ಅಮರನಾಥ ಯಾತ್ರೆ: ಉಧಾಂಪುರ ರೈಲು ಮಾರ್ಗದಲ್ಲಿ ವಿಶೇಷ ಭದ್ರತೆ
ಉಧಾಂಪುರ, ಜೂನ್ 29: ಅಮರನಾಥ ಯಾತ್ರೆಗೆ ತೆರಳುತ್ತಿರುವ ಯಾತ್ರಿಕರಿಗೆ ಜಮ್ಮು ಕಾಶ್ಮೀರದ ಉಧಾಂಪುರ ರೈಲ್ವೇ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಜೂನ್ 27 ರಿಂದ ಅಮರನಾಥ ಯಾತ್ರೆ ಆರಂಭವಾಗಿದ್ದು, ಜಮ್ಮು ಕಾಶ್ಮೀರದಾದ್ಯಂತ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ನಿನ್ನೆ(ಜೂನ್ 28) ಕೆಲ ಕಾಲ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
'ಉಧಾಂಪುರದಲ್ಲಿ ಅಮರನಾಥ ಯಾತ್ರಿಕರು ರೈಲ್ವೇ ಮಾರ್ಗವನ್ನು ಉಪಯೋಗಿಸಬೇಕಾಗುತ್ತದೆ. ಆದ್ದರಿಂದ ಈ ಮಾರ್ಗದಲ್ಲಿ ಸಾಕಷ್ಟು ಭದ್ರತೆಯನ್ನು ಕಲ್ಪಿಸಿದ್ದೇವೆ' ಎಂದು ಇಲ್ಲಿನ ಹಿರಿಯ ಪೊಲೀಸ್ ಅಧಿಕಾರಿ(ರೈಲ್ವೇಸ್), ರಂಜಿತ್ ಸಿಂಗ್ ಸಂಬ್ಯಾಲ್ ತಿಳಿಸಿದ್ದಾರೆ.
ಉಗ್ರರು ರೈಲ್ವೇ ಹಳಿಗಳನ್ನು ತಪ್ಪಿಸುವ ಮೂಲಕ ಭಾರೀ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಬಯಲಾದ ಹಿನ್ನೆಲೆಯಲ್ಲಿ ಮತ್ತಷ್ಟು ಭದ್ರತೆ ಕಲ್ಪಿಸಲಾಗಿದೆ.

ಸಮುದ್ರ ಮಟ್ಟದಿಂದ 3880 ಮೀ ಎತ್ತರದಲ್ಲಿರುವ ಅಮರನಾಥ ಗುಹಾಂತರ ದೇವಾಲಯದ ಪ್ರವಾಸಕ್ಕೆ ಈ ಬಾರಿ 2 ಲಕ್ಷಕ್ಕೂ ಹೆಚ್ಚು ಭಕ್ತರು ಹೆಸರು ನೋಂದಾಯಿಸಿದ್ದು, ಮೊದಲ ಬ್ಯಾಚಿನ ಯಾತ್ರೆ ಈಗಾಗಲೇ ಆರಂಭವಾಗಿದೆ.
ಕಳೆದ ವರ್ಷ ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಸಂಭವಿಸಿದ್ದ ಉಗ್ರದಾಳಿಯಲ್ಲಿ ಒಂಬತ್ತು ಯಾತ್ರಿಕರು ಬಲಿಯಾಗಿದ್ದರಿಂದ ಈ ಬಾರಿ ಮತ್ತಷ್ಟು ಬಿಗಿ ಭದ್ರತೆ ಕಲ್ಪಿಸಲಾಗಿದೆ.












Click it and Unblock the Notifications