Gujarat Election: 8 ನಗರಗಳಲ್ಲಿ ಪ್ರತಿ 4 ಕಿ.ಮೀಗೊಂದು ಶಾಲೆ ನಿರ್ಮಿಸುತ್ತೇವೆ ಎಂದ ಎಎಪಿ
ಅಹಮದಾಬಾದ್, ಅಕ್ಟೋಬರ್ 18: ಸಿಬಿಐ ವಿಚಾರಣೆಯ ಮರುದಿನವೇ ಗುಜರಾತ್ನಲ್ಲಿ ಪ್ರಚಾರ ಕೈಗೊಂಡಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಶಾಲೆ ನಿರ್ಮಾಣ ಮಾಡುವ ಭರವಸೆ ನೀಡಿದ್ದಾರೆ.
ಗುಜರಾತ್ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ, ಎಂಟು ನಗರಗಳಲ್ಲಿ ಪ್ರತಿ 4 ಕಿ.ಮೀಗೆ ಒಂದು ಸರ್ಕಾರಿ ಶಾಲೆ ನಿರ್ಮಿಸುವುದಾಗಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಗುಜರಾತ್ನಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, 'ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐ 9 ತಾಸುಗಳ ಕಾಲ ನನ್ನನ್ನು ವಿಚಾರಣೆ ನಡೆಸಿದೆ. ನಾನು ಎಲ್ಲದಕ್ಕೂ ಸಿದ್ಧನಾಗಿದ್ದೇನೆ. ಜೈಲಿಗೆ ಹೋಗುವುದಕ್ಕೂ ನಾನು ಹೆದರಲಾರೆ. ಆದರೆ, ಗುಜರಾತ್ನಲ್ಲಿ ಶಾಲೆಗಳ ನಿರ್ಮಾಣ ಮಾತ್ರ ನಿಲ್ಲುವುದಿಲ್ಲ' ಎಂದು ಹೇಳಿದ್ದಾರೆ.

ಗುಜರಾತ್ನ ಜನರು ಈಗಾಗಲೇ ತೀರ್ಮಾನ ಮಾಡಿದ್ದಾರೆ. ತಮ್ಮ ಮಕ್ಕಳಿಗಾಗಿ ಶಾಲೆಗಳನ್ನು ನಿರ್ಮಿಸಲು ಗುಜರಾತಿಗಳು ನಿರ್ಧರಿಸಿದ್ದಾರೆ. ಶಾಲೆಗಳನ್ನು ನಿರ್ಮಿಸುವ ಪಕ್ಷವನ್ನೇ ಅವರು ಆಯ್ಕೆ ಮಾಡಲಿದ್ದಾರೆ ಎಂದು ಸಿಸೋಡಿಯಾ ತಿಳಿಸಿದ್ದಾರೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇ.ಡಿ. ಹಾಗೂ ಸಿಬಿಐಯನ್ನು ದುರುಪಯೋಗ ಪಡಿಸಿಕೊಳ್ಳಬಹುದು. ಆದರೆ, ಶಾಲೆ ನಿರ್ಮಿಸುವವರನ್ನು ಅವರು ಜೈಲಿಗೆ ಹಾಕಲಾರರು ಎಂದು ಹೇಳಿದ್ದಾರೆ.
ಎಎಪಿ ತಂಡ ನಡೆಸಿದ ಸಮೀಕ್ಷೆಯ ಪ್ರಕಾರ, ಗುಜರಾತ್ನ ಒಟ್ಟು 48,000 ಸರ್ಕಾರಿ ಶಾಲೆಗಳಲ್ಲಿ 32,000 ಶಾಲೆಗಳು ಕೆಟ್ಟ ಸ್ಥಿತಿಯಲ್ಲಿವೆ ಎಂದು ತಿಳಿಸಿದ್ದಾರೆ.

ಎಎಪಿ ಸರ್ಕಾರವು ಗುಜರಾತ್ನಲ್ಲಿ ಅಧಿಕಾರಕ್ಕೆ ಬಂದರೆ, ಅಹಮದಾಬಾದ್, ಸೂರತ್, ವಡೋದರಾ, ಜಾಮ್ನಗರ, ರಾಜಕೋಟ, ಭಾವನಗರ, ಗಾಂಧಿನಗರ ಮತ್ತು ಜುನಾಗಢಗಳಲ್ಲಿ ಪ್ರತಿ 4 ಕಿ.ಮೀಗೆ ಒಂದು ಸರ್ಕಾರಿ ಶಾಲೆಯನ್ನು ನಿರ್ಮಿಸಲಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.
'ಅಧಿಕಾರಕ್ಕೆ ಬಂದ ಬಳಿಕ ಒಂದು ವರ್ಷದೊಳಗೆ, ಪ್ರತಿ 4 ಕಿ.ಮೀಗೆ ಒಂದು ಭವ್ಯವಾದ ಸರ್ಕಾರಿ ಶಾಲೆಯನ್ನು ನಿರ್ಮಿಸುತ್ತೇವೆ. ಈ ಎಂಟು ನಗರಗಳ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಉತ್ತಮವಾಗಿರುತ್ತದೆ' ಎಂದು ತಿಳಿಸಿದ್ದಾರೆ.
ಗುಜರಾತ್ ಬಜೆಟ್ ಅನ್ನೂ ಸಹ ನಾವು ಅಧ್ಯಯನ ಮಾಡಿದ್ದೇವೆ. ಕಳೆದ 27 ವರ್ಷಗಳ ಬಿಜೆಪಿ ಆಡಳಿತದಲ್ಲಿ ಶಾಲೆಗಳಿಗೆ ಹೆಚ್ಚು ಅನುದಾನ ಬಂದಿಲ್ಲವೆಂದು ಅವರು ಹೇಳಿದ್ದಾರೆ.
ಗುಜರಾತ್ನಲ್ಲಿ 44 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ತೆರಳುತ್ತಾರೆ. ಈ ಎಲ್ಲಾ ಮಕ್ಕಳ ಪೋಷಕರು ಶಾಲೆಗಳ ಬಗ್ಗೆ ದೂರು ಹೊಂದಿದ್ದಾರೆ. ಕಾರಣ, ಖಾಸಗಿ ಶಾಲೆಗಳ ಶುಲ್ಕ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಇನ್ನುಳಿದ 53 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ತೆರಳುತ್ತಾರೆ. ಗುಜರಾತ್ನಲ್ಲಿ ಒಟ್ಟು ಒಂದು ಕೋಟಿ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನದಲ್ಲಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.
ರಾಜ್ಯದ ಒಟ್ಟು 18,000 ಶಾಲೆಗಳಲ್ಲಿ ತರಗತಿಯ ಕೊಠಡಿಗಳಿಲ್ಲ. ಸರಕಾರದ ಬಜೆಟ್ನಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿಲ್ಲ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಸಹಾಯಕ ಶಿಕ್ಷಕರನ್ನೂ ನೇಮಕ ಮಾಡಿಲ್ಲ. ಶಿಕ್ಷಕರ ಅರ್ಹತಾ ಪರೀಕ್ಷೆಯನ್ನೂ ನಡೆಸಿಲ್ಲ ಎಂದು ಆರೋಪಿಸಿದ್ದಾರೆ.
ಸಿಬಿಐ ವಿರುದ್ಧ ಮನೀಶ್ ಸಿಸೋಡಿಯಾ ಗಂಭೀರ ಆರೋಪ
ಅಬಕಾರಿ ನೀತಿ ಹಗರಣದ ವಿರುದ್ಧ ವಿಚಾರಣೆಗೆ ಒಳಗಾಗಿರುವ ಸಿಸೋಡಿಯಾ, ಸಿಬಿಐ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಆಜ್ಞೆಯ ಮೇರೆಗೆ ಸಿಬಿಐ ನಡೆದುಕೊಳ್ಳುತ್ತಿದೆ. ಗುಜರಾತ್ಗೆ ತೆರಳದಂತೆ ಅವರು ನನ್ನನ್ನು ತಡೆಯುತ್ತಿದ್ದಾರೆ. ಎಎಪಿ ತೊರೆದು ಬಿಜೆಪಿ ಸೇರುವಂತೆ ಸಿಬಿಐ ಅಧಿಕಾರಿಗಳು ಒತ್ತಾಯ ಮಾಡುತ್ತಿದ್ದಾರೆ. ಎಎಪಿ ತೊರೆದರೆ, ದೆಹಲಿ ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಅವರು ಹೇಳಿದ್ದಾರೆ ಎಂದು ಸಿಸೋಡಿಯಾ ಆರೋಪಿಸಿದ್ದಾರೆ.
ಈ ಆರೋಪವನ್ನು ತಳ್ಳಿಹಾಕಿರುವ ಸಿಬಿಐ, ಸಿಸೋಡಿಯಾ ಅವರ ವಿಚಾರಣೆಯನ್ನು ಕಾನೂನು ರೀತಿಯಲ್ಲೇ ಮಾಡಿದ್ದೇವೆ. ಇದೇ ರೀತಿಯಲ್ಲಿ ಮುಂದೆಯೂ ವಿಚಾರಣೆ ನಡೆಯಲಿದೆ ಎಂದು ಹೇಳಿದೆ.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಎಎಪಿ ಪೈಪೋಟಿ ಒಡ್ಡಿದೆ. ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಗುಜರಾತ್ನಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಎಎಪಿ ನಾಯಕರು ಹೇಳುತ್ತಿದ್ದಾರೆ.












Click it and Unblock the Notifications