Biparjoy: ಗುಜರಾತ್ ಪರಿಸ್ಥಿತಿ ಭೀಕರ, ಅಮಿತ್ ಶಾ ತೆಲಂಗಾಣ ಪ್ರವಾಸ ರದ್ದು!
ಗುಜರಾತ್: ಭಾರತಕ್ಕೆ ಮತ್ತೊಂದು ವಿಪತ್ತು ಎದುರಾಗಿದ್ದು, 'ಬಿಪರ್ಜಾಯ್' ಸೈಕ್ಲೋನ್ ಅಬ್ಬರಕ್ಕೆ ಗುಜರಾತ್ ತತ್ತರಿಸಿ ಹೋಗಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ತಮ್ಮ ಮಹತ್ವದ ತೆಲಂಗಾಣ ಪ್ರವಾಸ ರದ್ದು ಮಾಡಿದ್ದು, ತವರು ರಾಜ್ಯ ಗುಜರಾತ್ಗೆ ತೆರಳಲಿದ್ದಾರೆ. ಈ ಮೂಲಕ ಗುಜರಾತ್ ಜನರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಹೆಗಲು ನೀಡುತ್ತಿದೆ.
ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ ಬಿಪರ್ಜಾಯ್ ಚಂಡಮಾರುತ ಈಗ ಮುಂಬೈ ಕರಾವಳಿಗೆ ಸಮೀಪದಲ್ಲೇ ಇದೆ. ನಾಳೆ ಅಂದ್ರೆ ಜೂನ್ 15 ರಂದು ಮಾಂಡವಿ & ಕರಾಚಿಯ ಮಧ್ಯೆ 'ಬಿಪರ್ಜಾಯ್' ಸೈಕ್ಲೋನ್ ಅಪ್ಪಳಿಸಿ, ಭೀಕರ ಭೂಕುಸಿತ ಎದುರಾಗುವ ಸಾಧ್ಯತೆ ಇದೆ. ಅಲ್ಲದೆ ಮುಂದಿನ 24 ಗಂಟೆಗಳಲ್ಲಿ ಸೌರಾಷ್ಟ್ರದ ಕಚ್ಛ್ ಭಾಗದಲ್ಲೂ ಭಾರಿ ಪ್ರಮಾಣದ ಮಳೆಯಾಗಲಿದೆ ಎಂದು ಮುಂಬೈ ಐಎಂಡಿ ಮುಖ್ಯಸ್ಥ ಸುನಿಲ್ ಕಾಂಬ್ಳೆ ಅವರು ಮಾಹಿತಿ ನೀಡಿದ್ದಾರೆ. ಹೀಗಾಗಿ ಅಮಿತ್ ಶಾ ತಮ್ಮ ಮಹತ್ವದ ತೆಲಂಗಾಣ ಪ್ರವಾಸವನ್ನೂ ರದ್ದು ಮಾಡಿ, ತವರು ರಾಜ್ಯವಾದ ಗುಜರಾತ್ಗೆ ಪ್ರಯಾಣ ಬೆಳೆಸುತ್ತಿದ್ದಾರೆ ಎನ್ನಲಾಗಿದೆ.

ಕೇಂದ್ರ ಸರ್ಕಾರ ಫುಲ್ ಅಲರ್ಟ್!
ಸದ್ಯದ ಮಾಹಿತಿ ಪ್ರಕಾರ 'ಬಿಪರ್ಜಾಯ್' ಸೈಕ್ಲೋನ್ ಅಪ್ಪಳಿಸಲಿರುವ ಪ್ರದೇಶಗಳ ಬಗ್ಗೆ ಅಮಿತ್ ಶಾ ಮಾಹಿತಿ ಪಡೆದಿದ್ದಾರೆ. ಗ್ರೌಂಡ್ ರಿಪೋರ್ಟ್ ಜೊತೆಗೆ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೂಡ ಅವರು ಕೈಗೊಳ್ಳುತ್ತಿದ್ದಾರೆ. ಕೇಂದ್ರದ ಮೋದಿ ಸರ್ಕಾರ ಈಗಾಗಲೇ ಈ ಭಾಗದ ಜನರಿಗೆ ಸಂಪೂರ್ಣ ನೆರವು ನೀಡಲು ಸಜ್ಜಾಗಿದೆ. ಇದಕ್ಕೆ ಈಗಾಗಲೇ ಸಾವಿರಾರು ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ನೇಮಕವಾಗಿದ್ದಾರೆ. ಅಲ್ಲದೆ ಪರಿಸ್ಥಿತಿ ವಿಕೋಪಕ್ಕೆ ಹೋದರೆ ಮತ್ತಷ್ಟು ಪಡೆಗಳನ್ನ ಕೂಡ ಕರೆಸಿಕೊಳ್ಳಲು ಸಿದ್ಧತೆಗಳನ್ನ ಕೈಗೊಳ್ಳಲಾಗಿದೆ. ಈ ಹೊತ್ತಲ್ಲೇ ಅಮಿತ್ ಶಾ ಕೂಡ ಗುಜರಾತ್ಗೆ ಕಡೆಗೆ ತೆರಳುತ್ತಿದ್ದಾರೆ.
ಏನೆಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ?
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಜೂನ್ 15ರ ಸಂಜೆ ಹೊತ್ತಿಗೆಲ್ಲಾ 'ಬಿಪರ್ಜಾಯ್' ಚಂಡಮಾರುತ ಗುಜರಾತ್ಗೆ ಅಪ್ಪಳಿಸುವ ಸಾಧ್ಯತೆ ಇದೆ. ಈ ಕಾರಣಕ್ಕೆ ಎನ್ಡಿಆರ್ಎಫ್ನ 18, ಎಸ್ಡಿಆರ್ಎಫ್ನ 13 ತಂಡಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. 45,000 ಮಂದಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಮುದ್ರದ ಬಳಿ ಯಾರನ್ನೂ ಬಿಡುತ್ತಿಲ್ಲ. ಗುಜರಾತ್ ಮಾತ್ರವಲ್ಲದೆ ಅರಬ್ಬಿ ಸಮುದ್ರದ ಕರಾವಳಿಯ ಹಲವು ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಇರಲಿದೆ. ಹೀಗಾಗಿ ಮುಂದಿನ ಕೆಲವು ದಿನಗಳ ಕಾಲ ಸಮುದ್ರದ ಬಳಿ ಯಾರೂ ಸುಳಿಯದಂತೆ ನೋಡಿಕೊಳ್ಳಲಾಗುತ್ತಿದೆ.

ಪಾಕಿಸ್ತಾನಕ್ಕೂ ಕಾದಿದೆ ಮಹಾ ಕಂಟಕ
ಇಷ್ಟೆಲ್ಲಾ ಭೀತಿಯ ನಡುವೆ ಗುಜರಾತ್ ಕರಾವಳಿಯಲ್ಲಿ ಭೀಕರ ಗಾಳಿ, ಅಲೆಗಳು ಬೀಸುತ್ತಿವೆ. ಹೀಗಾಗಿ ಗುಜರಾತ್ ರಾಜ್ಯದ 6 ಜಿಲ್ಲೆಗಳಲ್ಲಿ ಈ ಚಂಡಮಾರುತ ವಿನಾಶ ಉಂಟುಮಾಡುವ ಸಾಧ್ಯತೆ ಇದೆ. ಇದೇ ಕಾರಣಕ್ಕಾಗಿ ಎಲ್ಲೋ ಅಲರ್ಟ್ ನೀಡಿದೆ ಹವಾಮಾನ ಇಲಾಖೆ. ಇದರ ಜೊತೆ ಮುನ್ನೆಚ್ಚರಿಕೆ ಕ್ರಮವಾಗಿ ರೈಲು ಓಡಾಟ ರದ್ದುಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗುಜರಾತ್ನ ಪೋರಬಂದರ್, ಗಿರ್ ಸೋಮನಾಥ್ ಮತ್ತು ವಲ್ಸಾದ್ ಜಿಲ್ಲೆಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡ ರವಾನಿಸಲಾಗಿದೆ. ಪಾಕಿಸ್ತಾನದ ಸಿಂಧ್ ಮತ್ತು ಬಲೂಚಿಸ್ತಾನದ ಜನರಿಗೂ ಅಲ್ಲಿನ ಸರ್ಕಾರ ಮುನ್ನೆಚ್ಚರಿಕೆ ನೀಡಿದೆ.
ಒಟ್ನಲ್ಲಿ 'ಬಿಪರ್ಜಾಯ್' ಅಬ್ಬರದ ನಡುವೆ ಕೇಂದ್ರ ಸರ್ಕಾರ ಅಲರ್ಟ್ ಆಗಿದೆ. ಹಾಗೇ ಅಮಿತ್ ಶಾ ಅವರ ತೆಲಂಗಾಣ ಪ್ರವಾಸ ಕ್ಯಾನ್ಸಲ್ ಆಗಿರೋದು ಕುತೂಹಲ ಕೆರಳಿಸಿದೆ. ಅಲ್ಲದೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ತಮ್ಮ ತವರು ರಾಜ್ಯದ ಪರಿಸ್ಥಿತಿ ಕುರಿತು ಅವಲೋಕನ ಮಾಡಿದ್ದಾರೆ. ಈ ನಡುವೆ ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳದಲ್ಲಿ ಕೂಡ ಚಂಡಮಾರುತದ ಪ್ರಭಾವ ಇರಲಿದೆ ಹಾಗೇ ಗೋವಾ ರಾಜ್ಯದಲ್ಲಿ ಪ್ರವಾಸಿಗರಿಗೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.. ಕನಿಷ್ಠ ಮುಂದಿನ 2-3 ದಿನಗಳ ಕಾಲ ಇದೇ ಕಾರಣಕ್ಕೆ ಮಳೆ ಕೂಡ ಅಬ್ಬರಿಸುವುದು ಪಕ್ಕಾ ಎನ್ನಲಾಗಿದೆ.












Click it and Unblock the Notifications