ಸಂಸತ್ ಅಧಿವೇಶನದಲ್ಲಿ ಇನ್ನು ಈ ಪದಗಳನ್ನು ಬಳಸುವಂತಿಲ್ಲ
ನವದೆಹಲಿ, ಜುಲೈ 14: ಸಂಸತ್ ಮುಂಗಾರು ಅಧಿವೇಶನ ಜುಲೈ 18ರಂದು ಪ್ರಾರಂಭವಾಗಲಿದ್ದು, ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಿದ್ಧವಾಗಿದೆ. ಈ ನಡುವೆಯೇ ಲೋಕಸಭೆ ಸಚಿವಾಲಯ ಹಲವಾರು ಪದಗಳನ್ನು ಉಲ್ಲೇಖಿಸಿ ಅವುಗಳನ್ನು ಅಸಂಸದೀಯ ಎಂದು ಪಟ್ಟಿ ಮಾಡಿ, ಉಭಯ ಸದನದಲ್ಲಿ ಆ ಪದಗಳನ್ನು ಬಳಸಬಾರದು ಎಂದು ಆದೇಶ ಹೊರಡಿಸಿದೆ. ಯಾವೆಲ್ಲಾ ಪದಗಳನ್ನು ಬಳಸಬಾರದು ಎಂದು ಒಂದು ಕಿರುಪುಸ್ತಕವನ್ನೇ ಬಿಡುಗಡೆ ಮಾಡಿದೆ.
'ಜುಮ್ಲಾ ಜೀವಿ', 'ಬಾಲ್ ಬುದ್ಧಿ', 'ಕೋವಿಡ್ ಸ್ಪ್ರೆಡರ್' ಮತ್ತು 'ಸ್ನೂಪ್ಗೇಟ್' 'ನಾಚಿಕೆಪಡುವ', 'ದುರುಪಯೋಗಪಡಿಸಿಕೊಂಡ, 'ದ್ರೋಹ', 'ಭ್ರಷ್ಟ', 'ನಾಟಕ', 'ಬೂಟಾಟಿಕೆ' ಮತ್ತು 'ಅಸಮರ್ಥತೆ'ಯಂತಹ ಪದಗಳ ಬಳಕೆಯನ್ನು ಅಧಿವೇಶನದಲ್ಲಿ ನಿರ್ಬಂಧಿಸಲಾಗಿದೆ.
ಉಪರಾಷ್ಟ್ರಪತಿ ಚುನಾವಣೆ; ಅಭ್ಯರ್ಥಿಯ ಚರ್ಚೆಗೆ ವಿರೋಧ ಪಕ್ಷಗಳ ಸಭೆ
ಸರ್ಕಾರವನ್ನು ಟೀಕಿಸುವ ಸಾಮರ್ಥ್ಯಕ್ಕೆ ಅಡ್ಡಿಯಾಗುತ್ತದೆ ಎಂದು ಹೇಳುವ ವಿರೋಧ ಪಕ್ಷದ ಶಾಸಕರಿಂದ ತ್ವರಿತ ಪ್ರತಿಭಟನೆಯನ್ನು ಪ್ರಚೋದಿಸುವ ಮೂಲಕ, ಲೋಕಸಭೆಯ ಸಚಿವಾಲಯವು ಉಭಯ ಸದನಗಳಿಗೆ ಅಸಂಸದೀಯ ಪದಗಳನ್ನು ಪಟ್ಟಿ ಮಾಡುವ ಹೊಸ ಕಿರುಪುಸ್ತಕವನ್ನು ಬಿಡುಗಡೆ ಮಾಡಿದೆ.
ಕಿರುಪುಸ್ತಕದಲ್ಲಿ 'ಅರಾಜಕತಾವಾದಿ', 'ಶಕುನಿ', 'ಸರ್ವಾಧಿಕಾರಿ', 'ತಾನಾಶಾ', 'ತಾನಶಾಹಿ', 'ಜೈಚಂದ್', 'ವಿನಾಶ್ ಪುರುಷ', 'ಖಲಿಸ್ತಾನಿ' 'ಖೂನ್ ಸೆ ಖೇತಿ' ಇಂತಹ ಪದಗಳನ್ನು ಪಟ್ಟಿ ಮಾಡಿದೆ. ಚರ್ಚೆಯ ಸಮಯದಲ್ಲಿ ಈ ಪದಗಳನ್ನು ಬಳಸಬಾರದು ಎಂದು ತಿಳಿಸಿದೆ. 'ದೋಹ್ರಾ ಚರಿತ್ರ', 'ನೌಟಂಕಿ', 'ದಿಂಡೋರಾ ಪೀಟ್ನಾ' ಮತ್ತು 'ಬೆಹ್ರಿ ಸರ್ಕಾರ್' ಪದಗಳನ್ನು ಕೂಡ ಬಳಸುವಂತಿಲ್ಲ.
ವಿರೋಧ ಪಕ್ಷಗಳ ಮುಖಂಡರ ವಿರೋಧ
ಪದ ಬಳಕೆಗೆ ನಿರ್ಬಂಧ ವಿಧಿಸಿರುವ ಕ್ರಮಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ'ಬ್ರಿಯಾನ್ ಅವರು ಪದಗಳನ್ನು ಬಳಸುವುದನ್ನು ಮುಂದುವರಿಸುವುದಾಗಿ ಹೇಳುವ ಮೂಲಕ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು.
ಟ್ವೀಟ್ ಮಾಡಿರುವ ಅವರು "ಸಂಸತ್ತಿನಲ್ಲಿ ಭಾಷಣ ಮಾಡುವಾಗ ಈ ಮೂಲಭೂತ ಪದಗಳನ್ನು ಬಳಸಲು ನಮಗೆ ಅನುಮತಿ ಇಲ್ಲ. ನಾಚಿಕೆಪಡುತ್ತೇನೆ, ದುರ್ಬಳಕೆ ಮಾಡಿಕೊಂಡಿದ್ದಾರೆ, ದ್ರೋಹ ಮಾಡಿದೆ, ಭ್ರಷ್ಟ, ಬೂಟಾಟಿಕೆ, ಅಸಮರ್ಥ. ನಾನು ಈ ಎಲ್ಲಾ ಪದಗಳನ್ನು ಸಂಸತ್ನಲ್ಲಿ ಬಳಸುತ್ತೇನೆ. ನನ್ನನ್ನು ಅಮಾನತು ಮಾಡಿ. ಪ್ರಜಾಪ್ರಭುತ್ವಕ್ಕಾಗಿ ಹೋರಾಟ ಮಾಡುತ್ತೇನೆ" ಎಂದು ಹೇಳಿದ್ದಾರೆ.
ಜುಲೈ 18ರಿಂದ ಸಂಸತ್ ಮುಂಗಾರು ಅಧಿವೇಶನ: ಕೋವಿಡ್ ನಿಯಮಗಳು ಹೀಗಿವೆ
ಲೋಕಸಭೆಯಲ್ಲಿ ಎದ್ದು ನಿಲ್ಲಲು ಸಾಧ್ಯವಿಲ್ಲ
ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಟ್ವೀಟ್ ಮಾಡಿದ್ದು, "ನಾನು ಲೋಕಸಭೆಯಲ್ಲಿ ಎದ್ದು ನಿಲ್ಲಲು ಸಾಧ್ಯವಿಲ್ಲ ಮತ್ತು ಅಸಮರ್ಥ ಸರ್ಕಾರದಿಂದ ಭಾರತೀಯರಿಗೆ ಹೇಗೆ ದ್ರೋಹ ಬಗೆದಿದೆ ಎಂಬುದರ ಕುರಿತು ಮಾತನಾಡಲು ಸಾಧ್ಯವಿಲ್ಲ, ಅವರ ಬೂಟಾಟಿಕೆಗೆ ನಾಚಿಕೆಪಡಬೇಕು?" ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ನಿರ್ಬಂಧಿಸಿದ ಪದಗಳಲ್ಲಿ ಸಂಘಿ ಎನ್ನುವ ಶಬ್ದವನ್ನು ಸೇರಿಸಲಾಗಿಲ್ಲ. ಬಿಜೆಪಿ ಭಾರತವನ್ನು ಹೇಗೆ ನಾಶ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ವಿವರಿಸುವ ಎಲ್ಲಾ ಶಬ್ದಗಳನ್ನು ನಿರ್ಬಂಧಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಪ್ರತಿ ವರ್ಷ ಇದೇ ರೀತಿ ಪಟ್ಟಿ ಮಾಡಲಾಗುತ್ತದೆ
"ಇಂದು ಸಂಸತ್ತಿನಲ್ಲಿ ಅಸಂಸದೀಯ ಪದಗಳ ಸಂಕಲನದ ಬಗ್ಗೆ ಪ್ರತಿಪಕ್ಷಗಳು ಸಾಕಷ್ಟು ಗದ್ದಲ ಎಬ್ಬಿಸಿವೆ. ಆದರೆ ತಮಾಷೆಯ ವಿಷಯವೆಂದರೆ ಅವರು ವಾಸ್ತವವನ್ನು ತಿಳಿಯದೆ ಬಿರುಗಾಳಿ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಪ್ರತಿ ವರ್ಷ ಈ ಪಟ್ಟಿಯನ್ನು ಹೊರತರಲಾಗುತ್ತದೆ." ಎಂದು ಸರ್ಕಾರ ಸಮರ್ಥನೆ ಮಾಡಿಕೊಂಡಿದೆ.
"ಪಟ್ಟಿಯು ಹೊಸ ಸಲಹೆಯಲ್ಲ, ಆದರೆ ಲೋಕಸಭೆ, ರಾಜ್ಯಸಭೆ ಅಥವಾ ರಾಜ್ಯ ಶಾಸಕಾಂಗಗಳಲ್ಲಿ ಈಗಾಗಲೇ ತೆಗೆದುಹಾಕಲಾದ ಪದಗಳ ಸಂಕಲನವಾಗಿದೆ. ಇದು ಕಾಮನ್ವೆಲ್ತ್ ರಾಷ್ಟ್ರಗಳ ಸಂಸತ್ತುಗಳಲ್ಲಿ ಅಸಂಸದೀಯ ಪದಗಳ ಪಟ್ಟಿಯನ್ನು ಸಹ ಒಳಗೊಂಡಿದೆ" ಎಂದು ಹೇಳಿದೆ.
"ಯುಪಿಎ ಸರ್ಕಾರದ ಅವಧಿಯಲ್ಲಿ ಈ ಹೆಚ್ಚಿನ ಪದಗಳನ್ನು ಅಸಂಸದೀಯವೆಂದು ಪರಿಗಣಿಸಲಾಗಿತ್ತು. ಕಿರುಪುಸ್ತಕವು ಕೇವಲ ಪದಗಳ ಸಂಕಲನವಾಗಿದೆ, ಸಲಹೆಗಳು ಅಥವಾ ಆದೇಶವಲ್ಲ," ಎಂದು ಹೇಳಿದ್ದು, ಪ್ರತಿಪಕ್ಷದ ಆಡಳಿತವಿರುವ ರಾಜ್ಯಗಳು ಮತ್ತು ಇತರ ದೇಶಗಳಲ್ಲಿ ತೆಗೆದುಹಾಕಲಾದ ಕೆಲವು ಪದಗಳನ್ನು ಪಟ್ಟಿ ಮಾಡಿದೆ.
ಅಸಂಸದೀಯ ಎನಿಸಿಕೊಳ್ಳುವ ಕೆಲವು ಪದಗಳು
'ರಕ್ತಪಾತ', 'ರಕ್ತಸಿಕ್ತ', 'ದ್ರೋಹ', 'ನಾಚಿಕೆ', 'ದುರುಪಯೋಗ', 'ಮೋಸ, 'ಚಮಚಾ', 'ಚಮಚಾಗಿರಿ', 'ಚೇಲಾಗಳು', 'ಬಾಲಿಶ', 'ಭ್ರಷ್ಟ', 'ಹೇಡಿ', 'ಅಪರಾಧ', 'ಮೊಸಳೆ ಕಣ್ಣೀರು', 'ಅವಮಾನ', 'ಕತ್ತೆ', 'ನಾಟಕ', 'ಗೂಂಡಾಗಿರಿ', 'ಬೂಟಾಟಿಕೆ', 'ಅಸಮರ್ಥ', 'ತಪ್ಪುದಾರಿ', 'ಸುಳ್ಳು', 'ಅರಾಜಕತಾವಾದಿ', 'ಗದ್ದರ್', 'ಗಿರ್ಗಿತ್', 'ಗೂಂಡಾಗಳು', 'ಘಡಿಯಾಲಿ ಅನ್ಸು', 'ಅಪ್ಮಾನ್', 'ಅಸತ್ಯ', 'ಅಹಂಕಾರ', 'ಭ್ರಷ್ಟ', 'ಕಾಲಾ ದಿನ', 'ಕಾಲಾ ಬಜಾರಿ', 'ಖರೀದ್ ಫರೋಖ್ತ್ ', 'ದಂಗಾ', 'ದಲಾಲ್', 'ದಾದಗಿರಿ', 'ದೋಹ್ರಾ ಚರಿತ್ರೆ', 'ಬೆಚಾರ', 'ಬಾಬ್ಕಟ್', 'ಲಾಲಿಪಾಪ್', 'ವಿಶ್ವಾಸ್ಘಾತ್', 'ಸಂವೇದನಾಹೀನ್', 'ಮೂರ್ಖ', 'ಪಿತ್ತು', 'ಬೆಹ್ರಿ ಸರ್ಕಾರ್' ', ಮತ್ತು 'ಲೈಂಗಿಕ ಕಿರುಕುಳ' ಇನ್ನೂ ಈ ರೀತಿಯ ಹಲವಾರು ಪದಗಳು ಅಸಾಂವಿಧಾನಿಕ ಎಂದು ಹೇಳಿದೆ.
Recommended Video