ಮಗನ ಚೊಚ್ಚಲ ಹುಟ್ಟುಹಬ್ಬದ ದಿನವೇ ದುಷ್ಕರ್ಮಿಗಳಿಂದ ಹತನಾದ ತಂದೆ
ಮೀರತ್, ಜುಲೈ 18: ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕೇಕ್ ನಲ್ಲಿ ಕಂಡೂ ಕಾಣದಂಥ ಸಾಲು, ಹ್ಯಾಪಿ ಬರ್ಥಡೇ ಡಿಯರ್ ಸನ್! ಮೀರತ್ ನ ತಂದೆಯೊಬ್ಬರು ತಮ್ಮ ಮುದ್ದು ಮಗನ ಚೊಚ್ಚಲ ಹುಟ್ಟುಹಬ್ಬಕ್ಕೆಂದು ಖರೀದಿಸಿದ್ದ ಕೇಕ್, ಮನೆ ಸೇರಲೇ ಇಲ್ಲ.
ಆ ಕೇಕ್ ಹೊತ್ತು ತಂದಿದ್ದ ತಂದೆಯೂ ಮಗನ ಜನ್ಮದಿನದಂದೇ ಇಹಲೋಕ ತ್ಯಜಿಸಿಬಿಟ್ಟಿದ್ದರು! ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕೇಕ್ ನಂತೆ ಆ ಕುಟುಂಬದ ಕನಸೂ ಚೆಲ್ಲಾಪಿಲ್ಲಿಯಾಗಿದೆ!

ಹೌದು, ಮಗನ ಹುಟ್ಟು ಹಬ್ಬಕ್ಕೆಂದು ಕೇಕ್ ಖರೀದಿಸಿ, ಮನೆಗೆ ಕೊಂಡೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿ ಅಸುನೀಗಿದ ಘಟನೆ ಉತ್ತರ ಪ್ರದೇಶದ ಮೀರತ್ ನ ಮುಜಾಫರ್ ನಗರಲ್ಲಿ ನಡೆದಿದೆ.
ಕೊಲೆಯಾದ ನಾಸಿಮ್ ಅಹ್ಮದ್(32), ಪಿಂಕಿ ಕುಮಾರಿ ಎಂಬುವವರನ್ನು ಪ್ರೀತಿಸಿ, 2015 ರಲ್ಲಿ ಮದುವೆಯಾಗಿದ್ದರು. ಆದರೆ ಈ ಸಂಬಂಧ ಪಿಂಕಿ ಕುಮಾರಿ ಕುಟುಂಬಕ್ಕೆ ಇಷ್ಟವಿರಲಿಲ್ಲ. ಅಂತರ್ಮತೀಯ ವಿವಾಹವನ್ನು ಒಪ್ಪದ ಪಿಂಕಿ ಮನೆಯವರಿಂದ ಇಬ್ಬರ ಜೀವಕ್ಕೂ ಅಪಾಯವಿದೆ ಎಂಬ ಕಾರಣಕ್ಕೆ ಇಬ್ಬರೂ ಉತ್ತರ ಪ್ರದೇಶವನ್ನು ಬಿಟ್ಟು ಆಂಧ್ರಪ್ರದೇಶಕ್ಕೆ ಬಂದು ವಾಸವಿದ್ದರು.
ಖುಷಿಯಾಗಿಯೇ ಬದುಕುತ್ತಿದ್ದ ದಂಪತಿಗಳಿಗೆ ಒಂದು ಮಗುವಾಯಿತು. ಆ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬವನ್ನು ತನ್ನ ಮನೆಯಲ್ಲಿಯೇ ಮಾಡಬೇಕು ಎಂಬುದು ನಾಸಿಮ್ ಆಸೆ. ಅದಕ್ಕೆಂದೇ ನಾಸಿಮ್, ಪಿಂಕಿ ಮತ್ತು ಅವರ ಮಗು ಮುಜಾಫರ್ ನಗರಕ್ಕೆ ಬಂದಿದ್ದರು.
ಜುಲೈ 17 ರಂದು ಮಗುವಿನ ಹುಟ್ಟುಹಬ್ಬಕ್ಕೆ ಕೇಕ್ ತೆಗೆದುಕೊಂಡು, ಬೈಕಿನಲ್ಲಿ ಮನೆಗೆ ಮರಳುತ್ತಿದ್ದ ನಾಸಿಮ್ ನನ್ನು ಅಡ್ಡಗಟ್ಟಿದ ಮೂವರು ದುಷ್ಕರ್ಮಿಗಳು ಗುಂಡುಹೊಡೆದು ಸಾಯಿಸಿ ಪರಾರಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಾಸಿಮ್ ಕುಟುಂಬ, ಪಿಂಕಿಯ ತಂದೆ ರಾಜೇಶ್ ಕುಮಾರ್, ಆಕೆಯ ಸಹೋದರ ಪ್ರದೀಪ್ ಮೇಲೆ ದೂರು ದಾಖಲಿಸಿದೆ. ಘಟನೆಯ ನಂತರ ಈ ಪ್ರದೇಶದಲ್ಲಿ ಕೋಮು ಸಂಘರ್ಷ ಆರಂಭವಾಗಿದೆ.












Click it and Unblock the Notifications