ದೇವರಿಗೆ ಪತ್ರ ಕಳಿಸಿ ಅಂಚೆ ಕಚೇರಿ ವಿಳಾಸ ಇಲ್ಲಿದೆ
ಶಬರಿಮಲೆ, ಡಿ.11: ನಂಬಿದ್ರೆ ನಂಬಿ ಬಿಟ್ಟರೆ ಬಿಡಿ, ದೇವರ ಹೆಸರಿಗೆ ಬರೆದ ಪತ್ರಗಳನ್ನು ತಲುಪಿಸಲು ಅಂಚೆ ಕಚೇರಿಯೊಂದು ನಿಮಗಾಗಿ ಈ ಋತುವಿನಲ್ಲಿ ತೆರೆದಿರುತ್ತದೆ. ಯಾವುದಕ್ಕೂ ನೀವು ಒಮ್ಮೆ ಪ್ರಯತ್ನಿಸಿ ಪತ್ರ ಬರೆದು ಅಂಚೆ ಡಬ್ಬಿಗೆ ಹಾಕಿಬಿಡಿ.
ಕೇರಳದ ಪವಿತ್ರ ಯಾತ್ರಾಸ್ಥಳ ಅಯ್ಯಪ್ಪ ಸ್ವಾಮಿ ಸನ್ನಿಧಿ ಶಬರಿಮಲೆಯಲ್ಲಿ ಇಂಥದ್ದೊಂದು ಅಂಚೆಕಚೇರಿಯಿದೆ. ಬಹುಶಃ ದೇಶದಲ್ಲಿ ಈ ಮಾದರಿ ಪೋಸ್ಟ್ ಆಫೀಸ್ ಇರುವುದು ಇದೊಂದೇ ಇರಬೇಕು. ಇಡೀ ವರ್ಷದಲ್ಲಿ ಚಳಿಗಾಲದಲ್ಲಿ ಮಾತ್ರ ಕಚೇರಿ ಕಾರ್ಯ ನಿರ್ವಹಿಸುತ್ತದೆ.
ಇನ್ನೂ ಸರಿಯಾಗಿ ಕಚೇರಿ ನಿರ್ವಹಣೆ ಅವಧಿ ಬಗ್ಗೆ ತಿಳಿಸಬೇಕಾದರೆ ನವೆಂಬರ್ ಮೊದಲ ವಾರದಿಂದ ಜನವರಿ ಮಧ್ಯಾವಧಿವರೆಗೆ. ಇದರ ಜೊತೆಗೆ ವಿಶು ಅವಧಿಯಲ್ಲಿ 10 ದಿನವಷ್ಟೇ ಕಾರ್ಯನಿರ್ವಹಿಸುತ್ತದೆ. ಅದು ವಾರದಲ್ಲಿ 6 ದಿನ ಮಾತ್ರ ಕಚೇರಿ ಓಪನ್ ಇರುತ್ತದೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕಚೇರಿಯಲ್ಲಿರುವ 6 ಜನ ಸಿಬ್ಬಂದಿ ನಿಷ್ಠೆಯಿಂದ ತಮ್ಮ ಕಾರ್ಯ ನಿರ್ವಹಿಸುತ್ತಾರೆ ಎಂದು ಇಲ್ಲಿನ ಉದ್ಯೋಗಿ 23 ವರ್ಷ ವಯಸ್ಸಿನ ಸಾಯಿ ಜಿ ಪ್ರಕಾಶ್ ಹೇಳುತ್ತಾರೆ.

ಅಯ್ಯಪ್ಪ ಸ್ವಾಮಿ ಭಕ್ತನಾಗಿರುವ ಪ್ರಕಾಶ್ ಗೆ ದೇವರ ಸನ್ನಿಧಿಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾವನೆ ಇದೆ. ದೇವರ ಹೆಸರಿಗೆ ಬರೆದ ಪತ್ರ ಇಲ್ಲಿಗೆ ಬರುತ್ತದೆ. ಅಪ್ಪಟ ಬ್ರಹ್ಮಚಾರಿ ಅಯ್ಯಪ್ಪಸ್ವಾಮಿಯನ್ನು ಮದುವೆಗೆ ಹರಿಸುವಂತೆ ಕೋರಿ ಲಗ್ನಪತ್ರಿಕೆಗಳನ್ನು ಕಳಿಸುತ್ತಾರೆ. ಇನ್ನು ಕೆಲವರು ಅಂಗಡಿ, ಮಳಿಗೆ ಶುಭಾರಂಭ, ಗೃಹಪ್ರವೇಶ ಮುಂತಾದ ಶುಭಕಾರ್ಯಗಳಿಗೆ ದೇವರಕೃಪೆ ಕೋರುತ್ತಾರೆ. [ಸ್ವಾಮಿಯೇ ಶರಣಂ ಅಯ್ಯಪ್ಪ, ಸರತಿ ಸಾಲಲ್ಲಿ ಬನ್ರಪ್ಪ]
ಕರ್ನಾಟಕ ಸೇರಿದಂತೆ ತಮಿಳುನಾಡು, ಆಂದ್ರಪ್ರದೇಶದಿಂದ ಅಯ್ಯಪ್ಪಸ್ವಾಮಿಗೆ ಪತ್ರ ಬರುತ್ತದೆ.ಆದಾಯ ತೆರಿಗೆ ಇಲಾಖೆಗೆ ಈ ಭಾಗದಿಂದ 20 ಜನರ ಪ್ಯಾನ್ ಕಾರ್ಡ್ ಕಳಿಸಲಾಗಿದೆ. [ಅಚಾತುರ್ಯಗಳು: ಅಯ್ಯಪ್ಪಸ್ವಾಮಿಗೆ ಅಸಮಾಧಾನ!]
ಪೊಲೀಸರ ಪ್ರಕಾರ ಇಲ್ಲಿ ಕಳ್ಳತನವಾದ ಪ್ಯಾನ್ ಕಾರ್ಡ್, ಪರ್ಸ್, ಐಡಿ ಕಾರ್ಡ್ ಗಳನ್ನು ಕಳ್ಳರು ಪೋಸ್ಟ್ ಡಬ್ಬದಲ್ಲಿ ಹಾಕಿ ಹೋಗಿರುತ್ತಾರೆ. ಇದನ್ನು ಸಂಬಂಧಪಟ್ಟವರಿಗೆ ಸೇರಿಸುವ ಹೆಚ್ಚುವರಿ ಹೊಣೆಯನ್ನು ಇಲ್ಲಿನ ಅಂಚೆ ಕಚೇರಿ ಸಿಬ್ಬಂದಿ ಮಾಡುತ್ತಿದ್ದಾರೆ.
ಶಬರಿಮಲೆ ಸೀಸನ್ ನಲ್ಲಿ ಸುಮಾರು 4.5 ಮಿಲಿಯನ್ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ. ಅಯ್ಯಪ್ಪಸ್ವಾಮಿ ಪ್ರಸಾದವಾದ ಅಪ್ಪೊಂ ಅರಾವಣಗಳನ್ನು ತಮ್ಮ ಮನೆಗೆ ಶೀಘ್ರವೇ ಕಳಿಸಲು ಈ ಅಂಚೆ ಕಚೇರಿ ಬಳಸುವವರು ಇದ್ದಾರೆ. ಒಟ್ಟಾರೆ ಇಲ್ಲಿನ ಅಂಚೆ ಕಚೇರಿ ವಿಶಿಷ್ಟವಾಗಿ ಜನಪ್ರಿಯತೆ ಗಳಿಸಿದೆ(ಪಿಟಿಐ)











Click it and Unblock the Notifications