ಆಧಾರ್ ಜೋಡಣೆಗೆ ಮತ್ತಷ್ಟು ಕಾಲಾವಕಾಶ
ನವದೆಹಲಿ, ಮಾರ್ಚ್ 13: ಆಧಾರ್ ಜೋಡಣೆ ಮಾಡುವ ಕಾಲಾವಕಾಶ ದೊರೆತಿದ್ದು, ಸುಪ್ರೀಂ ಕೋರ್ಟ್ ತೀರ್ಪು ಬರುವ ತನಕ ಸಮಯ ಸಿಗಲಿದೆ. ಈ ಬಗ್ಗೆ ಮಹತ್ವದ ಆದೇಶವೊಂದು ಮಂಗಳವಾರ ಬಂದಿದೆ.
ಈ ಹಿಂದೆ ಮಾರ್ಚ್ 31ರೊಳಗೆ ಆಧಾರ್ ಜೋಡಣೆ ಮಾಡಬೇಕು ಎಂದು ಕಾಲ ಮಿತಿ ವಿಧಿಸಲಾಗಿತ್ತು.ಇದೀಗ ಸುಪ್ರೀಂ ಕೋರ್ಟ್ ನಿಂದ ನಿರಾಳ ದೊರೆತಂತಾಗಿದೆ. ವಿವಿಧ ಸೇವೆಗಳಿಗೆ ಆಧಾರ್ ಜೋಡಣೆ ಮಾಡುವುದಕ್ಕೆ ಕಾಲಾವಕಾಶ ಮುಂದಕ್ಕೆ ಹೋಗಿದೆ. ಬಯೋಮೆಟ್ರಿಕ್ ಗುರುತು ಯೋಜನೆಯ ಸಾಂವಿಧಾನ ಮಾನ್ಯತೆ ಬಗ್ಗೆ ತೀರ್ಪು ಅಂತಿಮ ಆಗುವವರೆಗೆ ಕಾಲಾವಕಾಶ ಮುಂದಕ್ಕೆ ಹೋದಂತಾಗಿದೆ.
ಆಧಾರ್ ಜೋಡಣೆ ಕೊನೆಯ ದಿನಾಂಕ ಮತ್ತೆ ವಿಸ್ತರಣೆ?
ಸುಪ್ರೀಂ ಕೋರ್ಟ್ ತೀರ್ಪು ಹೊರಬರುವವರೆಗೆ ಬ್ಯಾಂಕ್ ಖಾತೆ ಮತ್ತು ಮೊಬೈಲ್ ಫೋನ್ ಗೆ ಜೋಡಣೆ ಮಾಡುವುದನ್ನು ತೀರ್ಪು ಬರುವ ತನಕ ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹಾಕಲಾಗಿದೆ. ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠವು, ಅಂತಿಮ ತೀರ್ಪು ಬರುವ ತನಕ ಆಧಾರ್ ಜೋಡಣೆ ಕಡ್ಡಾಯ ಮಾಡುವಂತಿಲ್ಲ ಎಂದು ಸೂಚಿಸಿದೆ.
ಪಾಸ್ ಪೋರ್ಟ್ ವಿತರಿಸಲು ಆಧಾರ್ ಕಡ್ಡಾಯವಲ್ಲ. ಆದರೆ ಇದೇ ಆಧಾರ್ ಕಾಯ್ದೆ ಸೆಕ್ಷನ್ ಏಳರ ಅಡಿ ಬರುವ ಸೇವೆ ಹಾಗೂ ವಿನಾಯ್ತಿಗೆ ಅನ್ವಯ ಆಗುವುದಿಲ್ಲ ಎಂದು ಕೋರ್ಟ್ ಹೇಳಿದೆ. ಇದಕ್ಕೂ ಮುಂಚೆ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್ ಗೆ ತಿಳಿಸಿತ್ತು. ಮಾರ್ಚ್ ಮೂವತ್ತೊಂದರ ನಂತರವೂ ಆಧಾರ್ ಜೋಡಣೆಗೆ ಅವಕಾಶ ನೀಡುವದನ್ನು ಪರಿಗಣಿಸುವುದಾಗಿ ತಿಳಿಸಿತ್ತು.
ಹಾಗೆ ನೋಡಿದರೆ ಕಳೆದ ವರ್ಷದ ನವೆಂಬರ್ ನಲ್ಲಿ ಆಧಾರ್ ಜೋಡಣೆಗೆ ಅಂತಿಮ ಗಡುವು ವಿಧಿಸಿ, ಆ ನಂತರ ಪ್ಯಾನ್ ಹಾಗೂ ಆಧಾರ್ ಜೋಡಣೆಗೆ ತೆರಿಗೆದಾರರಿಗೆ ಕಾಲಾವಕಾಶವನ್ನು ಈ ವರ್ಷದ ಮಾರ್ಚ್ ಅಂತ್ಯದ ತನಕ ವಿಸ್ತರಿಸಲಾಗಿತ್ತು.