'ರಾಹುಲ್ ಒರಟ; ಪ್ರಧಾನಿಯಾಗಲು ನಾಲಾಯಕ್'
ಲಖ್ನೋ, ನ.22: 'ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ತುಂಬಾ ಒರಟು. ಆತ ಈ ದೇಶದ ಪ್ರಧಾನ ಮಂತ್ರಿಯಾಗಲು ನಾಲಾಯಕ್' ಎಂದು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರು ರಾಹುಲ್ ಗಾಂಧಿ ಕುರಿತು ಸರ್ಟಿಫಿಕೇಟ್ ನೀಡಿದ್ದಾರೆ.
'ದೇಶ ಮತ್ತು ವಿದೇಶದಲ್ಲಿ ಮನಮೋಹನ್ ಸಿಂಗ್ ಅವರನ್ನು ಅವಮಾನಗೊಳಿಸಿದ್ದಾರೆ. ಸುಗ್ರೀವಾಜ್ಞೆಯನ್ನು ಸಾರ್ವಜನಿಕವಾಗಿ ಹರಿದುಹಾಕುವ ಮೂಲಕ ದೇಶದ ಪ್ರಧಾನಿಯ ಸ್ಥಾನಮಾನವನ್ನು ರಾಹುಲ್ ಕುಬ್ಜವಾಗಿಸಿದರು' ಎಂದು ರಾಹುಲ್ ವಿರುದ್ಧ ಮುಲಾಯಂ ಹರಿಹಾಯ್ದಿದ್ದಾರೆ.

'ತನ್ನ ಒರಟು ವರ್ತನೆಯಿಂದ ದೇಶದ ಪ್ರಧಾನಿಯಾಗಲು ತಕ್ಕ ವ್ಯಕ್ತಿಯಲ್ಲ' ಎಂದು ಖುದ್ದು ರಾಹುಲ್ ಗಾಂಧಿಯೇ ನಿರೂಪಿಸಿದ್ದಾರೆ. ಹಾಲಿ ಪ್ರಧಾನಿಯ ಗೌರವವನ್ನು ಮಣ್ಣುಪಾಲು ಮಾಡಿರುವುದು ವಿರೋಧಪಕ್ಷಗಳಲ್ಲ. ಬದಲಿಗೆ ಅವರದ್ದೇ ಕಾಂಗ್ರೆಸ್ ಪಕ್ಷದ ನಾಯಕ. ಇದನ್ನು ಸಹಿಸಿಕೊಂಡು ಪ್ರಧಾನಿ ಸಿಂಗ್ ಸುಮ್ಮನಿರಬಾರದಿತ್ತು. ತಕ್ಷಣ ಅವರು ರಾಜೀನಾಮೆ ನೀಡಬೇಕಿತ್ತು' ಎಂದು ಮುಲಾಯಂ ತಡವಾಗಿ ವಿಶ್ಲೇಷಿಸಿದ್ದಾರೆ.
ತಮ್ಮ ಸಮಾಜವಾದಿ ಪಕ್ಷದ ವತಿಯಿಂದ 'ದೇಶ ಉಳಿಸಿ- ದೇಶ ನಿರ್ಮಾಣ ಮಾಡಿ' (Desh Bachao-Desh Banao) ಅಭಿಯಾನ ಹಮ್ಮಿಕೊಂಡಿರುವ ಮುಲಾಯಂ ಬರೇಲಿಯಲ್ಲಿ ಮೂರನೇ ಸಮಾವೇಶದಲ್ಲಿ ಭಾಗವಹಿಸಿ, ಕಾಂಗ್ರೆಸ್ ಯುವರಾಜನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರತು.
ಇದೇ ವೇಳೆ 'ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಬಡವರ-ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ' ಎಂದು ಮುಲಾಯಂ ಕಿಡಿಕಾರಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಎಂದು ಮುಲಾಯಂ ಇದೇ ಸಂದರ್ಭದಲ್ಲಿ ಪುನರುಚ್ಚರಿಸಿದರು.












Click it and Unblock the Notifications