ಅಜ್ಮೇರ್ ಸ್ಫೋಟ ಪ್ರಕರಣ: ಆರೆಸ್ಸೆಸ್ ಮಾಜಿ ಕಾರ್ಯಕರ್ತನಿಗೆ ಜೀವಾವಧಿ ಶಿಕ್ಷೆ
ಅಜ್ಮೇರ್ ದ ದರ್ಗಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ನ ಮಾಜಿ ಕಾರ್ಯಕರ್ತರಾದ ದೇವೇಂದ್ರ ಗುಪ್ತ ಹಾಗೂ ಭವೇಶ್ ಪಟೇಲ್ ಅವರಿಗೆ ವಿಶೇಷ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ.
ನವದೆಹಲಿ, ಮಾರ್ಚ್ 22: ಅಜ್ಮೇರ್ ನ ದರ್ಗಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಲಯವು ಬುಧವಾರ ಮಹತ್ವದ ತೀರ್ಪು ಪ್ರಕಟಿಸಿದೆ. ಆರೆಸ್ಸೆಸ್ ನ ಮಾಜಿ ಕಾರ್ಯಕರ್ತರಾದ ದೇವೇಂದ್ರ ಗುಪ್ತ ಹಾಗೂ ಭವೇಶ್ ಪಟೇಲ್ ತಪ್ಪಿತಸ್ಥರೆಂದು ಪರಿಗಣಿಸಲಾಗಿದ್ದು, ಇಬ್ಬರಿಗೂ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ.
2007ರ ಅಕ್ಟೋಬರ್ 11ರಂದು ಸೂಫಿ ಸಂತ ಖ್ವಾಜಾ ಮೊಯಿದ್ದೀನ್ ಛಿಷ್ಟಿ ಅವರ ದರ್ಗಾದಲ್ಲಿ ಬಾಂಬ್ ಸ್ಫೋಟಿಸಿ, ಮೂವರು ಸಾವನ್ನಪ್ಪಿದ್ದರು. 17ಕ್ಕೂ ಅಧಿಕ ಮಂದಿಗೆ ಗಾಯಗಳಾಗಿತ್ತು.
ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸ್ವಾಮಿ ಆಸೀಮಾನಂದ ಅವರಿಗೆ ಪ್ರಕರಣದಿಂದ ಖುಲಾಸೆಗೊಳಿಸಿ ಕೋರ್ಟ್ ಅದೇಶಿಸಿರುವುದನ್ನು ಸ್ಮರಿಸಬಹುದು.[ಅಜ್ಮೀರ್ ಸ್ಫೋಟ ಪ್ರಕರಣ: ಸ್ವಾಮಿ ಅಸೀಮಾನಂದ ಖುಲಾಸೆ]

ಹಿಂದೂಗಳು ದರ್ಗಾಕ್ಕೆ ಹೋಗಬಾರದು ಎಂಬ ಕಾರಣಕ್ಕಾಗಿ ರಾಜಸ್ತಾನದ ಅಜ್ಮೇರ್ ಚಿಸ್ತಿ ಷರೀಫ್ ದರ್ಗಾದಲ್ಲಿ ಬಾಂಬ್ ಸ್ಫೋಟಿಸಲಾಯಿತು. ಈ ಘಟನೆಯ ಹಿಂದೆ ಹಿಂದೂ ಮುಸ್ಲಿಂ ಸಂಘಟನೆಗಳು ಭಾಗಿಯಾಗಿವೆ ಎಂದು ಶಬರಿಧಾಮ ಆಶ್ರಮದ ಅಸೀಮಾನಂದ ಸ್ವಾಮಿ ತಪ್ಪೊಪ್ಪಿಕೊಂಡಿದ್ದರು. [ಅಜ್ಮೇರ್ ಸ್ಪೋಟದಲ್ಲಿ ಆರ್ ಎಸ್ಎಸ್ ಕೈವಾಡ!]
ರಾಜಸ್ಥಾನ ಪೊಲೀಸರು, ಸಿಬಿಐ, ಎನ್ಐಎ ತನಿಖೆ,ವಿಚಾರಣೆ ನಡೆದ ಬಳಿಕ ಕೋರ್ಟಿನಲ್ಲಿ ಇತ್ತೀಚೆಗೆ ಆಸೀಮಾನಂದ ಪ್ರಕರಣದಿಂದ ಖುಲಾಸೆಗೊಂಡಿದ್ದರು.
ಆರೆಸ್ಸೆಸ್ ಪ್ರಮುಖ ಕಾರ್ಯಕರ್ತ ಇಂದ್ರೇಶ್ ಕುಮಾರ್ ಅವರು ಅಜ್ಮೇರ್ ದರ್ಗಾ, ಮಾಲೇಗಾಂವ್ ಸ್ಫೋಟ, ಹೈದರಾಬಾದ್ ನ ಮೆಕ್ಕಾ ಮಸೀದಿ ಸ್ಫೋಟ ಹಾಗೂ ಸಮ್ ಜೋತಾ ರೈಲು ಸ್ಫೋಟದಲ್ಲಿ ಕೈವಾಡವಿದೆ. ಜೊತೆಗೆ ಆರ್ಎಸ್ಎಸ್ ಪ್ರಚಾರಕ ಸುನೀಲ್ ಜೋಶಿ, ಸಾಧ್ವಿ ಪ್ರಗ್ಯಾಸಿಂಗ್, ಸಂದೀಪ್ ಡಾಂಗೆ, ರಾಮಜೀ ಕಾಲಸಂಗ್ರ ಕೂಡಾ ಸ್ಫೋಟದಲ್ಲಿ ಭಾಗಿಯಾಗಿದ್ದಾರೆ ಎಂದು ಆಸೀಮಾನಂದ ಅವರು 2010ರಲ್ಲೇ ವಿವರಿಸಿದ್ದರು.[ಅಜ್ಮೇರ್ ಸ್ಫೋಟದಲ್ಲಿ ಹಿಂದು ಮುಸ್ಲಿಂ ಕೈವಾಡ]
ಭಯೋತ್ಪಾದನೆಯಲ್ಲಿ ತೊಡಗಿರುವ ಸಂಘದ ತೀವ್ರಗಾಮಿಗಳಿಗೆ ಸಂಘ ಬಿಟ್ಟು ಹೊರನಡೆಯುವಂತೆ ಈಗಾಗಲೇ ಸೂಚಿಸಲಾಗಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಸ್ಪಷ್ಟಪಡಿಸಿದ್ದರು.











Click it and Unblock the Notifications