ಚುನಾವಣೆಗೆ ಟಿಕೆಟ್ ನೀಡಿಲ್ಲ ಎಂದು ಟವರ್ ಹತ್ತಿದ ಆಪ್ ನಾಯಕ!
ನವದೆಹಲಿ, ನ.13: ಮುಂಬರುವ ದೆಹಲಿಯ ಪೌರ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ ಎಂದು ಆಮ್ ಆದ್ಮಿ ಪಕ್ಷದ ನಾಯಕರೊಬ್ಬರು ಮೊಬೈಲ್ ಟವರ್ ಹತ್ತಿ ಪ್ರತಿಭಟನೆ ನಡೆಸಿರುವ ಘಟನೆ ಭಾನುವಾರ ನಡೆದಿದೆ.
ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಆಮ್ ಆದ್ಮಿ ಪಕ್ಷವು ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಒಟ್ಟು 134 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 60ಕ್ಕೂ ಹೆಚ್ಚು ಮಹಿಳೆಯರಿಗೆ ಸ್ಥಾನವನ್ನು ನೀಡಲಾಗಿದೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ 134 ಆಪ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಈ ಪಟ್ಟಿಯಲ್ಲಿ ತನ್ನ ಹೆಸರಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಪೂರ್ವ ದೆಹಲಿಯ ಮಾಜಿ ಕೌನ್ಸಿಲರ್ ಹಸೀಬ್-ಉಲ್ ಹಸನ್, ಮೊಬೈಲ್ ಟವರ್ ಹತ್ತಿ ಫೇಸ್ಬುಕ್ ಲೈವ್ ಬಂದು ಆಕ್ರೋಶ ಹೊರ ಹಾಕಿದ್ದಾರೆ.
ತಮಗೆ ಏನಾರೂ ಅಪಾಯ ಸಂಭವಿಸಿದರೆ ಅದಕ್ಕೆ ಎಎಪಿ ನಾಯಕರಾದ ಅತಿಶಿ ಮತ್ತು ದುರ್ಗೇಶ್ ಪಾಠಕ್ ಕಾರಣ ಎಂದು ಆರೋಪ ಮಾಡಿದ್ದಾರೆ.
"ಇವತ್ತು ನನಗೆ ಏನಾದರೂ ಸಂಭವಿಸಿದರೆ ಅಥವಾ ನಾನು ಸತ್ತರೆ ಅದಕ್ಕೆ ಎಎಪಿಯ ದುರ್ಗೇಶ್ ಪಾಠಕ್ ಮತ್ತು ಅತಿಶಿ ಹೊಣೆಯಾಗುತ್ತಾರೆ. ನನ್ನ ಬ್ಯಾಂಕ್ ಪಾಸ್ಬುಕ್ ಸೇರಿದಂತೆ ನನ್ನ ಮೂಲ ದಾಖಲೆಗಳು ಅವರ ಬಳಿ ಇವೆ. ನಾಳೆ ನಾಮಪತ್ರ ಸಲ್ಲಿಸಲು ಕೊನೆಯ ದಿನ. ಆದರೆ ಅವರು ನನ್ನ ದಾಖಲೆಗಳನ್ನು ನನಗೆ ನೀಡುತ್ತಿಲ್ಲ" ಎಂದು ವಿಡಿಯೋದಲ್ಲಿ ಹಸೀಬ್-ಉಲ್ ಹಸನ್ ಆರೋಪಿಸಿದ್ದಾರೆ.
ಚುನಾವಣೆಯಲ್ಲಿ ಆಪ್ ತನ್ನನ್ನು ಕಣಕ್ಕಿಳಿಸುತ್ತದೆಯೇ ಎಂಬ ಬಗ್ಗೆ ನನಗೆ ಚಿಂತೆಯಿಲ್ಲ. ಆದರೆ ತಮ್ಮ ದಾಖಲೆಗಳನ್ನು ಮರಳಿ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಹೇಳಿದರು.
"ಮಾಧ್ಯಮಗಳು ಬರದೇ ಇದ್ದಿದ್ದರೆ ದುರ್ಗೇಶ್ ಪಾಠಕ್, ಅತಿಶಿ, ಸಂಜಯ್ ಸಿಂಗ್ ನನ್ನ ದಾಖಲೆಗಳನ್ನು ಹಿಂತಿರುಗಿಸುತ್ತಿರಲಿಲ್ಲ. ಅವರು ದೀಪು ಚೌಧರಿಗೆ ಟಿಕೆಟ್ ಅನ್ನು 3 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ.,ನನ್ನಿಂದ ಹಣ ಕೇಳಿದರು ಆದರೆ ನನ್ನ ಬಳಿ ಹಣವಿಲ್ಲ" ಎಂದು ಎಎಪಿಯ ಹಸೀಬ್ ಉಲ್ ಹಸನ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ದೆಹಲಿ ಮಹಾನಗರ ಪಾಲಿಕೆಯ 250 ವಾರ್ಡ್ ಗಳಿಗೆ ಡಿಸೆಂಬರ್ 4 ರಂದು ಚುನಾವಣೆ ನಡೆಯಲಿದೆ. ನಂತರ ಡಿಸೆಂಬರ್ 7ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ.