ಉತ್ತರಾಖಂಡದಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ ಸಿಗಲಿದೆಯೇ?: ABP-Cvoter ಸಮೀಕ್ಷೆ ಏನು ಹೇಳುತ್ತೆ?
ಮುಂಬರುವ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಎಬಿಪಿ-ಸಿವೋಟರ್ ಸಮೀಕ್ಷೆ ಹೇಳಿದೆ.
70 ವಿಧಾನಸಭಾ ಕ್ಷೇತ್ರಗಳ ಉತ್ತರಾಖಂಡ್ ವಿಧಾನಸಭೆಯಲ್ಲಿ ಬಿಜೆಪಿ 42 ರಿಂದ 46 ಸೀಟುಗಳನ್ನು ಗೆಲ್ಲಬಹುದು ಎಂದು ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಹೇಳಲಾಗಿದೆ.
ಹಾಗೆಯೇ ಕಾಂಗ್ರೆಸ್ ಮೈತ್ರಿಕೂಟವು 22 ರಿಂದ 25 ಸೀಟುಗಳನ್ನು ಗೆಲ್ಲಬಹುದು ಎಂದು ಹೇಳಲಾಗಿದೆ. 2022ರಲ್ಲಿ ಗೋವಾ, ಮಣಿಪುರ್, ಪಂಜಾಬ್, ಉತ್ತರಪ್ರದೇಶದಲ್ಲೂ ಚುನಾವಣೆ ನಡೆಯಲಿದೆ.
ಇದೇ ಮೊದಲ ಬಾರಿಗೆ ಆಮ್ ಆದ್ಮಿ ಪಕ್ಷವು ಖಾತೆ ತೆರೆಯುವ ಸಾಧ್ಯತೆ ಇದ್ದು, ನಾಲ್ಕು ಸೀಟುಗಳವರೆಗೆ ಗೆಲ್ಲಬಹುದು ಎಂದು ಹೇಳಲಾಗಿದೆ. ಇದಲ್ಲದೆ ಮತ ಗಳಿಕೆಯ ಪ್ರಮಾಣದಲ್ಲಿಯೂ ಕಾಂಗ್ರೆಸ್ ಶೇ.34, ಬಿಜೆಪಿ ಶೇ.44.6 ಹಾಗೂ ಎಎಪಿ ಶೇ.14.7 ಮತವನ್ನು ಗಳಿಸಲಿದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ನಲ್ಲಿ ನಡೆದ ಸಮೀಕ್ಷೆಯನ್ನು ಹೋಲಿಸಲಾಗಿದ್ದು, ಸೆಪ್ಟೆಂಬರ್ಗೆ ಹೋಲಿಸಿದರೆ ಅಕ್ಟೋಬರ್ನಲ್ಲಿ ಬಿಜೆಪಿ ಮತ ಗಳಿಕೆ ಪ್ರಮಾಣ ಕೊಂಚ ಏರಿಕೆಯಾಗಿದೆ. ಸೆಪ್ಟೆಂಬರ್ನಲ್ಲಿ ಬಿಜೆಪಿ ಶೇ.43.1ರಷ್ಟು ಮತಗಳಿಕೆಯನ್ನು ಹೊಂದಿದ್ದರೆ ಇದೀಗ ಶೇ.44.6 ಎಂದು ಹೇಳಲಾಗಿದೆ.
ಕಾಂಗ್ರೆಸ್ ಶೇ.32.6ರಷ್ಟು ಮತವನ್ನು ಪಡೆಯಲಿದೆ ಎಂದು ಸೆಪ್ಟೆಂಬರ್ನಲ್ಲಿ ಹೇಳಿದ್ದರೆ, ಈಗ ಶೇ.34ಕ್ಕೆ ಏರಿಕೆಯಾಗಿದೆ. 2017ರ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ ಶೇ. 33.5, ಬಿಜೆಪಿ ಶೇ. 43.5 ಇತರರು ಶೇ.25ರಷ್ಟು ಮತವನ್ನು ಪಡೆದಿದ್ದರು.
ಬಿಜೆಪಿಯು ಈ ವರ್ಷದಲ್ಲಿ ಸಾಕಷ್ಟು ರಾಜಕೀಯ ಪಲ್ಲಟಗಳನ್ನು ಕಂಡಿದೆ. ಉತ್ತರಾಖಂಡದಲ್ಲಿ ಸತತ ಎರಡು ಮುಖ್ಯಮಂತ್ರಿಗಳನ್ನು ಬದಲಾಯಿಸಲಾಗಿತ್ತು.
ಜೂನ್ ತಿಂಗಳಿನಲ್ಲಿ ಉತ್ತರಾಖಂಡ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಹಿರಿಯ ನಾಯಕ ಪುಷ್ಕರ್ ಸಿಂಗ್ ಧಮಿ ಅವರನ್ನು ಆಯ್ಕೆ ಮಾಡಲಾಗಿದೆ.
ಉತ್ತರಾಖಂಡದಲ್ಲಿ ತೀರಥ್ ಸಿಂಗ್ ರಾವತ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಶಾಸಕರು ಹಿರಿಯ ನಾಯಕ ಪುಷ್ಕರ್ ಸಿಂಗ್ ಧಮಿ ಅವರನ್ನು ಆಯ್ಕೆ ಮಾಡಲಾಗಿತ್ತು.
ಕಳೆದ ನಾಲ್ಕು ತಿಂಗಳ ಹಿಂದೆ ಉತ್ತರಾಖಂಡ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ತೀರಥ್ ಸಿಂಗ್ ರಾವತ್ ಅವರು ದಿಢೀರ್ ಆಗಿ ರಾಜೀನಾಮೆ ನೀಡಿದ್ದರು.
ತಾವು ಸಿಎಂ ಸ್ಥಾನದಲ್ಲಿ ಮುಂದುವರೆದರೆ ಸಾಂವಿಧಾನಿಕ ಬಿಕ್ಕಟ್ಟು ಸಂಭವಿಸಬಹುದು ಎಂದು ಅವರು ತಮ್ಮ ರಾಜೀನಾಮೆಗೆ ಕಾರಣ ನೀಡಿದ್ದಾರೆ.
ವಿಪರ್ಯಾಸವೆಂದರೆ, ಒಬ್ಬ ಮುಖ್ಯಮಂತ್ರಿ ಹೊರತುಪಡಿಸಿ ಬೇರೆ ಯಾರೂ ಕೂಡ ಉತ್ತರಾಖಂಡ ಸಿಎಂ ಆಗಿ ಪೂರ್ಣಾವಧಿಯನ್ನು ಪೂರೈಸಿಲ್ಲ. ಇದುವರೆಗೆ ಉತ್ತರಾಖಂಡ 9 ಮುಖ್ಯಮಂತ್ರಿಗಳನ್ನು ಕಂಡಿದೆ.
2000ರಲ್ಲಿ ಉತ್ತರಾಖಂಡ ರಾಜ್ಯ ರಚನೆಯಾದ ನಂತರ 2002 ರಿಂದ 2007 ರವರೆಗೆ ಎನ್.ಡಿ ತಿವಾರಿ ಅವರು ಐದು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.
2000ರಲ್ಲಿ ಹಂಗಾಮಿ ವಿಧಾನಸಭೆ ರಚನೆಯಾದಾಗ ಬಿಜೆಪಿ ಸರ್ಕಾರ ರಚಿಸಿತ್ತು. ಆಗ ನಿತ್ಯಾನಂದ ಸ್ವಾಮಿ ಮೊದಲ ಮುಖ್ಯಮಂತ್ರಿಯಾಗಿದ್ದರು. ನಂತರ ಭಗತ್ ಸಿಂಗ್ ಕೋಶಿಯಾರಿ ಸಿಎಂ ಆಗಿದ್ದರು. 2007ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಭುವನ್ ಚಂದ್ರ ಖಂಡೂರಿ , ರಮೇಶ್ ಪೋಕ್ರಿಯಾಲ್ (2ವರ್ಷ 75 ದಿನ) ಮತ್ತೊಮ್ಮೆ ಖಂಡೂರಿ (184 ದಿನ) ಸಿಎಂ ಆಗಿದ್ದರು. 2012 ರಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರ ಹಿಡಿದಾಗಲೂ ವಿಜಯ್ ಬಹುಗುಣ (1 ವರ್ಷ 324 ದಿನ), ಮತ್ತು ಹರೀಶ್ ರಾವತ್ (2 ವರ್ಷ 55 ದಿನ) ಸಿಎಂ ಆಗಿದ್ದರು.
ಈ ಅವಧಿಯಲ್ಲಿ ಕೆಲಕಾಲ ರಾಷ್ಟ್ರಪತಿ ಆಡಳಿತವೂ ಜಾರಿಯಲ್ಲಿತ್ತು. ನಾಲ್ಕನೇ ವಿಧಾನಸಭೆಗೆ ನಡೆದ (2017 ರಿಂದ 2022) ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿದಾಗ ತ್ರಿವೇಂದ್ರ ಸಿಂಗ್ ರಾವತ್ ಸುಮಾರು 4 ವರ್ಷ ಸಿಎಂ ಆಗಿದ್ದರು. ಕಳೆದ ನಾಲ್ಕು ತಿಂಗಳ ಹಿಂದೆ ಬಿಜೆಪಿ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡಿದ್ದರಿಂದ ತೀರ್ಥ ಸಿಂಗ್ ರಾವತ್ 114 ದಿನ ಆಡಳಿತ ನಡೆಸಿ ಅವಧಿಗೂ ಮುನ್ನವೇ ನಿರ್ಗಮಿಸಿದ್ದಾರೆ.
ತೀರಥ್ ಸಿಂಗ್ ಅವರು ಶಾಸಕರಾಗಿರಲಿಲ್ಲ. ಹೀಗಾಗಿ ಅವರು ಮುಂದಿನ ಎರಡು ತಿಂಗಳು ಒಳಗೆ ಚುನಾವಣೆಗೆ ಸ್ಪರ್ಧಿಸಬೇಕಾಗಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಚುನಾವಣೆ ನಡೆಸುವುದು ಸಾಧ್ಯವಾಗಿರಲಿಲ್ಲ ಎಂದು ಚುನಾವಣೆ ಆಯೋಗ ಹೇಳಿತ್ತು. ಅಲ್ಲದೇ ಚುನಾವಣೆ ನಡೆಸಬೇಕಾದರೆ ಅವಧಿ ಕನಿಷ್ಠ 1 ವರ್ಷ ಇರಬೇಕು ಎಂಬ ನಿಯಮ ಕೂಡ ಇದೆ. ಹೀಗಾಗಿ ಅವರು ಸಿಎಂ ಆಗಿ ಮುಂದುವರೆಯಲು ಸಾಧ್ಯವಾಗಲಿಲ್ಲ.












Click it and Unblock the Notifications