ಭಾರತಕ್ಕೆ ಪುಟಿನ್ ಭೇಟಿ: ಭಾರತ-ರಷ್ಯಾ ಒಪ್ಪಂದಕ್ಕೆ ಚುರುಕು
ನವದೆಹಲಿ, ನವೆಂಬರ್ 23: ಭಾರತಕ್ಕೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿ ಭಾರಿ ಮಹತ್ವ ಪಡೆದುಕೊಂಡಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಡಿ.05 ರಿಂದ ಭಾರತ ಪ್ರವಾಸ ಕೈಗೊಳ್ಳುತ್ತಿದ್ದು, 5,000 ಕೋಟಿ ರೂಪಾಯಿ ಮೌಲ್ಯದ ಎಕೆ-203 ಅಸಾಲ್ಟ್ ರೈಫಲ್ಸ್ ಗಳ ಪೂರೈಕೆ ಒಪ್ಪಂದವನ್ನು ಅಂತಿಮಗೊಳಿಸಲು ತಯಾರಿ ನಡೆಸಲಾಗುತ್ತಿದೆ.
ರಷ್ಯಾ ವಿನ್ಯಾಸ ಮಾಡಿರುವ ಎಕೆ-203 ರೈಫಲ್ಸ್ ಗಳನ್ನು ಉತ್ತರ ಪ್ರದೇಶದ ಅಮೇಥಿಯಲ್ಲಿ ತಯಾರಿಸಲಾಗುತ್ತದೆ. ಕೆಲವು ವರ್ಷಗಳ ಹಿಂದೆ ಈ ಒಪ್ಪಂದದ ಬಗ್ಗೆ ಭಾರತ- ರಷ್ಯಾದ ನಡುವೆ ಮಾತುಕತೆಯಾಗಿತ್ತು.

ತಂತ್ರಜ್ಞಾನದ ವರ್ಗಾವಣೆ ವಿಷಯವಾಗಿ ಇರುವ ಸಮಸ್ಯೆ, ಸವಾಲುಗಳನ್ನು ಪರಿಹರಿಸುವುದಕ್ಕಾಗಿ ಅಂತಿಮ ಹಂತದ ಮಾತುಕತೆ ನಡೆಯಬೇಕಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತ ಸೇನೆ 7.5 ಲಕ್ಷ ರೈಫಲ್ ಗಳನ್ನು ಪಡೆಯುತ್ತಿದ್ದರೂ, ತಂತ್ರಜ್ಞಾನದ ವರ್ಗಾವಣೆ ಕ್ರಮೇಣವಾಗಿ ನಡೆಯಬೇಕಿರುವುದರಿಂದ ಮೊದಲ 70,000 ರೈಫಲ್ ಗಳಲ್ಲಿ ರಷ್ಯಾ ನಿರ್ಮಿತ ಘಟಕಗಳಿಂದ ನಿರ್ಮಿತವಾಗಿರಲಿದೆ. ಉತ್ಪಾದನೆ ಪ್ರಕ್ರಿಯೆ ಪ್ರಾರಂಭವಾದ 32 ತಿಂಗಳುಗಳಲ್ಲಿ ಈ ರೈಫಲ್ಸ್ ಗಳನ್ನು ಭಾರತೀಯ ಸೇನೆಗೆ ನೀಡಲಾಗುತ್ತದೆ.
ಒಪ್ಪಂದಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯದ ಅಧಿಕಾರಿಗಳು ಉನ್ನತ ಮಟ್ಟದ ಸಭೆ ನಡೆಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ, ರಷ್ಯಾ ಉತ್ತರ ಪ್ರದೇಶದ ಅಮೇಥಿಯಲ್ಲಿ 7.5 ಲಕ್ಷ ಎಕೆ-203 ಅಸಾಲ್ಟ್ ರೈಫಲ್ಸ್ ಗಳನ್ನು ಉತ್ಪಾದಿಸಲಿದೆ.
ಈ ಒಪ್ಪಂದದ ಸಂಬಂಧ ರಕ್ಷಣಾ ಸಚಿವಾಲಯದ ರಕ್ಷಣಾ ಉಪಕರಣಗಳ ಸ್ವಾಧೀನ ಪರಿಷತ್ ನ ವಿಶೇಷ ಸಭೆ ನ.23 ರಂದು ನಡೆಯಲಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.
ಅರುಣಾಚಲ ಪ್ರದೇಶ ಗಡಿಯಲ್ಲಿ ಚೀನಾ ಸೇನೆಯು ಗ್ರಾಮಗಳನ್ನು ನಿರ್ಮಿಸುತ್ತಿರುವ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಆರಂಭದಲ್ಲೇ ಭಾರತೀಯ ಸೇನೆಯು ರಷ್ಯಾ ನಿರ್ಮಿತ ಎಸ್ - 400 ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ವಾಸ್ತವ ಗಡಿ ರೇಖೆಯಲ್ಲಿ ನಿಯೋಜಿಸಲು ಸಿದ್ಧತೆ ಆರಂಭಿಸಿದೆ.
ಈಗಾಗಲೇ ಹಂತ ಹಂತವಾಗಿ ಎಸ್ - 400 ವ್ಯವಸ್ಥೆಯ ಪ್ರಮುಖ ಉಪಕರಣಗಳು ಒಂದೊಂದಾಗಿ ರಷ್ಯಾದಿಂದ ಭಾರತಕ್ಕೆ ಪೂರೈಕೆಯಾಗಲು ಶುರುವಾಗಿವೆ. ಇದರ ಭಾಗವಾಗಿ ಆಳವಾದ ಪ್ರದೇಶಗಳ ಮೇಲೆ ನಿಗಾ ಇರಿಸುವ ಸಾಮರ್ಥ್ಯದಮುಂದಿನ ವರ್ಷದ ಆರಂಭದಲ್ಲೇ ಲಡಾಕ್, ಅರುಣಾಚಲ ಗಡಿಯಲ್ಲಿಕ್ಷಿಪಣಿ ನಿರೋಧಕ ವ್ಯವಸ್ಥೆ
ಅತ್ಯಾಧುನಿಕ ರೆಡಾರ್ಗಳು ಶೀಘ್ರವೇ ಭಾರತದ ಕೈಸೇರಲಿವೆ. ಮುಂದಿನ ವರ್ಷಾರಂಭದಲ್ಲಿ ಎರಡು ಎಸ್ -400 ಪೂರ್ಣವಾಗಿ ಸನ್ನದ್ಧಗೊಂಡು ಚೀನಾ ಗಡಿಯಲ್ಲಿ ಪ್ರತಿದಾಳಿಗೆ ನಿಲ್ಲಲಿವೆ. ಶತ್ರುಪಾಳಯದ ಒಟ್ಟು 400 ಕಿ.ಮೀ ಪ್ರದೇಶದವರೆಗೆ ವಾಯುದಾಳಿ ಮೇಲೆ ನಿಗಾ ಇರಿಸುತ್ತಲೇ ಪ್ರತಿದಾಳಿ ನಡೆಸುವ ಸಾಮರ್ಥ್ಯ ರಷ್ಯಾ ನಿರ್ಮಿತ ಎಸ್-400ನ ವಿಶೇಷತೆ. ಒಂದು ಎಸ್-400 ಲಡಾಕ್ನ ಉತ್ತರದ ಗಡಿ ಭಾಗದಲ್ಲಿಯೂ, ಮತ್ತೊಂದನ್ನು ಅರುಣಾಚಲ ಪ್ರದೇಶದ ಗಡಿಯಲ್ಲಿಯೂ ನಿಯೋಜಿಸಲು ಭಾರತೀಯ ಸೇನೆ ತೀರ್ಮಾನಿಸಿದೆ.
2018ರಲ್ಲಿ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದಾಗ ಉಭಯ ದೇಶಗಳ ನಡುವೆ ಎಸ್ 400 ವಾಯು ರಕ್ಷಣಾ ವ್ಯವಸ್ಥೆಗಳ ಒಪ್ಪಂದ ನಡೆದಿತ್ತು. ಇದರ ಮೊದಲ ಬ್ಯಾಚ್ ಈ ವರ್ಷದ ಅಂತ್ಯದ ವೇಳೆಗೆ ಭಾರತಕ್ಕೆ ಆಗಮಿಸಲಿದ್ದು, ಇದೇ ಸಮಯದಲ್ಲಿ ವಾರ್ಷಿಕ ಶೃಂಗ ನಡೆಯುತ್ತಿದೆ.
ಇದುವರೆಗೂ ಭಾರತ ಮತ್ತು ರಷ್ಯಾದಲ್ಲಿ 20 ಪರ್ಯಾಯ ವಾರ್ಷಿಕ ಶೃಂಗ ಸಭೆಗಳು ನಡೆದಿವೆ. ಕೋವಿಡ್ ಪರಿಸ್ಥಿತಿಯಲ್ಲಿ ನಡೆಯುವ ಶೃಂಗ ಸಭೆಯಲ್ಲಿ ಕೊರೊನಾ ವಿಚಾರದ ಕುರಿತು ಚರ್ಚೆಗಳು ನಡೆಯುತ್ತವೆ.
ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯನ್ನು ಭಾರತದಲ್ಲಿ ನೀಡಲಾಗುತ್ತಿದೆ. ಭಾರತದಲ್ಲಿಯೇ ಈ ಲಸಿಕೆ ಉತ್ಪಾದನೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ರಷ್ಯಾ ಭಾರತಕ್ಕೆ ಮಾನವೀಯ ನೆಲೆಯಲ್ಲಿ ವೈದ್ಯಕೀಯ ಸಹಕಾರವನ್ನು ನೀಡಿತ್ತು.
ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ಬಳಿಕ ರಷ್ಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ನಿಕೋಲಾಯ್ ಪಿ. ಎರಡು ಬಾರಿ ನವದೆಹಲಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಕುರಿತು ಚರ್ಚೆಯನ್ನು ನಡೆಸಿದ್ದರು.
ಭಾರತ ಮತ್ತು ರಷ್ಯಾ ಪ್ರಮುಖ ಒಪ್ಪಂದಗಳು
* ಭಾರತ ಮತ್ತು ರಷ್ಯಾ ನಡುವೆ ಚೆನ್ನೈ ಬಂದರು ಮತ್ತು ರಷ್ಯನ್ ಒಕ್ಕೂಟದ ವ್ಲಾದಿವೋಸ್ಟೋಕ್ ಬಂದರು ನಡುವೆ ನಾವಿಕ ಸಂಪರ್ಕ ಅಭಿವೃದ್ದಿಗೆ ಒಡಂಬಡಿಕೆ.
* ಭಾರತದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಗಳ ನಡುವೆ ಸಾರಿಗೆಗಾಗಿ ನೈಸರ್ಗಿಕ ಅನಿಲ ಬಳಕೆಗಾಗಿ ತಿಳುವಳಿಕಾ ಒಡಂಬಡಿಕೆ
* ರಷ್ಯಾದ ಪೂರ್ವದಲ್ಲಿ ಕೋಲ್ ಇಂಡಿಯಾ ಲಿಮಿಟೆಡ್ ಮತ್ತು ಫಾರ್ ಈಸ್ಟ್ ಇನ್ವೆಸ್ಟ್ಮೆಂಟ್ ಹಾಗು ರಫ್ತು ಏಜೆನ್ಸಿ ನಡುವೆ ಕಲ್ಲಿದ್ದಲು ಗಣಿಗಾರಿಕೆ ಯೋಜನೆಗಳ ಅನುಷ್ಟಾನದಲ್ಲಿ ಸಹಕಾರಕ್ಕಾಗಿ ತಿಳಿವಳಿಕಾ ಒಡಂಬಡಿಕೆ.
* ಭಾರತ-ರಷ್ಯಾ ವ್ಯಾಪಾರ ಮತ್ತು ಹೂಡಿಕೆ ಹೆಚ್ಚಳಕ್ಕೆ ಜಂಟಿ ವ್ಯೂಹ
*ಸೇನಾ ಸಲಕರಣೆಗಳ ಬಿಡಿ ಭಾಗಗಳ ಉತ್ಪಾದನೆಯಲ್ಲಿ ಸಹಕಾರ ಒಪ್ಪಂದ
* ಭಾರತ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ರಷ್ಯನ್ ಒಕ್ಕೂಟದ ಸಾರಿಗೆ ಸಚಿವಾಲಯದ ನಡುವೆ ರಸ್ತೆ ಸಾರಿಗೆ ಹಾಗೂ ರಸ್ತೆ ಉದ್ಯಮದಲ್ಲಿ ದ್ವಿಪಕ್ಷೀಯ ಸಹಕಾರಕ್ಕಾಗಿ ತಿಳುವಳಿಕೆ ಒಡಂಬಡಿಕೆ












Click it and Unblock the Notifications