Atishi Marlena: ನಿಯೋಜಿತ ಸಿಎಂ ಬಗ್ಗೆ ಕಮೆಂಟ್, ಪಕ್ಷದ ನಾಯಕಿ ರಾಜೀನಾಮೆ ಕೇಳಿದ ಎಎಪಿ!
ನವದೆಹಲಿ, ಸೆಪ್ಟೆಂಬರ್ 17: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಕಲ್ಕಾಜಿ ಕ್ಷೇತ್ರದ ಎಎಪಿ ಶಾಸಕಿ ಅತಿಶಿ ಮರ್ಲೆನಾ ಸಿಂಗ್ (43) ಆಯ್ಕೆಯಾಗಿದ್ದಾರೆ. ಹಾಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಂಜೆ 4.30ಕ್ಕೆ ರಾಜೀನಾಮೆ ನೀಡುವ ನಿರೀಕ್ಷೆ ಇದೆ. ಅತಿಶಿ ಆಯ್ಕೆಯ ಬಳಿಕ ಎಎಪಿಯಲ್ಲಿ ಅಸಮಾಧಾನ ಹೆಚ್ಚಾಗಿದೆ. ನೂತನ ಮುಖ್ಯಮಂತ್ರಿ ಬಗ್ಗೆ ಹೇಳಿಕೆ ನೀಡಿದ ಪಕ್ಷದ ನಾಯಕಿ, ರಾಜ್ಯಸಭೆ ಸದಸ್ಯೆ ಸ್ವಾತಿ ಮಲಿವಾಲ್ ರಾಜೀನಾಮೆಗೆ ಬೇಡಿಕೆ ಇಟ್ಟಿದೆ.
ಅತಿಶಿ ಮರ್ಲೆನಾ ಸಿಂಗ್ ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಕೆಲವೇ ಹೊತ್ತಿನಲ್ಲಿ ಪಕ್ಷದ ನಾಯಕಿ, ರಾಜ್ಯಸಭೆ ಸದಸ್ಯೆ ಸ್ವಾತಿ ಮಲಿವಾಲ್, "ಇದು ದೆಹಲಿಗೆ ದುಃಖಕರ ದಿನ" ಎಂದು ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಎಎಪಿ ಪಕ್ಷ ಅಸಮಾಧಾನಗೊಂಡಿದ್ದು, ಸ್ವಾತಿ ಮಲಿವಾಲ್ ರಾಜೀನಾಮೆ ನೀಡಬೇಕು ಎಂದು ಹೇಳಿದೆ.

'ಸ್ವಾತಿ ಮಲಿವಾಲ್ ಎಎಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಆದರೆ ಅವರು ಪ್ರತಿಕ್ರಿಯೆ ನೀಡುವಾಗ ಯಾವುದೇ ಮುಜುಗರ ಇಲ್ಲದೇ ಬಿಜೆಪಿ ನೀಡಿದ ಸ್ಕ್ರಿಪ್ಟ್ ಬಳಕೆ ಮಾಡುತ್ತಾರೆ. ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಮತ್ತು ಬಿಜೆಪಿ ಮೂಲಕ ರಾಜ್ಯಸಭೆಗೆ ಆಯ್ಕೆಯಾಗುವ ದಾರಿ ನೋಡಿಕೊಳ್ಳಬೇಕು' ಎಂದು ಎಎಪಿ ತಿಳಿಸಿದೆ.
ಸ್ವಾತಿ ಮಲಿವಾಲ್ ಹೇಳಿದ್ದೇನು?; ಕಲ್ಕಾಜಿ ಆಪ್ ಶಾಸಕಿ ಅತಿಶಿ ಮರ್ಲೆನಾ ಸಿಂಗ್ ದೆಹಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಸ್ವಾತಿ ಮಲಿವಾಲ್ ಪ್ರತಿಕ್ರಿಯೆ ನೀಡಿ, "ಇಂದು ದೆಹಲಿಗೆ ಬಹಳ ದುಃಖಕರ ದಿನ. ಯಾವ ಮಹಿಳೆಯ ಕುಟುಂಬದವರು ಉಗ್ರ ಅಫ್ಜಲ್ ಗುರು ಮರಣದಂಡನೆಗೆ ಒಳಗಾಗದಂತೆ ದೀರ್ಘಾವಧಿ ಹೋರಾಟ ಮಾಡಿದರೋ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲಾಗಿದೆ. ಅಫ್ವಲ್ ಗುರುಗೆ ಕ್ಷಮಾದಾನ ನೀಡುವಂತೆ ಆಕೆಯ ಪೋಷಕರು ರಾಷ್ಟ್ರಪತಿಗಳಿಗೆ ಪತ್ರವನ್ನು ಬರೆದಿದ್ದರು" ಎಂದು ಹೇಳಿದ್ದರು.
"ಅತಿಶಿ ಮರ್ಲೆನಾ ಸಿಂಗ್ ಪೋಷಕರ ಪ್ರಕಾರ ಉಗ್ರ ಅಫ್ಜಲ್ ಗುರು ಅಮಾಯಕನಾಗಿದ್ದ. ರಾಜಕೀಯ ಪಿತೂರಿಯ ಕಾರಣಕ್ಕೆ ಅವರನ್ನು ಸಿಕ್ಕಿಸಲಾಯಿತು. ರಾಷ್ಟ್ರೀಯ ಭದ್ರತೆ ವಿಚಾರದಲ್ಲಿಯೇ ಹೀಗೆ ಹೇಳಿದವರು ಇವರು. ದೇವರೇ ದೆಹಲಿಯನ್ನು ರಕ್ಷಿಸಬೇಕು" ಎಂದು ಸ್ವಾತಿ ಮಲಿವಾಲ್ ಹೇಳಿದ್ದಾರೆ. ಅಲ್ಲದೇ ಅತಿಶಿ ಮರ್ಲೆನಾ ಸಿಂಗ್ರನ್ನು "ಡಮ್ಮಿ ಸಿಎಂ" ಎಂದು ಟೀಕೆ ಮಾಡಿದ್ದಾರೆ.
ಅತಿಶಿ ಮರ್ಲೆನಾ ಸಿಂಗ್ 1981 ಜೂ.8ರಂದು ಜನಿಸಿದರು. ಅವರ ತಂದೆ ವಿಜಯ್ ಸಿಂಗ್ ಮತ್ತು ತಾಯಿ ತ್ರಿಪ್ತಾ. ತಂದೆ ಮತ್ತು ತಾಯಿ ಇಬ್ಬರು ಸಹ ಪ್ರೊಫೆಸರ್ಗಳು. ರಾಜಕೀಯಲ್ಲಿ 2018ರ ಬಳಿಕ ಸಕ್ರಿಯವಾಗಿರುವ ಅತಿಶಿ ಮರ್ಲೆನಾ ಸಿಂಗ್ ತಮ್ಮ ಹೆಸರು ಅತಿಶಿ ಎಂದು ಮಾತ್ರ ಹೆಚ್ಚು ಹೇಳುತ್ತಾರೆ.
2013ರಲ್ಲಿ ಆದ್ಮಿ ಪಕ್ಷವನ್ನು ಸೇರಿದ ಅತಿಶಿ ಮರ್ಲೆನಾ ಸಿಂಗ್ ಎಎಪಿ ಪಕ್ಷದ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸದ್ಯ ಎಎಪಿಯ ದೆಹಲಿ ಸರ್ಕಾರದಲ್ಲಿ ಶಿಕ್ಷಣ, ಲೋಕೋಪಯೋಗಿ ಸೇರಿದಂತೆ 8 ಖಾತೆಗಳನ್ನು ನಿರ್ವಹಣೆ ಮಾಡುತ್ತಿರುವ ಅತಿಶಿ, ಅರವಿಂದ ಕೇಜ್ರಿವಾಲ್ ಮತ್ತು ಸಿಸೋಡಿಯಾ ಜೈಲು ಸೇರಿದ ಬಳಿಕ ಪಕ್ಷದ ಕಾರ್ಯಕ್ರಮಗಳು, ಮಾಧ್ಯಮ ಸಂವಾದ ಎಲ್ಲದರಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.
ಅತಿಶಿ ಮರ್ಲೆನಾ ಸಿಂಗ್ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರೆ ಸುಷ್ಮಾ ಸ್ವರಾಜ್, ಶೀಲಾ ದೀಕ್ಷಿತ್ ಬಳಿಕ ದೆಹಲಿಯಲ್ಲಿ 3ನೇ ಮಹಿಳಾ ಮುಖ್ಯಮಂತ್ರಿ ಆಡಳಿತ ನಡೆಸಲಿದ್ದಾರೆ. 2020ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅತಿಶಿ ಮರ್ಲೆನಾ ಸಿಂಗ್ ಕಲ್ಕಾಜಿ ಕ್ಷೇತ್ರದಲ್ಲಿ ಬಿಜೆಪಿಯ ಧರಂಬೀರ್ ಸಿಂಗ್ರನ್ನು 11,000 ಮತಗಳ ಅಂತರದಿಂದ ಸೋಲಿಸಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.












Click it and Unblock the Notifications