ಹುಡ್ ಹುಡ್ ಅಬ್ಬರವಾಯ್ತು ಜೋರು ಮಳೆಗೆ ಸಜ್ಜಾಗಿ!
ನವದೆಹಲಿ, ಅ.12: ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿಯನ್ನು ನಜ್ಜುಗುಜ್ಜು ಮಾಡಿ ರುದ್ರನರ್ತನಗೈದ ಹುಡ್ ಹುಡ್ ಚಂಡಮಾರುತದ ಅಬ್ಬರದ ನಂತರ ಐದು ರಾಜ್ಯಗಳಲ್ಲಿ ಭಾರಿ ಮಳೆ ನಿರೀಕ್ಷಿಸಬಹುದು. ಕರ್ನಾಟಕ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಧ್ಯಮ ಪ್ರಮಾಣದ ಮಳೆಯಾಗಲಿದೆ ಕೇಂದ್ರ ಹವಾಮಾನ ಇಲಾಖೆ ನಿರ್ದೇಶಕ ಲಕ್ಷ್ಮಣ್ ಸಿಂಗ್ ರಾಥೋಡ್ ಎಚ್ಚರಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಲಕ್ಷ್ಮಣ್ ಸಿಂಗ್ ಅವರು, ಆಂಧ್ರ ಪ್ರದೇಶ ಮತ್ತು ಒರಿಸ್ಸಾದಲ್ಲಿ ಭಾರೀ ಪ್ರಮಾಣದಲ್ಲಿದ್ದರೆ ಇತರ ಐದು ರಾಜ್ಯಗಳಲ್ಲೂ ಚಂಡಮಾರುತದ ಪ್ರಭಾವ ಕಾಣಿಸಲಿದೆ ಎಂದು ಚಂಡಮಾರುತ ಹುಡ್ ಹುಡ್ ಪರಿಣಾಮದ ಬಗ್ಗೆ ವಿವರಣೆ ನೀಡಿದರು. ಪಶ್ಚಿಮ ಬಂಗಾಳ, ತೆಲಂಗಾಣ, ಬಿಹಾರ, ಜಾರ್ಖಂಡ್ ಮತ್ತು ಛತ್ತೀಸ್ ಗಢ ರಾಜ್ಯಗಳಲ್ಲೂ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದರು.[ಕರಾವಳಿಯಲ್ಲಿ ಹುಡ್ ಹುಡ್ ನರ್ತನ]
ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಪ್ರಕಾರವೇ ನಿಗದಿತ ಸಮಯಕ್ಕೆ ಸರಿಯಾಗಿ ಆಂಧ್ರದ ಗಡಿ ದಾಟಿರುವ ಚಂಡಮಾರುತದ ವೇಗ ಒರಿಸ್ಸಾದಲ್ಲಿ ಕಡಿಮೆಯಾಗಲಿದೆಯಾದರೂ ಮಳೆ ಸುರಿಯಲಿದೆ ಎಂದು ಹೇಳಿದರು. ಈ ನಡುವೆ ದಕ್ಷಿಣ ಒಳನಾಡಿನಲ್ಲಿ ಮಧ್ಯಮ ಪ್ರಮಾಣದ ಮಳೆಯಾಗಲಿದ್ದು, ಹೆಚ್ಚಿನ ಆತಂಕ ಪಡುವ ಅಗತ್ಯವಿಲ್ಲ ಎಂದರು. ಕರ್ನಾಟಕದಲ್ಲಿ ಬೀದರ್ ನಲ್ಲಿ ಸ್ವಲ್ಪ ಪ್ರಮಾಣದ ಮಳೆ ನಿರೀಕ್ಷಿಸಬಹುದಾಗಿದೆ.
ಗಂಟೆಗೆ
60
ರಿಂದ
70
ಕಿ.
ಮೀ.
ವೇಗದಲ್ಲಿ
ಗಾಳಿ
ಬೀಸಲಿದೆ
ಎಂದು
ಹೇಳಿದ
ಅವರು,
ಚಂಡಮಾರುತದ
ವೇಗ
ಹಂತ
ಹಂತವಾಗಿ
ಕಡಿಮೆಯಾಗಲಿದೆ
ಎಂದಿದ್ದಾರೆ.
ಚಂಡಮಾರುತದ
ಅಬ್ಬರ
ಆಂಧ್ರಪ್ರದೇಶದಲ್ಲಿ
ಇನ್ನೂ
ನಾಲ್ಕು
ದಿನಗಳ
ಕಾಲ
ಮುಂದುವರೆಯಲಿದೆ
ಎಂದು
ಹೇಳಿದ್ದಾರೆ.
ಚಂಡಮಾರುತಕ್ಕೆ ತುತ್ತಾಗಿರುವ ಜಿಲ್ಲೆಗಳು
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ-ಪೂರ್ವಗೋದಾವರಿ ಏರಿ ಜಿಲ್ಲೆಗಳು, ವಿಶಾಖಪಟ್ಟಣಂ, ವಿಜಯನಗರಂ, ಶ್ರೀಕಾಕುಳಂ ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ, ಮಳೆಯ ಆರ್ಭಟ ಮುಂದುವರೆದಿದೆ. ಅದೇರೀತಿ ಒರಿಸ್ಸಾದ ಗಂಜಾ, ಗಜಪತಿ, ಕೋರಪುಟ್, ರಾಯಗಢ, ನವರಂಗಪುರ್, ಮಲ್ಕನ್ಗಿರಿ, ಕಾಳಹಂಡಿ, ಫುಲ್ಬಾನಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಆಂಧ್ರದ ಕೃಷ್ಣಾ ಜಿಲ್ಲೆ, ಗುಂಟೂರು, ಪ್ರಕಾಶಂ ಜಿಲ್ಲೆಗಳು ಕೂಡ ಗಾಳಿ ಮಳೆ ದಾಳಿಗೆ ತತ್ತರಿಸಿ ಹೋಗಿವೆ.
ಜಲಸೇನೆ ರಕ್ಷಣಾ ಕಾರ್ಯ
ರಕ್ಷಣಾ ಕಾರ್ಯಾಚರಣೆಗಾಗಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದ ಆಡಳಿತಗಳು ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 15 ತಂಡಗಳು, ಭಾರತೀಯ ಸೇನಾಪಡೆಯ 250ಕ್ಕೂ ಹೆಚ್ಚು ಯೋಧರು, ನೌಕಾಪಡೆಯ ನಾಲ್ಕು ಹಡಗುಗಳು ಹಾಗೂ ವಾಯುಪಡೆಯ 10 ಹೆಲಿಕಾಪ್ಟರ್ ಗಳು ಸನ್ನದ್ಧವಾಗಿದ್ದವು. ಇದರ ಜೊತೆಗೆ ವಿಪತ್ತು ನಿರ್ವಹಣಾ ಕೇಂದ್ರದಿಂದ 250 ಜನರ ತಂಡ ರಕ್ಷಣಾ ಕಾರ್ಯದಲ್ಲಿ ನಿರತವಾಗಿತ್ತು.
ದಕ್ಷಿಣ ಒಳನಾಡಿನಲ್ಲಿ ಪರಿಣಾಮ ಹೇಗಿದೆ
ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಮಧ್ಯಮ ಪ್ರಮಾಣದ ಮಳೆಯಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದ್ದಾರೆ. ರಾಜ್ಯದಲ್ಲಿ ಬೀಳುತ್ತಿರುವ ಮಳೆಗೂ ಚಂಡಮಾರುತಕ್ಕೂ ಸಂಬಂಧವಿಲ್ಲ. ನೈರುತ್ಯ ಮುಂಗಾರು ವಾಪಸಾಗುವ ಸಂದರ್ಭದಲ್ಲಿ ಸಹಜವಾಗಿಯೇ ಮಳೆಯಾಗುತ್ತದೆ. ಅದೇ ರೀತಿ ರಾಜ್ಯದ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆಯಾಗಿದೆ.
ಉತ್ತರ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆಗಳಿಲ್ಲ
ಉತ್ತರ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆಗಳಿಲ್ಲ. ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಯಾಗುವ ಸಂಭವವಿದೆ. ಹವಾ ಮುನ್ಸೂಚನೆ ಪ್ರಕಾರ ಭಾಗಶಃ ಮೋಡಕವಿದ ವಾತಾವರಣ ಮುಂದುವರೆದಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.
ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ
ಹುಡ್ ಹುಡ್ ಚಂಡಮಾರುತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಎಂದು ಪ್ರಧಾನಿ ಮೋದಿ ಅವರಿಗೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೋರಿದ್ದಾರೆ. ಸುಮಾರು 2 ಸಾವಿರ ಕೋಟಿ ರು ಪರಿಹಾರಕ್ಕಾಗಿ ಚಂದ್ರಬಾಬು ನಾಯ್ಡು ಮನವಿ ಸಲ್ಲಿಸಿದ್ದಾರೆ.