ಸುಪ್ರೀಂಕೋರ್ಟಿನಲ್ಲಿ ಯುಟರ್ನ್ ಹೊಡೆದ ರಾಹುಲ್ ಗಾಂಧಿ
ನವದೆಹಲಿ, ಸೆ 2: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ವಿರುದ್ಧ ನಾನು ಆಡಿರುವ ಪ್ರತೀ ಮಾತಿಗೂ ನಿನ್ನೆ, ಇಂದು ಮತ್ತು ಮುಂದೆಯೂ ಬದ್ಧನಾಗಿದ್ದೇನೆ ಎನ್ನುವ ಮೂಲಕ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಒಂದು ವಾರದ ಹಿಂದೆ ತಾನು ನೀಡಿದ್ದ ಹೇಳಿಕೆಯಿಂದ ಹಿಂದಕ್ಕೆ ಸರಿದಿದ್ದಾರೆ.
ಚುನಾವಾಣೆಯ ಸಭೆಯೊಂದರಲ್ಲಿ ಮಹಾತ್ಮ ಗಾಂಧಿ ಹತ್ಯೆಗೆ ಆರ್ಎಸ್ಎಸ್ ಕಾರಣ ಎಂದು ರಾಹುಲ್ ಗಾಂಧಿ ಹೇಳಿದ್ದರು. ಇವರ ಹೇಳಿಕೆಯ ವಿರುದ್ದ ಮಹಾರಾಷ್ಟ್ರದ ಭಿವಂಡಿ ಘಟಕದ ಸಂಘದ ಕಾರ್ಯದರ್ಶಿ ನ್ಯಾಯಾಲಯದ ಮೊರೆ ಹೋಗಿ, ಮಾನಹಾನಿ ಮೊಕದ್ದಮೆ ಹೂಡಿದ್ದರು. (ಸ್ವತಂತ್ರ ಸಂಗ್ರಾಮದಲ್ಲಿ ಆರೆಸ್ಸೆಸ್ ಭಾಗವಹಿಸಿಲ್ಲ)
ಆಗ ತನ್ನ ಮೇಲಿನ ಹೇಳಿಕೆಯಿಂದ ಹಿಂದಕ್ಕೆ ಸರಿದಿದ್ದ ರಾಹುಲ್, ಗಾಂಧಿ ಹತ್ಯೆಗೆ ಆರ್ಎಸ್ಎಸ್ ಕಾರಣ ಎಂದು ನಾನು ಹೇಳಿರಲಿಲ್ಲ. ಸಂಘದ ಜೊತೆಗೆ ಸಂಪರ್ಕವಿರುವ ವ್ಯಕ್ತಿಗಳು ಗಾಂಧಿ ಹತ್ಯೆಗೆ ಕಾರಣ ಎಂದು ಹೇಳಿದ್ದೆ ಎಂದು ರಾಹುಲ್ ಗಾಂಧಿ ಸ್ಪಷ್ಟನೆ ನೀಡಿದ್ದರು.
ಈಗ ಮತ್ತೆ ಯುಟರ್ನ್ ಹೊಡಿದಿರುವ ರಾಹುಲ್ ಗಾಂಧಿ, ನಾನು ಆರ್ಎಸ್ಎಸ್ ವಿರುದ್ದ ನೀಡಿದ್ದ ಎಲ್ಲಾ ಹೇಳಿಕೆಗೆ ಬದ್ದನಾಗಿದ್ದೇನೆ. ನ್ಯಾಯಾಲಯದ ವಿಚಾರಣೆ ಎದುರಿಸುವುದಾಗಿ ತಮ್ಮ ಪರ ವಕೀಲ ಕಪಿಲ್ ಸಿಬಲ್ ಮೂಲಕ ಸುಪ್ರೀಂಕೋರ್ಟಿಗೆ ತಿಳಿಸಿದ್ದಾರೆ.
ತಮ್ಮ ಸಂಘಟನೆಯ ಬಗ್ಗೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯಿಂದ ಹಿಂದಕ್ಕೆ ಸರಿದರೆ, ಪ್ರಕರಣ ಕೊನೆಗೊಳಿಸಲು ಸಿದ್ದ ಎಂದು ಆರ್ಎಸ್ಎಸ್ ಪರ ವಕೀಲರು ನ್ಯಾಯಲಯಕ್ಕೆ ಹೇಳಿದ ಬೆನ್ನಲ್ಲೇ, ರಾಹುಲ್ ಗಾಂಧಿಯಿಂದ ಈ ಮೇಲಿನ ಹೇಳಿಕೆ ಬಂದಿದೆ.
ರಾಹುಲ್ ಗಾಂಧಿ ಬೌದ್ದಿಕ ದಿವಾಳಿ, ಆರ್ಎಸ್ಎಸ್ ಲೇವಡಿ..

ಮಾನಹಾನಿ ಪ್ರಕರಣ
ಆರ್ಎಸ್ಎಸ್ ವಿರುದ್ದ ತನ್ನ ಹೇಳಿಕೆಗೆ ಬದ್ದನಾಗಿದ್ದೇನೆಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರಿಂದ, ಆರ್ಎಸ್ಎಸ್ ಹೂಡಿದ್ದ ಮಾನಹಾನಿ ಪ್ರಕರಣ ಕೈಬಿಡುವಂತೆ ರಾಹುಲ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಹಾಜರಾತಿ ವಿನಾಯತಿಗೂ ನೋ ಎಂದ ಕೋರ್ಟ್
ಭಿವಂಡಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ವಿನಾಯತಿ ಕೋರಿ ರಾಹುಲ್ ಸಲ್ಲಿಸಿದ್ದ ಮನವಿಯನ್ನೂ ಕೋರ್ಟ್ ತಿರಸ್ಕರಿಸಿದೆ. ಜೊತೆಗೆ, ಪ್ರಕರಣದ ವಿಚಾರಣೆಯ ಜವಾಬ್ದಾರಿಯನ್ನು ವಿಚಾರಣಾ ಕೋರ್ಟಿಗೆ ಸುಪ್ರೀಂಕೋರ್ಟ್ ನೀಡಿದೆ.

ಏನಿದು ರಾಹುಲ್ ವಿರುದ್ದ ಮಾನಹಾನಿ ಪ್ರಕರಣ
ಮಹಾರಾಷ್ಟ್ರದ ಭಿವಂಡಿಯನ್ನು ಮಾರ್ಚ್ 6, 2014ರಂದು ನಡೆದ ಚುನಾವಣಾ ಸಭೆಯಲ್ಲಿ ಆರ್ಎಸ್ಎಸ್ ಕಾರ್ಯಕರ್ತರು ಗಾಂಧಿಯವರನ್ನು ಹತ್ಯೆಗೈದಿದ್ದು ಎನ್ನುವ ಹೇಳಿಕೆಯನ್ನು ರಾಹುಲ್ ನೀಡಿದ್ದರು. ರಾಹುಲ್ ಹೇಳಿಕೆ ವಿರುದ್ದ ಸಂಘದ ಕಾರ್ಯದರ್ಶಿ ನ್ಯಾಯಾಲಯದ ಮೊರೆ ಹೋಗಿ, ಮಾನಹಾನಿ ಮೊಕದ್ದಮೆ ಹೂಡಿದ್ದರು.

ರಾಹುಲ್ ಗಾಂಧಿ ಬೌದ್ದಿಕ ದಿವಾಳಿ
ಸುಪ್ರೀಂಕೋರ್ಟಿನಲ್ಲಿ ರಾಹುಲ್ ಯುಟರ್ನ್ ಹೊಡೆದಿದ್ದಕ್ಕೆ ಬಿಜೆಪಿ ಮತ್ತು ಆರ್ಎಸ್ಎಸ್, ರಾಹುಲ್ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡಿದೆ. ರಾಹುಲ್ ಗಾಂಧಿ ಬೌದ್ದಿಕ ದಿವಾಳಿಯಾಗಿದ್ದಾರೆಂದು ಆರ್ಎಸ್ಎಸ್ ದೂರಿದೆ.

ಕಾಂಗ್ರೆಸ್ ಸ್ಪಷ್ಟನೆ
ಬಿಜೆಪಿ ಮತ್ತು ಆರ್ಎಸ್ಎಸ್ ದೇಶವನ್ನು ಒಡೆಯಲು ಹೊರಟಿದೆ. ಹಾಗಾಗಿ, ಇವರ ಸಿದ್ದಾಂತದ ವಿರುದ್ದ ಹೋರಾಡಲು ಪಕ್ಷ ನಿರ್ಧರಿಸಿದೆ ಎಂದು ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟ ಪಡಿಸಿದೆ.

ಉತ್ತರಪ್ರದೇಶ ಚುನಾವಣೆ
ಮುಂಬರುವ ಉತ್ತರಪ್ರದೇಶ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಹುಲ್ ಗಾಂಧಿ ಯುಟರ್ನ್ ಹೊಡೆದಿದ್ದಾರೆಂದು ಹೇಳಲಾಗುತ್ತಿದೆ. ಆರ್ಎಸ್ಎಸ್ ವಿರುದ್ದ ತಾನು ನೀಡಿದ್ದ ಹೇಳಿಕೆಯನ್ನು ಹಿಂದಕ್ಕೆ ಪಡೆದರೆ, ಅಲ್ಪಸಂಖ್ಯಾತ ಮತಬ್ಯಾಂಕಿಗೆ ತೊಂದರೆಯಾಗಬಹುದು ಎನ್ನುವುದು ಪಕ್ಷದ ದೂರಾಲೋಚನೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.












Click it and Unblock the Notifications