ಯೆಸ್ ಬ್ಯಾಂಕ್ ನಲ್ಲಿ ತಗಲಾಕಿಕೊಂಡಿದೆ 545 ಕೋಟಿ ರೂಪಾಯಿ 'ದೇವರ ದುಡ್ಡು'
ಮುಂಬೈ, ಮಾರ್ಚ್ 9: 2004ರಲ್ಲಿ ರಾಣಾ ಕಪೂರ್ ಮತ್ತು ಅಶೋಕ್ ಕಪೂರ್ ಹುಟ್ಟುಹಾಕಿದ ಯೆಸ್ ಬ್ಯಾಂಕ್ ಅನ್ನು ರಿಸರ್ವ್ ಬ್ಯಾಂಕ್ ಸೂಪರ್ ಸೀಡ್ ಮಾಡಿಕೊಂಡ ನಂತರ, ಬ್ಯಾಂಕಿಗೆ ಸಂಬಂಧಿಸಿದ ಅವ್ಯವಹಾರದ ಸುದ್ದಿಗಳು ಹೊರಬೀಳುತ್ತಲೇ ಇದೆ.
ಬ್ಯಾಂಕ್ ಠೇವಣಿದಾರರು ತಮ್ಮ ಹಣ ವಾಪಸ್ ಸಿಗುತ್ತೋ ಇಲ್ಲವೋ ಎಂದು ಚಿಂತಾಕ್ರಾಂತರಾಗಿದ್ದಾರೆ. ಈ ನಡುವೆ, ಯೆಸ್ ಬ್ಯಾಂಕ್ ಗ್ರಾಹಕರು ಯಾವುದೇ ಬ್ಯಾಂಕಿನ ಎಟಿಎಂ ನಿಂದ ಹಣ ವಿದ್ ಡ್ರಾ ಮಾಡಬಹುದು ಎಂದು ಬ್ಯಾಂಕಿನ ಅಧಿಕೃತ ಅಕೌಂಟಿನಿಂದ ಟ್ವೀಟ್ ಮಾಡಲಾಗಿದೆ.
ಅಕ್ರಮ ಹಣಕಾಸು ವರ್ಗಾವಣೆ ಆರೋಪದಲ್ಲಿ ಭಾನುವಾರ (ಮಾ 8) ನಸುಕಿನಲ್ಲಿ ಯೆಸ್ ಬ್ಯಾಂಕಿನ ಸಂಸ್ಥಾಪಕ, ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಇನ್ನು, ಅವರ ಮಗಳನ್ನು ದೇಶ ಬಿಟ್ಟು ಹೋಗದಂತೆ, ಮುಂಬೈ ವಿಮಾನ ನಿಲ್ದಾಣದಿಂದ ವಾಪಸ್ ಕಳುಹಿಸಲಾಗಿದೆ.
ಹೆಚ್ಚಿನ ಬಡ್ಡಿದರದ ಆಮಿಷಕ್ಕೆ ಸಾರ್ವಜನಿಕರು ಒಳಗಾಗಿ, ಖಾಸಗಿ ಬ್ಯಾಂಕ್/ಕೋಪರೇಟಿವ್ ಬ್ಯಾಂಕ್ ಗಳಲ್ಲಿ ಹೂಡಿಕೆ ಮಾಡುವುದನ್ನು ಕೇಳಿದ್ದೇವೆ. ಆದರೆ, ದೇಶದ ಐತಿಹಾಸಿಕ ದೇವಾಲಯದ ಅಧಿಕಾರಿಗಳು, ಸರಕಾರೀ ಸ್ವಾಮ್ಯದ ಬ್ಯಾಂಕ್ ನಲ್ಲಿ ಹಣ ಇಡದೇ, ಖಾಸಗಿ ಬ್ಯಾಂಕ್ ನಲ್ಲಿ ಠೇವಣಿಯಿಟ್ಟು ಈಗ ಫಚೀತಿಗೆ ಸಿಲುಕಿಕೊಂಡಿದ್ದಾರೆ?

ಯೆಸ್ ಬ್ಯಾಂಕ್ನಲ್ಲೂ ಟಿಟಿಡಿ 1300 ಕೋಟಿ ರುಪಾಯಿ ಠೇವಣಿ
ತಿರುಪತಿಯ ಟಿಟಿಡಿ ದೇವಾಲಯಕ್ಕೆ ಬರುವ ಆದಾಯವನ್ನು ಮಂಡಳಿ, ಠೇವಣಿ ರೂಪದಲ್ಲಿ ವಿವಿಧ ಬ್ಯಾಂಕ್ಗಳಲ್ಲಿ ಇರಿಸುತ್ತದೆ. ಅದೇ ರೀತಿ, ಯೆಸ್ ಬ್ಯಾಂಕ್ನಲ್ಲೂ ಟಿಟಿಡಿ 1,300 ಕೋಟಿ ರುಪಾಯಿಗೂ ಹೆಚ್ಚು ಮೊತ್ತದ ಹಣವನ್ನು ಇಟ್ಟಿತ್ತು. ಕಳೆದ ಅಕ್ಟೋಬರ್ ತಿಂಗಳಲ್ಲಿ ಟಿಟಿಡಿ, ಆ ಹಣವನ್ನು ವಾಪಸ್ ಪಡೆದು ಬೇರೆಡೆ ಹೂಡಿಕೆ ಮಾಡಿತ್ತು. ಇದು, ಯೆಸ್ ಬ್ಯಾಂಕ್ನ ಆರ್ಥಿಕ ದಿವಾಳಿತನದ ಮುನ್ಸೂಚನೆ ದೇಶದ ಶ್ರೀಮಂತ ದೇವಸ್ಥಾನವಾದ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿಗೆ (ಟಿಟಿಡಿ) ಮುಂಚಿತವಾಗಿಯೇ ಸಿಕ್ಕಿತ್ತಾ ಎನ್ನುವ ಸಂಶಯ ಬರುವಂತೆ ಮಾಡಿತ್ತು.

ಪುರಿ ಶ್ರೀ ಜಗನ್ನಾಥ ಮಂದಿರದದ 545 ಕೋಟಿ ರೂಪಾಯಿ
ಒಡಿಸ್ಸಾದ ಐತಿಹಾಸಿಕ ಪುರಿ ಶ್ರೀ ಜಗನ್ನಾಥ ಮಂದಿರದ ಆಡಳಿತ ಮಂಡಳಿ 545 ಕೋಟಿ ರೂಪಾಯಿಯನ್ನು ಯೆಸ್ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದೆ. ಈಗ ಬ್ಯಾಂಕಿನ ವಹಿವಾಟಿನ ಮೇಲೆ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಿರುವ ಹಿನ್ನಲೆಯಲ್ಲಿ ಜಗನ್ನಾಥ ದೇವಾಲಯ ತೀವ್ರ ತೊಂದರೆಯನ್ನು ಅನುಭವಿಸುತ್ತಿದೆ. ದೈನಂದಿನ ಕೈಂಕರ್ಯಗಳಿಗೆ ತೊಂದರೆಯಾಗುತ್ತಿದೆ. ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕು ಎನ್ನುವ ಆಗ್ರಹ ಕೇಳಿಬಂದಿದೆ.

ಖಾಸಗಿ ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟಿರುವುದಕ್ಕೆ ಆಡಳಿತ ಮಂಡಳಿಯಲ್ಲಿ ಭಿನ್ನಾಭಿಪ್ರಾಯ
ಭಾರೀ ಮೊತ್ತದಲ್ಲಿ ದೇವಾಲಯಕ್ಕೆ ದೇಣಿಗೆ ಹರಿದು ಬರುತ್ತಿರುವುದರಿಂದ ಜಗನ್ನಾಥ ಮಂದಿರ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ವಹಿವಾಟು ನಡೆಸದೇ ಖಾಸಗಿ ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟಿರುವುದಕ್ಕೆ ಆಡಳಿತ ಮಂಡಳಿಯ ಸದಸ್ಯರಲ್ಲಿ ಭಿನ್ನಾಭಿಪ್ರಾಯ ತಲೆದೋರಿದೆ. ಯೆಸ್ ಬ್ಯಾಂಕ್ ನಿಂದ ಹಣ ಹಿಂದಕ್ಕೆ ಪಡೆಯುವುದು ಹೇಗೆ ಎನ್ನುವ ಟೆನ್ಸನ್ ನಲ್ಲಿ ದೇವಾಲಯದ ಅಧಿಕಾರಿಗಳಿದ್ದಾರೆ.

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಲ್ಲಿ ಮನವಿ
ಬಿಜು ಜನತಾದಳದ ಉಪಾಧ್ಯಕ್ಷ ಪ್ರಸನ್ನ ಆಚಾರ್ಯ, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಲ್ಲಿ ಮನವಿ ಮಾಡಿ, "ವಿಶೇಷ ಅಧಿಕಾರದಡಿಯಲ್ಲಿ, ಯೆಸ್ ಬ್ಯಾಂಕ್ ನಲ್ಲಿ ತಗಲಾಕಿಕೊಂಡಿರುವ ದೇವಾಲಯದ ಹಣವನ್ನು ಹಿಂದಕ್ಕೆ ಪಡೆದುಕೊಳ್ಲಲು ಅನುಮತಿ ನೀಡಬೇಕು" ಎಂದು ಮನವಿ ಮಾಡಿದ್ದಾರೆ. "ಯೆಸ್ ಬ್ಯಾಂಕ್ ನಲ್ಲಿರುವ ದೇವಾಲಯದ ದುಡ್ಡು ಭಕ್ತರು ಕೊಟ್ಟ ದೇಣಿಗೆಯ ಹಣ" ಎಂದು ಆಚಾರ್ಯ ಹೇಳಿದ್ದಾರೆ.












Click it and Unblock the Notifications