ಅಂಕಿತಾ ಭಂಡಾರಿ ಹತ್ಯೆ ಪ್ರಕರಣ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ: ಉತ್ತರಾಖಂಡ ಸಿಎಂ
ಡೆಹ್ರಾಡೂನ್ ಸೆಪ್ಟೆಂಬರ್ 28: ಋಷಿಕೇಶ್ ಬಳಿಯ ರೆಸಾರ್ಟ್ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಅಂಕಿತಾ ಭಂಡಾರಿ ಕೊಲೆ ಪ್ರಕರಣವನ್ನು ತ್ವರಿತವಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಜೊತೆಗೆ ಉಚ್ಛಾಟಿತ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಮತ್ತು ಇಬ್ಬರು ಉದ್ಯೋಗಿಗಳಿಂದ ಹತ್ಯೆಗೀಡಾದ ಹದಿಹರೆಯದ ಅಂಕಿತಾ ಭಂಡಾರಿ ಕುಟುಂಬಕ್ಕೆ ಸಿಎಂ ಸಿಂಗ್ ಧಾಮಿ ಅವರು 25 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದರು.
ಉತ್ತರಾಖಂಡದ ರೆಸಾರ್ಟ್ನ ಬಳಿ ಇರುವ ಕಾಲುವೆಗೆ ತಳ್ಳಿ ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ರೆಸಾರ್ಟ್ ಮಾಲೀಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಮತ್ತು ರೆಸಾರ್ಟ್ನ ಇಬ್ಬರು ಉದ್ಯೋಗಿಗಳಾದ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಸೇರಿದ್ದಾರೆ. ಬಿಜೆಪಿ ನಾಯಕನ ಮಗ ಪುಲ್ಕಿತ್ ಆರ್ಯ ಅಂಕಿತಾ ಹತ್ಯೆಯ ಆರೋಪಿಗಳಲ್ಲಿ ಪ್ರಮುಖರಾಗಿದ್ದಾರೆ.
ಮಾತ್ರವಲ್ಲದೆ ರೆಸಾರ್ಟ್ನಲ್ಲಿ ಮಾದಕ ವ್ಯಸನ ಮತ್ತು ವೇಶ್ಯಾವಾಟಿಕೆ ವ್ಯಾಪಕವಾಗಿತ್ತು ಎಂದು ಈ ಹಿಂದೆ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಆರೋಪಿಸಿದ್ದಾರೆ.
ಉತ್ತರಾಖಂಡದ 19 ವರ್ಷದ ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಕೊಲೆ ಪ್ರಕರಣ ಸಾಕಷ್ಟು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅಂಕಿತ ಸಾವಿನ ಬಳಿಕ ಆಕೆ ಕೆಲಸ ಮಾಡುತ್ತಿದ್ದ ರೆಸಾರ್ಟ್ ಅನ್ನು ಸಿಎಂ ಆದೇಶದಂತೆ ಧ್ವಂಸಗೊಳಿಸಲಾಗಿದೆ. ರೆಸಾರ್ಟ್ ಅನ್ನೂ ಏಕಾಏಕಿ ಧ್ವಂಸ ಮಾಡಿರುವುದು ಸಾಕ್ಷ್ಯಗಳ ನಾಶ ಮಾಡುವ ಪ್ರಯತ್ನ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಅಂಕಿತಾ ಮರಣೋತ್ತರ ವರದಿ ಬಹಿರಂಗಗೊಂಡಿದ್ದು, ಅಂಕಿತಾಳ ಮೇಲೆ ಅತ್ಯಾಚಾರ ನಡೆದಿದೆ ಎನ್ನುವುದಕ್ಕೆ ಯಾವುದೇ ಕುರುಹುಗಳಿಲ್ಲ. ಬದಲಿಗೆ ಆಕೆಯ ದೇಹದ ಮೇಲೆ ಬಲವಾದ ಗಾಯದ ಗುರುತುಗಳು ಕಂಡುಬಂದಿದೆ ಎಂದು ಮರಣೋತ್ತರ ವರದಿಯಲ್ಲಿ ತಿಳಿಸಲಾಗಿದೆ.
ಈ ನಡುವೆ ರೆಸಾರ್ಟ್ನ ಮಾಜಿ ನೌಕರರಾದ ರಿಷಿತಾ, "ರೆಸಾರ್ಟ್ ಆಡಳಿತ ಅತಿಥಿಗಳಿಗೆ ಅಕ್ರಮ ಮದ್ಯ, ಗಾಂಜಾ ಮತ್ತು ಇತರ ಮಾದಕ ದ್ರವ್ಯಗಳನ್ನು ಮತ್ತು ಹುಡುಗಿಯರನ್ನು ಸಹ ನೀಡುತ್ತಿತ್ತು" ಎಂದು ಆರೋಪಿಸಿದ್ದಾರೆ. ಅಲ್ಲಿ ತನ್ನ ಪತಿ ವಿವೇಕ್ ಮನೆಗೆಲಸಗಾರನಾಗಿ ಕೆಲಸ ಮಾಡುತ್ತಿದ್ದರೆ, ಎರಡು ತಿಂಗಳ ಹಿಂದೆ ಅಲ್ಲಿ ರಿಷಿತಾ ಕೆಲಸ ಮಾಡುತ್ತಿದ್ದರು. ಅಂಕಿತಾ ಭಂಡಾರಿ ಆಗಸ್ಟ್ನಲ್ಲಿ ಸೇರುವ ಮೊದಲು ರಿಷಿತಾ ಅವರು ರೆಸಾರ್ಟ್ ತೊರೆದಿದ್ದರು ಎಂದು ಹೇಳಿಕೊಂಡಿದ್ದಾರೆ. ಪೌರಿ ಜಿಲ್ಲೆಯ ಋಷಿಕೇಶ್ ಬಳಿ ಅಂಕಿತಾ ವೇಶ್ಯಾವಾಟಿಕೆ ಜಾಲದ ಭಾಗವಾಗಲು ನಿರಾಕರಿಸಿದ ನಂತರ ಆಕೆಯನ್ನು ಕೊಲೆ ಮಾಡಲಾಯಿತು ಎಂದು ಪೊಲೀಸ್ ತನಿಖೆಯಲ್ಲಿ ಇಲ್ಲಿಯವರೆಗೆ ಕಂಡುಬಂದಿದೆ. ಆದರೆ ಡ್ರಗ್ಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ.