Tirupathi Laddu: ತಿರುಪತಿ ಲಾಡು ಬಗ್ಗೆ ಹೇಳಿಕೆ; ಕ್ಷಮೆ ಕೇಳಿದ ನಟ ಕಾರ್ತಿಗೆ ಪವನ್ ಕಲ್ಯಾಣ್ ಹೇಳಿದ್ದೇನು?
ತಿರುಪತಿ ಲಾಡು ಬಗ್ಗೆ ನಟ ಕಾರ್ತಿ ಆಡಿದ್ದ ಮಾತುಗಳು ವಿವಾದಕ್ಕೆ ಕಾರಣವಾದ ಬಳಿಕ, ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಎಚ್ಚರಿಕೆ ಕೊಟ್ಟಿದ್ದರು. ಬಳಿಕ ತಮ್ಮ ಮಾತುಗಳಿಗೆ ವಿಷಾದ ವ್ಯಕ್ತಪಡಿಸಿರುವ ನಟ ಕಾರ್ತಿ ಕ್ಷಮೆ ಕೇಳಿದ್ದಾರೆ. ಕಾರ್ತಿ ಮಾತ್ರವಲ್ಲದೆ ಅವರ ಸಹೋದರ ನಟ ಸೂರ್ಯ ಕೂಡ ವಿಷಾದ ವ್ಯಕ್ತಪಡಿಸಿದ್ದಾರೆ. ಕಾರ್ತಿ ಕ್ಷಮೆ ಕೇಳಿದ ಬಳಿಕ ಪವನ್ ಕಲ್ಯಾಣ್ ಪ್ರತಿಕ್ರಿಯೆ ನೀಡಿದ್ದು ಬುದ್ದಿವಾದ ಹೇಳಿದ್ದಾರೆ.
ಕಾರ್ತಿ ನಟಿಸಿರುವ ತಮಿಳು ಸಿನಿಮಾ 'ವೆಯಿಳಾಗನ್' ಸೆಪ್ಟೆಂಬರ್ 27ರಂದು ಬಿಡುಗಡೆಯಾಗಲಿದೆ. ತೆಲುಗಿನಲ್ಲಿ 'ಸತ್ಯಂ-ಸುಂದರಂ' ಹೆಸರಿನಲ್ಲಿ ಡಬ್ ಆಗಿದ್ದು ಬಿಡುಗಡೆಯಾಗಲಿದೆ. ಸಿನಿಮಾ ಪ್ರಚಾರಕ್ಕಾಗಿ ಹೈದರಾಬಾದ್ಗೆ ಬಂದಿದ್ದ ಕಾರ್ತಿ ಕಾರ್ಯಕ್ರಮದ ವೇಳೆ 'ಲಾಡು' ಹೇಳಿಕೆಯಿಂದ ಎಡವಟ್ಟು ಮಾಡಿಕೊಂಡಿದ್ದಾರೆ.

ಕಾರ್ಯಕ್ರಮದ ನಿರೂಪಕಿ ಲಾಡು ಬೇಕಾ? ಎಂದು ತಮಾಷೆಯಾಗಿ ಕೇಳಿದ್ದಾರೆ, ಇದಕ್ಕೆ ಪ್ರತಿಕ್ರಿಯೆ ನೀಡಿ ಕಾರ್ತಿ 'ಲಾಡು ವಿಚಾರ ಈಗ ಬೇಡ, ಅದು ತುಂಬಾ ಸೂಕ್ಷ್ಮ ವಿಚಾರವಾಗಿದೆ, ಈಗ ಲಾಡು ಬೇಡ' ಎಂದು ನಗುತ್ತಾ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ನಿರೂಪಕಿ 'ನಿಮಗಾಗಿ ಮೋತಿಚೂರ್ ಲಾಡು ತರಿಸಿಕೊಡುತ್ತೇವೆ' ಎಂದು ಕೇಳಿದರು, ಆಗ ಕಾರ್ತಿ ಈಗ ಲಾಡು ಬೇಡ ಎಂದು ಹೇಳಿದರು.
ಪವನ್ ಕಲ್ಯಾಣ್ ಆಕ್ಷೇಪ
ಕಾರ್ತಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಡಿಸಿಎಂ ಪವನ್ ಕಲ್ಯಾಣ್, ಸಿನಿಮಾ ಮಂದಿಗೆ ಎಚ್ಚರಿಕೆ ನೀಡುತ್ತಿದ್ದೇನೆ, ಲಾಡು ಬಗ್ಗೆ ಮಾತನಾಡುವುದಾದರೆ ಗಂಭೀರವಾಗಿ ಮಾತನಾಡಿ, ಇಲ್ಲ ಸುಮ್ಮನಿದ್ದುಬಿಡಿ, ಇದು ಸೂಕ್ಷ್ಮವಾದ ವಿಷಯ, ನಟರಾಗಿ ನಾನು ನಿಮ್ಮನ್ನು ಗೌರವಿಸುತ್ತೇನೆ, ಆದರೆ ಸನಾತನ ಧರ್ಮದ ವಿಚಾರ ಬಂದಾಗ ಮಾತನಾಡುವ ಮುನ್ನ ಸಾವಿರ ಬಾರಿ ಯೋಚಿಸಿ ಎಂದಿದ್ದರು.
ಇದಕ್ಕೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾರ್ತಿ, "ತುಂಬಾ ಗೌರವದೊಂದಿಗೆ, ನನ್ನಿಂದ ಆಗಿರುವ ಯಾವುದೇ ಉದ್ದೇಶಪೂರ್ವ ತಪ್ಪು ಗ್ರಹಿಕೆಗೆ ಕ್ಷಮೆ ಯಾಚಿಸುತ್ತೇನೆ. ನಾನು ಕೂಡ ವೆಂಕಟೇಶ್ವರನ ಭಕ್ತನಾಗಿದ್ದೇನೆ. ನಾನು ಯಾವಾಗಲೂ ನಮ್ಮ ಸಂಪ್ರದಾಯಗಳನ್ನು ಗೌರವಿಸುತ್ತೇನೆ" ಎಂದಿದ್ದಾರೆ.
ಕಾರ್ತಿ ಕ್ಷಮೆ ಕೇಳಿದ ಬಳಿಕ ಪವನ್ ಕಲ್ಯಾಣ್ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ವರ್ತನೆ ಮತ್ತು ಪ್ರತಿಕ್ರಿಯೆಯನ್ನು ನಾನು ಪ್ರಶಂಸಿಸುತ್ತೇನೆ. ನಮ್ಮ ಸಂಪ್ರದಾಯಗಳ ಬಗ್ಗೆ ನೀವು ತೋರಿಸಿದ ಗೌರವವನ್ನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇನೆ. ತಿರುಪತಿ ಮತ್ತು ಪೂಜ್ಯವಾದ ಲಾಡುಗಳಂತಹ ವಿಚಾರಗಳು ಲಕ್ಷಾಂತರ ಭಕ್ತರಿಗೆ ಭಾವನಾತ್ಮಕ ವಿಚಾರವಾಗಿದ್ದು, ಅಂತಹ ವಿಷಯಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವುದು ಅಗತ್ಯ ಎಂದಿದ್ದಾರೆ.
ಉದ್ದೇಶಪೂರ್ವಕವಾಗಿ ನೀವು ಮಾತನಾಡಿಲ್ಲ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಸಾರ್ವಜನಿಕ ವ್ಯಕ್ತಿಗಳಾಗಿ ಏಕತೆ ಮತ್ತು ಗೌರವವ ಬೆಳೆಸುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಬಗ್ಗೆ ಸಿನಿಮಾ ಮೂಲಕ ಸ್ಪೂರ್ತಿ ನೀಡುತ್ತಲೇ ಮೌಲ್ಯಗಳನ್ನು ಎತ್ತಿ ಹಿಡಿಯಲು ಶ್ರಮಿಸೋಣ ಎಂದು ಹೇಳಿದ್ದಾರೆ. ಕಾರ್ತಿ ಅವರ ಮುಂದಿನ ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.












Click it and Unblock the Notifications