ಆಂಧ್ರ -ತಮಿಳುನಾಡು ಸಂಬಂಧಕ್ಕೆ ಬೆಂಕಿ ಹಚ್ಚಿದ ರಕ್ತ ಚಂದನ
ಚೆನ್ನೈ, ಏ.8: ಆಂಧ್ರಪ್ರದೇಶ ಹಾಗೂ ತಮಿಳುನಾಡು ನಡುವಿನ ಸೌಹಾರ್ದ ಸಂಬಂಧಕ್ಕೆ ರಕ್ತಚಂದನ ಪ್ರಕರಣ ಬೆಂಕಿ ಹಚ್ಚಿದೆ. ಮಂಗಳವಾರ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಎನ್ ಕೌಂಟರ್ ಹೆಸರಿನಲ್ಲಿ ಬಲಿಯಾದ ಕೂಲಿ ಕಾರ್ಮಿಕರಿಗೆ ನ್ಯಾಯ ಸಿಗಬೇಕು ಎಂದು ತಮಿಳುನಾಡಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ನಡುವೆ ಬಸ್ ಸಂಚಾರ ವ್ಯತ್ಯಯಗೊಂಡಿದೆ. ಎನ್ ಕೌಂಟರ್ ಹೆಸರಿನಲ್ಲಿ ಅಮಾಯಕ ಕೂಲಿ ಕಾರ್ಮಿಕರನ್ನು ಆಂಧ್ರ ಪೊಲೀಸರು ಸಾಯಿಸಿದ್ದಾರೆ ಎಂಬ ಕೂಗೆದ್ದಿರುವ ಹಿನ್ನಲೆಯಲ್ಲಿ ಈ ಬಗ್ಗೆ ಕೂಡಲೇ ಗಮನ ಹರಿಸುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ತಮಿಳುನಾಡು ಸಿಎಂ ಪನ್ನೀರ್ ಸೆಲ್ವಂ ಮನವಿ ಮಾಡಿಕೊಂಡಿದ್ದಾರೆ. [ಚಿತ್ತೂರಿನಲ್ಲಿ ಎನ್ ಕೌಂಟರ್ 20 ಸ್ಮಗ್ಲರ್ಸ್ ಬಲಿ]
ರಕ್ತಚಂದನ ಮರಗಳ್ಳರ ಮೇಲೆ ಆಂಧ್ರಪ್ರದೇಶದ ಸ್ಪೆಷಲ್ ಟಾಸ್ಕ್ ಫೋರ್ಸ್ ಹಾಗೂ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಸಾಮೂಹಿಕ ಹತ್ಯೆ ಮಾಡಿದ್ದರು. ಈ ಘಟನೆಯನ್ನು ಮಾನವ ಹಕ್ಕುಗಳ ಆಯೋಗ ಖಂಡಿಸಿತ್ತು. ಮೃತರ ಪೈಕಿ 12ಜನ ತಿರುನಲ್ವೇಲಿ ಹಾಗೂ ವೆಲ್ಲೂರು ಜಿಲ್ಲೆಯವರಾಗಿದ್ದಾರೆ. ಕೂಲಿ ಕಾರ್ಮಿಕರನ್ನು ಹತ್ಯೆ ಮಾಡುವ ಬದಲು ಬಂಧಿಸಿ ವಿಚಾರಣೆ ನಡೆಸಬಹುದಾಗಿತ್ತು ಎಂದು ತಮಿಳುನಾಡಿನ ಜನ ವಾದಿಸುತ್ತಿದ್ದಾರೆ.

ಬಿಗಿ ಭದ್ರತೆ : ತಮಿಳುನಾಡಿನಿಂದ ಕಡಪ, ಚಿತ್ತೂರು, ಕರ್ನೂಲು ಹಾಗೂ ನೆಲ್ಲೂರು ಭಾಗಕ್ಕೆ ಸಂಚರಿಸುವ ಬಸ್ ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಪ್ರತಿನಿತ್ಯ 60-80ಬಸ್ ಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ.ಚೆನ್ನೈನಲ್ಲಿರುವ ಆಂಧ್ರಮೂಲದ ಬ್ಯಾಂಕ್, ಉದ್ಯಮ ಸಂಸ್ಥೆಗಳಿಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.
ಘಟನೆ ಖಂಡಿಸಿದ ತಮಿಳುನಾಡಿನ ಪಕ್ಷಗಳು: ಕಾಂಗ್ರೆಸ್ಸಿನ ಎಳಂಗೋವನ್, ಡಿಎಂಕೆ ಕರುಣಾನಿಧಿ, ಪಿಎಂಕೆ ರಾಮದಾಸ್, ಎಂಡಿಎಂಕೆ ವೈಕೋ ಸೇರಿದಂತೆ ಎಲ್ಲಾ ಪಕ್ಷಗಳ ಪ್ರಮುಖ ಮುಖಂಡರು ಆಂಧ್ರಪೊಲೀಸರ ಕೃತ್ಯವನ್ನು ಖಂಡಿಸಿದ್ದಾರೆ.

ಘಟನೆಗೂ ಮುನ್ನ: 2014ರ ಮೇ ತಿಂಗಳಿನಲ್ಲಿ ಮೂವರು ಸ್ಮಗ್ಲರ್ ಗಳನ್ನು ಪೊಲೀಸರು ಕೊಂದು ಹಾಕಿದ್ದರು. 2013ರಲ್ಲಿ ಸುಮಾರು 3,000 ಸ್ಮಗ್ಲರ್ಸ್ ಬಂಧಿಸಿ 2,025 ಟನ್ ರಕ್ತ ಚಂದನ ವಶಪಡಿಸಿಕೊಂಡಿದ್ದರು.
ವಿದೇಶದಲ್ಲಿ ರಕ್ತಚಂದನದ ಬೆಲೆ ಪ್ರತಿ ಟನ್ನಿಗೆ 25 ಲಕ್ಷದಿಂದ 1 ಕೋಟಿ ರು ತನಕ ರೇಟ್ ಇದೆ. ಕಳೆದ ವರ್ಷ ರಕ್ತಚಂದನದ ಜಾಗತಿಕ ಹರಾಜಿನಲ್ಲಿ ಆಂಧ್ರಪ್ರದೇಶಕ್ಕೆ 1,000 ಕೋಟಿ ರು ಆದಾಯ ಬಂದಿತ್ತು. (ಐಎಎನ್ ಎಸ್)












Click it and Unblock the Notifications