ ತೇವಾರ್ ಸಮುದಾಯಕ್ಕೆ ಸೇರಿದವರು. ಎಐಎಡಿಎಂಕೆ ಪಕ್ಷದ ನಾಯಕಿ ವಿ.ಕೆ. ಶಶಿಕಲಾ ಸಹ ಇದೇ ಸಮಯದಾಯಕ್ಕೆ ಸೇರಿದವರು. ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ ಪಕ್ಷದಲ್ಲಿ ತೇವಾರ್ ಸಮುದಾಯ ಬಹಳಷ್ಟು ಪ್ರಭಾವವನ್ನು ಹೊಂದಿತ್ತು. ನೈನಾರ್ ನಾಗೇಂದ್ರನ್, ಎಡಪ್ಪಾಡಿ ಕೆ. ಪಳನಿಸ್ವಾಮಿ ಮೂಲಕ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಮಾಡಬಹುದು ಎಂಬುದು ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷದ ಮೈತ್ರಿಯ ಮೊದಲ ಚಿಂತನೆಯಾಗಿದೆ.

ಬಿಜೆಪಿ ಹೈಕಮಾಂಡ್ ನಾಯಕರು ಕೆ. ಅಣ್ಣಾಮಲೈ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಡುವುದು ಹಿನ್ನಡೆ ಎಂದು ಭಾವಿಸುವುದಿಲ್ಲ. ಪಕ್ಷದ ಪುನಃ ಸಮನ್ವಯಕ್ಕೆ ಇದನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ಹೇಳಿದ್ದಾರೆ. "ಬಿಜೆಪಿ ಪಶ್ಚಿಮ ತಮಿಳುನಾಡು ಮೀರಿ ರಾಜ್ಯದಲ್ಲಿ ತನ್ನ ಹಿಡಿತವನ್ನು ಬಲಪಡಿಸಲು ಬಯಸಿದೆ. ಅದಕ್ಕಾಗಿ ನಾಗೇಂದ್ರನ್ ಅವರಂತಹ ತೇವಾರ್ ಸಮುದಾಯದ ನಾಯಕರ ಅಗತ್ಯವಿದೆ. ಎಐಎಡಿಎಂಕೆ-ಬಿಜೆಪಿ ಮೈತ್ರಿ ಮತ್ತು ಪಕ್ಷದ ಮುಂದಿನ ಕಾರ್ಯತಂತ್ರಗಳ ಕುರಿತು ಅಮಿತ್ ತಂತ್ರಗಳನ್ನು ಮಾಡುತ್ತಿದ್ದಾರೆ" ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ಭಾನುವಾರ ಕೊಯಮತ್ತೂರಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ, ಎಐಎಡಿಎಂಕೆ ಮೈತ್ರಿ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. "ಕೇಂದ್ರ ಸಚಿವ ಅಮಿತ್ ಶಾ ಕಾರ್ಯಕ್ರಮವೊಂದರಲ್ಲಿ ಕೆಲವು ದಿನಗಳ ಹಿಂದೆ ಈ ಕುರಿತು ಮಾತನಾಡಿದ್ದಾರೆ. ನೀವು ಪಕ್ಷದ ತೀರ್ಮಾನವನ್ನು ಅಂತಿಮ ಎಂದು ತಿಳಿಯಿರಿ" ಎಂದು ಹೇಳಿದರು.

"ತಮಿಳುನಾಡು ರಾಜಕೀಯದ ಬಗ್ಗೆ ಸಾಮಾನ್ಯ ಕಾರ್ಯಕರ್ತನಾಗಿ, ರಾಜ್ಯಾಧ್ಯಕ್ಷನಾಗಿ ನಾನು ವಿವರವಾದ ಅಧ್ಯಯನ ನಡೆಸಿದ್ದು, ಅದರ ವರದಿಯನ್ನು ಹೈಕಮಾಂಡ್ ನಾಯಕರಿಗೆ ನೀಡಿದ್ದೇನೆ. ರಾಜ್ಯದ ಪ್ರಸ್ತುತ ಸ್ಥಿತಿ ಸೇರಿದಂತೆ ವಿವಿಧ ವಿಚಾರವನ್ನು ಅದಲ್ಲಿ ಉಲ್ಲೇಖಿಸಿದ್ದು, ಹೇಗೆ ಪಕ್ಷ ಮುಂದುವರೆಯಬೇಕು ಎಂದು ಅಭಿಪ್ರಾಯ ತಿಳಿಸಿದ್ದೇನೆ" ಎಂದು ಅಣ್ಣಾಮಲೈ ತಿಳಿಸಿದ್ದಾರೆ.

"ತಮಿಳುನಾಡು ರಾಜ್ಯವನ್ನು 8 ವಲಯವಾಗಿ ಮಾಡಿಕೊಂಡು ಬಿಜೆಪಿ ತನ್ನ ಗಮನವನ್ನು ಕೇಂದ್ರಿಕರಿಸಬೇಕಿದೆ. ಪಶ್ಚಿಮ ವಲಯದ 54 ಸೀಟುಗಳಲ್ಲಿ, ದಕ್ಷಿಣ ವಲಯದ 60 ಸೀಟುಗಳಲ್ಲಿ ಪಕ್ಷ ಗಮನಾರ್ಹವಾದ ಪ್ರಭಾವವನ್ನು ಹೊಂದಿದೆ. 150 ಸೀಟುಗಳಲ್ಲಿ ಜಯಗಳಿಸಲು ಇನ್ನೂ ಮೂರು ವಲಯದಲ್ಲಿ ಪಕ್ಷವನ್ನು ಸದೃಢಗೊಳಿಸಬೇಕು. 180-190 ಸೀಟುಗಳನ್ನು ಪಡೆಯಲು ಏನು ಮಾಡಬೇಕು ಎಂದು ವರದಿಯಲ್ಲಿ ವಿವರಿಸಿದ್ದೇನೆ" ಎಂದು ಅಣ್ಣಾಮಲೈ ಹೇಳಿದ್ದಾರೆ.

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಸಹ ಜುಲೈ 8, 2021ರಂದು ಕೆ. ಅಣ್ಣಾಮಲೈ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿತು. ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ವಿರುದ್ಧ ಕೆ. ಅಣ್ಣಾಮಲೈ ರಾಜ್ಯದಲ್ಲಿ ಹಲವು ಹೋರಾಟಗಳನ್ನು ಮಾಡುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+