ಅಪನಗದೀಕರಣ ಅತಿ ದೊಡ್ಡ ತಪ್ಪು, ದೇಶದ ಜನರ ಕ್ಷಮೆ ಕೇಳಿ: ಪ್ರಕಾಶ್ ರೈ
"ಅಪನಗದೀಕರಣದಂಥ ಅತಿ ದೊಡ್ಡ ತಪ್ಪು ಮಾಡಿದ ಕೇಂದ್ರ ಸರಕಾರ ದೇಶದ ಜನರ ಕ್ಷಮೆ ಯಾಚಿಸಬೇಕು" ಎಂದು ನಟ-ನಿರ್ದೇಶಕ ಹಾಗೂ ನಿರ್ಮಾಪಕರಾದ ಪ್ರಕಾಶ್ ರೈ ಬುಧವಾರ ಒತ್ತಾಯಿಸಿದ್ದಾರೆ. ಅಪನಗದೀಕರಣಕ್ಕೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.
ಅಪನಗದೀಕರಣಕ್ಕೆ ಒಂದು ವರ್ಷ: ಮೋದಿ ಮೇಲೆ ವ್ಯಂಗ್ಯೋಕ್ತಿಯ ಪ್ರಹಾರ
ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು "ಸಂಬಂಧಪಟ್ಟವರ ಗಮನಕ್ಕೆ" ಎಂಬ ಶೀರ್ಷಿಕೆ ನೀಡಿದ್ದಾರೆ. "ಶ್ರೀಮಂತರು ತಮ್ಮ ಕಪ್ಪು ಹಣವನ್ನು ಹೊಳೆಯುವ ಹೊಸ ನೋಟುಗಳಿಗೆ ಬದಲಾಯಿಸಲು ದಾರಿಗಳು ಕಂಡುಕೊಂಡರು. ಇದರಿಂದ ಹತ್ತಾರು ಲಕ್ಷ ಅಸಹಾಯಕ ಹಾಗೂ ಅಸಂಘಟಿತ ವಲಯದಲ್ಲಿರುವ ಕಾರ್ಮಿಕರ ಬದುಕು ಡೋಲಾಯಮಾನ ಆಯಿತು. ನಮ್ಮ ಕಾಲ ಘಟ್ಟದ ಅತಿ ದೊಡ್ಡ ತಪ್ಪು ನಿರ್ಣಯಕ್ಕೆ ಕ್ಷಮೆ ಕೇಳುವ ಮನಸ್ಸು ಮಾಡಿದಿರಾ?" ಎಂದು ಪ್ರಶ್ನಿಸಿದ್ದಾರೆ.
ಕಳೆದ ವರ್ಷ ನವೆಂಬರ್ ಎಂಟರಂದು ಪ್ರಧಾನಿ ನರೇಂದ್ರ ಮೋದಿ ಐನೂರು, ಸಾವಿರ ರುಪಾಯಿ ನೋಟುಗಳ ನಿಷೇಧದ ಘೋಷಣೆ ಮಾಡಿದ್ದರು. ಕಪ್ಪು ಹಣದ ನಿಯಂತ್ರಣಕ್ಕೆ ಹಾಗೂ ಭಯೋತ್ಪಾದಕರಿಗೆ ಹಣಕಾಸು ನೆರವು ದೊರೆಯದಂತೆ ಮಾಡಲು ಈ ನಿರ್ಧಾರ ಮಾಡಲಾಗಿದೆ ಎಂದು ಪ್ರಧಾನಿ ಹೇಳಿದ್ದರು.
ಚರ್ಚೆಗೆ ಕಾರಣವಾದ ಪ್ರಕಾಶ್ ರೈ ಅವರ ಇತ್ತೀಚಿನ ಹೇಳಿಕೆಗಳಿಗೆ ಮುಂದಿನ ಸ್ಲೈಡ್ ಗಳನ್ನು ಓದಿ.
This day... that age......#justasking... pic.twitter.com/LzcphBwQkz
— Prakash Raj (@prakashraaj) 8 November 2017
ಭಯೋತ್ಪಾದನೆ ಅಂದರೇನು
"ಧರ್ಮ, ಸಂಸ್ಕೃತಿ, ನೈತಿಕತೆ ಹೆಸರಿನಲ್ಲಿ ಭಯ ಬಿತ್ತುವುದು ಭಯೋತ್ಪಾದನೆ ಅಲ್ಲವಾದರೆ.. ಭಯೋತ್ಪಾದನೆ ಅಂದರೆ ಮತ್ತೇನು.. ಸುಮ್ಮನೆ ಕೇಳುತ್ತಿದ್ದೇನೆ."
"ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಯುವ ಜೋಡಿಯ ಮೇಲೆ ನನ್ನ ದೇಶದ ರಸ್ತೆಯಲ್ಲಿ ದೌರ್ಜನ್ಯ, ಹಲ್ಲೆ ನಡೆಸುವುದು ಭಯೋತ್ಪಾದನೆಯಲ್ಲವಾದರೆ... ಗೋ ಹತ್ಯೆ ಮಾಡಿದ್ದಾರೆ ಎಂಬ ಸಣ್ಣ ಅನುಮಾನ ಬಂದ ಕೂಡಲೇ ಕಾನೂನನ್ನು ಕೈಗೆತ್ತಿಕೊಂಡು ಜನರ ಮೇಲೆ ದಾಳಿ ಮಾಡುವುದು ಭಯೋತ್ಪಾದನೆಯಲ್ಲವಾದರೆ... ಸಣ್ಣ ವಿರೋಧದ ಧ್ವನಿಯನ್ನೂ ಹತ್ತಿಕ್ಕಲು ದೌರ್ಜನ್ಯ, ಬೆದರಿಕೆಯ ಟ್ರೋಲ್ ಮಾಡುವುದು ಭಯೋತ್ಪಾದನೆಯಲ್ಲವಾದರೆ.. ಮತ್ತೇನು ಭಯೋತ್ಪಾದನೆ ಅಂದರೆ.. ಸುಮ್ಮನೆ ಕೇಳುತ್ತಿದ್ದೇನೆ."
ತಾಜ್ ಮಹಲ್ ಯಾವಾಗ ಕೆಡವುತ್ತೀರಿ
"ತಾಜ್ ಮಹಲ್ ತಳಪಾಯವನ್ನುನೀವು ಅಗೆಯಲು ಆರಂಭಿಸಿರುವುದರಿಂದ ತಾಜ್ ಮಹಲನ್ನು ಯಾವಾಗ ಕೆಡವಬೇಕೆಂದಿದ್ದೀರಿ? ನಾನು ಕನಿಷ್ಠ ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ತಾಜ್ ಮಹಲನ್ನು ಕೊನೆಯ ಬಾರಿ ತೋರಿಸಿಕೊಂಡು ಬರುತ್ತೇವೆ."
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಸೋತ ಕ್ಷಣ
"ಗೋಮಾಂಸ ತಿನ್ನುವವರು ತಿನ್ನುತ್ತಾರೆ ಅಡ್ಡಿ ಮಾಡಬೇಡಿ. ಹಿಂಸೆ ಮಾಡದೆ ಕೊಲ್ಲಿ ಅಂದಿದ್ರು ಕಾರಂತರು. ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸುವುದು ಸಂತೋಷದ ವಿಷಯ. ಇಲ್ಲಿ ಯಾರು ಗೆದ್ದರು , ಯಾರು ಸೋತರು ಎಂಬುದಕ್ಕಿಂತ ಪ್ರಶಸ್ತಿ ಪ್ರದಾನ ಆಗಬೇಕಿತ್ತು. ಅದು ಆಗಿದೆ. ಪ್ರಶಸ್ತಿಗೆ ನಾನು ಅರ್ಹನಾಗಿದ್ದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಸೋತ ಕ್ಷಣ."
ಚೀಫ್ ಮಿನಿಸ್ಟರೋ ಅಥವಾ ಯಾವುದಾದರೂ ದೇವಸ್ಥಾನದ ಪೂಜಾರಿಯೋ
"ನಾನು ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಒಂದು ವಿಡಿಯೋ ನೋಡಿದೆ. ಅದರಲ್ಲಿದ್ದುದು ಚೀಫ್ ಮಿನಿಸ್ಟರೋ ಅಥವಾ ಯಾವುದಾದರೂ ದೇವಸ್ಥಾನದ ಪೂಜಾರಿಯೋ ಎಂದು ಗೊತ್ತಾಗದಷ್ಟು ಮಟ್ಟಿಗೆ ಅವರ ನಟನೆಯಿತ್ತು. ನನಗೆ 5 ರಾಷ್ಟ್ರಪ್ರಶಸ್ತಿಗಳು ಸಂದಿವೆ. ಅವರ ನಟನೆ ನೋಡಿ ಅವನ್ನು ಅವರಿಗೆ ಕೊಟ್ಟುಬಿಡೋಣ ಅನ್ನಿಸಿತು! ನಾನೊಬ್ಬ ದೊಡ್ಡ ನಟ. ಅವರೆಲ್ಲ (ರಾಜಕಾರಣಿಗಳು) ನನಗಿಂತ ದೊಡ್ಡ ನಟರಾಗಲು ಯತ್ನಿಸುತ್ತಿದ್ದಾರೆ".