'ಅಫ್ಘಾನ್ ಪರಿಸ್ಥಿತಿ ಚಿಂತಾಜನಕವಾಗಿದೆ; ನಮ್ಮ ಸಿಬ್ಬಂದಿ ವಾಪಸ್ ಕರೆಸಿಕೊಳ್ಳುವುದೇ ಆದ್ಯತೆ'
ನವದೆಹಲಿ, ಆಗಸ್ಟ್ 26: ಯುದ್ಧಪೀಡಿತ ಅಫ್ಘಾನಿಸ್ತಾನದ ಪರಿಸ್ಥಿತಿ ಸದ್ಯಕ್ಕೆ ಚಿಂತಾಜನಕವಾಗಿದೆ ಎಂದು ಹೇಳಿರುವ ಕೇಂದ್ರ ಸರ್ಕಾರ, ಅಲ್ಲಿರುವ ನಮ್ಮ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆ ಎಂದು ತಿಳಿಸಿದೆ.
ಅಫ್ಘಾನಿಸ್ತಾನ ಬಿಕ್ಕಟ್ಟಿನ ಕುರಿತು ಗುರುವಾರ ಕರೆದಿದ್ದ ಸರ್ವ ಪಕ್ಷ ಸಭೆಯಲ್ಲಿ ಅಫ್ಘಾನ್ ಪ್ರಸ್ತುತ ಪರಿಸ್ಥಿತಿ ಕುರಿತು ಚರ್ಚೆ ನಡೆಸಲಾಯಿತು. ಕಳೆದ ವಾರ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ತಾಲಿಬಾನ್ ಕಾರಣ ಅಲ್ಲಿ ಉದ್ಭವವಾಗಿರುವ ಪರಿಸ್ಥಿತಿ ವಿಶ್ಲೇಷಣೆ ನಡೆಸಲಾಯಿತು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅಲ್ಲಿನ ಪರಿಸ್ಥಿತಿ ಹಾಗೂ ಭಾರತದ ಕ್ರಮಗಳ ಕುರಿತು ಕೆಲವು ವಿವರಗಳನ್ನು ವಿಪಕ್ಷಗಳ ನಾಯಕರೊಂದಿಗೆ ಹಂಚಿಕೊಂಡರು.
ಸಭೆಯಲ್ಲಿ ಕೇಂದ್ರ ಸಚಿವ ಪೀಯುಶ್ ಗೋಯಲ್ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು.

ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅಧೀರ್ ರಂಜನ್ ಚೌಧರಿ, ಟಿಎಂಸಿ ಸುಗತಾ ರಾವ್ ಹಾಗೂ ಸುಖೇಂದು ಶೇಖರ್ ರಾಯ್, ಬಿಎಸ್ಪಿಯ ಸತೀಶ್ ಮಿಶ್ರಾ, ಮಾಜಿ ರಕ್ಷಣಾ ಸಚಿವ ಹಾಗೂ ಎನ್ಸಿಪಿ ಮುಖಂಡ ಶರದ್ ಪವಾರ್, ಸಮಾಜವಾದಿ ಪಕ್ಷದ ಪ್ರೊ. ರಾಮ್ಗೋಪಾಲ್ ಯಾದವ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿ, ಸಿಪಿಐ ಸಂಸದ ಬಿನಯ್ ವಿಶ್ವಂ ಇತರ ವಿಪಕ್ಷಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
'ಅಶಾಂತಿ ಆವರಿಸಿರುವ ಅಫ್ಘಾನಿಸ್ತಾನದಿಂದ ಭಾರತೀಯರನ್ನು ವಾಪಸ್ ಕರೆತರಲು ನಿರಂತರ ಪ್ರಯತ್ನಿಸುತ್ತಿದ್ದೇವೆ. ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕರೆತರುವುದು ನಮ್ಮ ಆದ್ಯತೆ' ಎಂದು ಜೈಶಂಕರ್ ಹೇಳಿದ್ದಾರೆ.
ಎರಡು ದಶಕಗಳ ನಂತರ ಅಫ್ಘಾನ್ನಿಂದ ಅಮೆರಿಕ ತನ್ನ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಂತೆ ತಾಲಿಬಾನಿಗಳು ಆಕ್ರಮಣ ಮಾಡಿ ಅಫ್ಘಾನಿಸ್ತಾನನ್ನು ವಶಪಡಿಸಿಕೊಂಡಿದ್ದಾರೆ. ತಾಲಿಬಾನಿಗಳ ಆಕ್ರಮಣ ಆರಂಭವಾಗುತ್ತಿದ್ದಂತೆ ಎಲ್ಲೆಲ್ಲೂ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಹಲವು ದೇಶಗಳು ಅಫ್ಘಾನಿಸ್ತಾನದಲ್ಲಿರುವ ತಮ್ಮ ಜನರು ಹಾಗೂ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುತ್ತಿವೆ.

ಭಾರತ ಸರ್ಕಾರದಿಂದ 'ಆಪರೇಷನ್ ದೇವಿ ಶಕ್ತಿ'
ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳು ಹಾಗೂ ಸಿಬ್ಬಂದಿಯನ್ನು ಭಾರತಕ್ಕೆ ಕರೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ "ಆಪರೇಷನ್ ದೇವಿ ಶಕ್ತಿ" ಘೋಷಿಸಿದೆ. ಕಾಬೂಲ್ ವಿಮಾನ ನಿಲ್ದಾಣದಿಂದ ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ.
"ಮಂಗಳವಾರ ದೆಹಲಿಗೆ 78 ಪ್ರಯಾಣಿಕರನ್ನು ಕರೆ ತರಲಾಗಿದೆ. ಆಪ್ ದೇವಿ ಶಕ್ತಿ ಮುಂದುವರಿಸಲಾಗುತ್ತಿದೆ" ಎಂದು ಜೈಶಂಕರ್ ತಿಳಿಸಿದ್ದರು. ಆಗಸ್ಟ್ 16ರಂದು ಕಾಬೂಲ್ ನಿಂದ ದೆಹಲಿಗೆ 40 ಭಾರತೀಯರ ಸ್ಥಳಾಂತರ ಕಾರ್ಯಾಚರಣೆ ಆರಂಭಿಸಿತು. ಕಾಬೂಲ್ನಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ನಡುವೆ ಭಾರತ 800ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ.
'ಅಫ್ಘಾನಿಸ್ತಾನದಲ್ಲಿರುವ ನಮ್ಮ ನಾಗರಿಕರನ್ನು ರಕ್ಷಿಸುವುದಲ್ಲದೇ ಭಾರತಕ್ಕೆ ಬರಲು ಬಯಸುವ ಸಿಖ್ಖರು ಹಾಗೂ ಹಿಂದೂ ಅಲ್ಪಸಂಖ್ಯಾತರಿಗೆ ಆಶ್ರಯ ನೀಡಬೇಕು. ಸಹಾಯಕ್ಕಾಗಿ ಭಾರತವನ್ನು ಎದುರುನೋಡುತ್ತಿರುವ ಅಫ್ಘಾನ್ ಸಹೋದರ ಸಹೋದರಿಯರಿಗೆ ನಾವು ನಮ್ಮಿಂದ ಸಾಧ್ಯವಿರುವ ಎಲ್ಲಾ ಸಹಾಯ ಒದಗಿಸಬೇಕು' ಎಂದು ಈಚೆಗೆ ಪ್ರಧಾನಿ ಮೋದಿ ಹೇಳಿದ್ದರು.
ಅಫ್ಘಾನಿಸ್ತಾನದಿಂದ ಭಾರತಕ್ಕೆ ವಾಪಸಾತಿ ಪ್ರಕ್ರಿಯೆಗೆ 24x7 ವಿಶೇಷ ಅಫ್ಘಾನಿಸ್ತಾನ ಸೆಲ್ ತೆರೆಯಲಾಗಿದೆ. ಸುಮಾರು 1650 ಭಾರತೀಯರು ಸ್ವದೇಶಕ್ಕೆ ವಾಪಸಾಗಲು ವಿನಂತಿಸಿದ್ದಾರೆ. ಆಗಸ್ಟ್ 15ರ ಮೊದಲು ಭಾರತಕ್ಕೆ ಮರಳಲು 1500 ವಿನಂತಿಗಳು ದೊರೆತಿವೆ.
ಅಫ್ಘಾನಿಸ್ತಾನ-ಭಾರತದ ನಡುವೆ ನಡೆಯುತ್ತಿದ್ದ ವ್ಯಾಪಾರ ವಹಿವಾಟು ಕೂಡ ಸ್ಥಗಿತಗೊಂಡಿದೆ. ಭಾರತದೊಂದಿಗೆ ಆಮದು ಹಾಗೂ ರಫ್ತು ವ್ಯವಹಾರವನ್ನು ತಾಲಿಬಾನ್ ಸ್ಥಗಿತಗೊಳಿಸಿದೆ. ಈ ಬೆಳವಣಿಗೆಗಳೊಂದಿಗೆ ಅಫ್ಘಾನಿಸ್ತಾನ ಹಾಗೂ ಭಾರತದ ನಡುವಿನ ಸಂಬಂಧ ಅತಂತ್ರವಾಗಿದೆ.











Click it and Unblock the Notifications