ಸಾಕ್ಷಿ ಕೇಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ 5 ಪ್ರಶ್ನೆಗಳು
Recommended Video

ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಪೈಶಾಚಿಕ ಕೃತ್ಯದ ಐದು ದಿನಗಳ ನಂತರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಸೌದಿ ದೊರೆ ಪಾಕ್ ಭೇಟಿಯಿಂದಾಗಿ ಈ ವಿಚಾರದ ಬಗ್ಗೆ ಹೇಳಿಕೆ ನೀಡಲು ಸಾಧ್ಯವಾಗಿಲ್ಲ ಎನ್ನುವ ಸಬೂಬನ್ನು ನೀಡಿದ್ದಾರೆ. ಇಮ್ರಾನ್ ಅವರ ಹೇಳಿಕೆಯನ್ನು ಅವಲೋಕಿಸಿದಾಗ, ಅವರು ಬಲುಜಾಣನಂತೆ ಮಾತನಾಡಿದ್ದಾರೆ.
ಇವರ ಮಾತುಗಳನ್ನು ಕೇಳುತ್ತಿದ್ದರೆ ಎಂಥ ಪ್ರಬುದ್ಧ ವಿಚಾರಧಾರೆ ಇವರದ್ದು ಎಂದು ಮೇಲ್ನೋಟಕ್ಕೆ ಅನಿಸಿಬಿಡಬಹುದು. ಅಂತಾರಾಷ್ಟ್ರೀಯ ಸಮುದಾಯಕ್ಕೆ ಪಾಕಿಸ್ತಾನ ಎಂಥ ಸಹನಶೀಲ ದೇಶ ಎನ್ನುವ ಸಂದೇಶವನ್ನೂ ಸಾಗಿಸಬಹುದು.
ಆದರೆ ವಾಸ್ತವತೆ ಹಾಗಿಲ್ಲ. ಪುಲ್ವಾಮಾ ಘಟನೆಗೆ ಪಾಕಿಸ್ತಾನದ ಸಂಘಟನೆ, ವ್ಯಕ್ತಿಗಳ ಕೈವಾಡವಿರುವುದಕ್ಕೆ ಸಾಕ್ಷಿ ಕೊಡಿ ಎನ್ನುತ್ತಾರೆ ಇಮ್ರಾನ್. ಸ್ನೇಹಕ್ಕೂ ಸೈ, ಸಮರಕ್ಕೂ ಸೈ ಎಂದಿರುವ ಇಮ್ರಾನ್ ಖಾನಿಗೆ ಒಂದಿಷ್ಟು ಪ್ರಶ್ನೆಗಳು

ದಾಳಿ ನಾವೇ ನಡೆಸಿದ್ದ ಎಂದು ಜೈಶ್ ಸಂಘಟನೆ ಒಪ್ಪಿಕೊಂಡಿದೆ
ಪ್ರಶ್ನೆ 1: ಘಟನೆಯನ್ನು ನಾವೇ ನಡೆಸಿದ್ದೇವೆ ಎಂದು ದಾಳಿ ನಡೆದ ಮರುಗಂಟೆಯಲ್ಲೇ ಜೈಶ್-ಇ-ಮೊಹಮದ್ ಸಂಘಟನೆ ಹೇಳಿಕೊಂಡಿದೆ. ಅದು ಪಾಕಿಸ್ತಾನ ಮೂಲದ ಸಂಘಟನೆ ಮತ್ತು ಅದರ ಸ್ಥಾಪಕ ಮುಖ್ಯಸ್ಥ ಮಸೂದ್ ಅಜರ್ ಎನ್ನುವುದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಗೊತ್ತಿಲ್ಲದ ವಿಚಾರವೇ?

ಮಸೂದ್ ಗೆ ಸದ್ಯ ಪಾಕ್ ಮಿಲಿಟರಿ ಆಸ್ಪತ್ರೆಯಲ್ಲೇ 5 ಸ್ಟಾರ್ ಚಿಕಿತ್ಸೆ ನೀಡಲಾಗುತ್ತಿದೆ
ಪ್ರಶ್ನೆ 2: ಭಾರತದ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಗೆ ಸದ್ಯ ಪಾಕ್ ಮಿಲಿಟರಿ ಆಸ್ಪತ್ರೆಯಲ್ಲೇ 5 ಸ್ಟಾರ್ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ವಿಚಾರ ಇಮ್ರಾನ್ ಖಾನ್ ಗೆ ಗೊತ್ತಿಲ್ಲವೇ? ಇದೇ ಮಸೂದ್ ಅಜರ್ ಭಾರತದ ಮೇಲೆ ನಡೆಸಲಾದ ಹಲವು ಭಯೋತ್ಪಾದಕ ದಾಳಿಗಳ ಸೂತ್ರಧಾರಿ ಅನ್ನುವುದೂ ಗೊತ್ತಿಲ್ಲವೇ? ಇಮ್ರಾನ್ ಖಾನ್ ಅವರದ್ದು ಜಾಣಮರೆವು.

ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ
ಪ್ರಶ್ನೆ 3: ಇದೇ ಜೈಶ್ ಉಗ್ರ ಸಂಘಟನೆ, ಕಳೆದ ಚುನಾವಣೆಯಲ್ಲಿ ಇಮ್ರಾನ್ ಬೆಂಬಲಕ್ಕೆ ನಿಂತಿದ್ದು ಹೌದಲ್ಲವೇ? ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಧಮಕಿ ಹಾಕಿ ಇಮ್ರಾನ್ ಪಾಕಿಗಳ ಮನಗೆಲ್ಲಬಹುದು.

ಗಡಿಯಾಚೆಗಿನ ಶಕ್ತಿಗಳ ಪಾತ್ರವಿರುವುದಕ್ಕೆ ನಿಖರ ಸಾಕ್ಷಿ
ಪ್ರಶ್ನೆ 4: ಪುಲ್ವಾಮ ಘಟನೆಯಲ್ಲಿ ಗಡಿಯಾಚೆಗಿನ ಶಕ್ತಿಗಳ ಪಾತ್ರವಿರುವುದಕ್ಕೆ ನಿಖರ ಸಾಕ್ಷಿಗಳನ್ನು ನೀಡಲು ಭಾರತದ ತನಿಖಾ ಏಜೆನ್ಸಿಗಳಿಗೆ ಸಮಯ ಬೇಕಾಗಬಹುದು, ಆ ಸಾಕ್ಷಿಗಳೂ ಸಿಗುತ್ತವೆ. ಆದರೆ 26/11 ಘಟನೆಯ ಕುರಿತಾದ ಎಲ್ಲ ಸಾಕ್ಷಿಗಳನ್ನೂ ಪಾಕಿಸ್ತಾನಕ್ಕೆ ನೀಡಲಾಗಿತ್ತಲ್ಲವೇ? ಆದರೂ ಯಾಕೆ ಝಕೀರ್ ಉರ್ ರೆಹಮಾನ್ ಲಕ್ವಿ, ಸಾಜಿದ್ ಮಿರ್ ಗಳನ್ನು ಭಾರತಕ್ಕೆ ಹಸ್ತಾಂತರಿಸಲಿಲ್ಲ? (ಚಿತ್ರದಲ್ಲಿ: ಝಕೀರ್ ರೆಹಮಾನ್ ಲಕ್ವಿ)

ಪಾಕ್ ಸೈನ್ಯದ ರಕ್ಷಣೆಯಲ್ಲೇ ದೇಶತುಂಬ ಭಾಷಣ ಮಾಡುತ್ತ ಓಡಾಡುತ್ತಿದ್ದಾನಲ್ಲವೇ?
ಪ್ರಶ್ನೆ 5: ಮುಂಬೈ ದಾಳಿಯ ಮುಖ್ಯ ಸೂತ್ರದಾರ ಹಫೀಜ್ ಸಯೀದ್ ಪಾಕಿಸ್ತಾನ ಸೈನ್ಯದ ರಕ್ಷಣೆಯಲ್ಲೇ ದೇಶತುಂಬ ಭಾಷಣ ಮಾಡುತ್ತ ಓಡಾಡುತ್ತಿದ್ದಾನಲ್ಲವೇ? ಇವರನ್ನೆಲ್ಲ ಭಾರತಕ್ಕೆ ಹಸ್ತಾಂತರಿಸಲು ಏನು ಕಷ್ಟವಿದೆ? ಇದೆಲ್ಲಾ ಪಾಕ್ ಪ್ರಧಾನಿಗೆ ಗೊತ್ತಿದ್ದರೂ, ಹಫೀಜ್ ಸಯೀದ್, ಅಜರ್ ಮಸೂದ್, ದಾವೂದ್ ಮುಂತಾದವರ ಕೂದಲೂ ಸಹ ಅಲುಗಾಡಿಸಲು ಇಮ್ರಾನ್ ಗೆ ಸಾಧ್ಯವಿಲ್ಲ. ಹಾಗೆ ಅಲುಗಾಡಿಸಿದರೆ ಇಮ್ರಾನ್ ಪ್ರಧಾನಿ ಹುದ್ದೆಯಲ್ಲಿ ಮಾತ್ರವಲ್ಲ ಜೀವಂತ ಇರುವುದೂ ಕಷ್ಟವಿದೆ, ಅಲ್ಲವೇ?












Click it and Unblock the Notifications