ತಮಿಳುನಾಡಿನ ರೈಲು ಬೋಗಿಯಲ್ಲಿ ಬಿರುಕು ಪತ್ತೆ, ತಪ್ಪಿದ ಭಾರೀ ಅಪಘಾತ
ಚೆನ್ನೈ, ಜೂನ್ 5: ತಮಿಳುನಾಡಿನ ಕೊಲ್ಲಂ-ಚೆನ್ನೈ ಎಗ್ಮೋರ್ ಎಕ್ಸ್ಪ್ರೆಸ್ ರೈಲಿನ ಬೋಗಿಯೊಂದರ ಚಾಸಿಸ್ನಲ್ಲಿ ಬಿರುಕುಗಳನ್ನು ಕಂಡ ಬಂದು ಅದನ್ನು ಅಧಿಕಾರಿಗಳು ಪತ್ತೆಹಚ್ಚಿದ ಪರಿಣಾಮವಾಗಿ ಭಾರೀ ಅನುಹುತವೊಂದು ತಪ್ಪಿದೆ.
ಇತ್ತೀಚೆಗೆ ಒಡಿಶಾದಲ್ಲಿ ಸಂಭವಿಸಿದ ಪ್ರಮುಖ ರೈಲು ದುರಂತದಲ್ಲಿ 275 ಜನರು ಸಾವನ್ನಪ್ಪಿ, ಸುಮಾರು 1,200 ಜನರು ಗಾಯಗೊಂಡ ಕೆಲವು ದಿನಗಳ ನಂತರ ಈ ಅವಘಡ ಸಂಭವಿಸುವುದರಲ್ಲಿತ್ತು ಎನ್ನಲಾಗಿದೆ. ಭಾರತದ ರೈಲ್ವೆ ಇತಿಹಾಸದಲ್ಲೇ ಅತ್ಯಂತ ಹೃದಯವಿದ್ರಾವಕ ಘಟನೆ ಬಾಲಸೋರ್ ರೈಲು ಅಪಘಾತಕ್ಕೆ ತಾಂತ್ರಿಕ ದೋಷ ಕಾರಣ ಎನ್ನಲಾಗುತ್ತಿದೆ. ಈ ದುರಂತದ ಕುರಿತು ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ವಹಿಸಿಕೊಳ್ಳುವಂತೆ ರೈಲ್ವೆ ಮಂಡಳಿ ಶಿಫಾರಸು ಮಾಡಿದೆ.

ತಮಿಳುನಾಡಿನ ಸೆಂಗೋಟ್ಟೈ ರೈಲು ನಿಲ್ದಾಣದಲ್ಲಿ ರೋಲಿಂಗ್ ಸ್ಟಾಕ್ ಪರೀಕ್ಷೆಯಲ್ಲಿ ಬಿರುಕುಗಳು ಪತ್ತೆಯಾಗಿವೆ. ನಿನ್ನೆ (ಭಾನುವಾರ) ಮಧ್ಯಾಹ್ನ 3:36 ಕ್ಕೆ ತಮಿಳುನಾಡಿನ ಸೆಂಗೋಟ್ಟೈ ನಿಲ್ದಾಣವನ್ನು ಪ್ರವೇಶಿಸುವಾಗ ರೈಲು ಸಂಖ್ಯೆ 16102 ರ ಎಸ್ 3 ಕೋಚ್ನಲ್ಲಿ ಸಿ & ಡಬ್ಲ್ಯೂ ಸಿಬ್ಬಂದಿ ಬಿರುಕು ಬಿಟ್ಟಿದೆ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಬಿರುಕು ಕಂಡು ಬಂದ ಬೋಗಿಯನ್ನು ರೈಲಿನಿಂದ ಬೇರ್ಪಡಿಸಲಾಗಿದ್ದು, ಬದಲಿ ಕೋಚ್ ಅನ್ನು ಸೇರಿಸಲಾಯಿತು. ನಂತರ ಅದು ಒಂದು ಗಂಟೆಯ ನಂತರ ಸಂಜೆ 4.40 ಕ್ಕೆ ನಿಲ್ದಾಣವನ್ನು ಬಿಟ್ಟಿತು ಎಂದು ವರದಿ ತಿಳಿಸಿದೆ. ಬಿರುಕು ಪತ್ತೆ ಹಚ್ಚಿದ ಸಿಬ್ಬಂದಿಯನ್ನು ಸಮಯೋಚಿತ ನಿರ್ಧಾರಕ್ಕೆ ಪ್ರಶಂಸಿಸಿ ಮಧುರೈ ವಿಭಾಗದ ಡಿಇಎಂನಿಂದ ಪ್ರಶಸ್ತಿ ನೀಡಲಾಗುತ್ತದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

ಏತನ್ಮಧ್ಯೆ, ಒಡಿಶಾದ ಬಾಲಸೋರ್ನಲ್ಲಿ ಟ್ರಿಪಲ್ ರೈಲು ಅಪಘಾತ ಸಂಭವಿಸಿದ 51 ಗಂಟೆಗಳ ನಂತರ ಭಾರತೀಯ ರೈಲ್ವೇ ಸೋಮವಾರ ಅಪಘಾತದಿಂದ ಹಾನಿಗೊಳಗಾದ ಮಾರ್ಗದಲ್ಲಿ ಸೇವೆಗಳನ್ನು ಪುನರಾರಂಭಿಸಿದೆ. ಕೋಲ್ಕತ್ತಾದಿಂದ ದಕ್ಷಿಣಕ್ಕೆ 250 ಕಿಮೀ ಮತ್ತು ಭುವನೇಶ್ವರದಿಂದ ಉತ್ತರಕ್ಕೆ 170 ಕಿಮೀ ದೂರದಲ್ಲಿರುವ ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದ ಬಳಿ ಜೂನ್ 2 ರಂದು ಸಂಜೆ 7 ಗಂಟೆಗೆ ರೈಲು ಅಪಘಾತ ನಡೆದಿತ್ತು. ಬೆಂಗಳೂರು-ಹೌರಾ ಎಕ್ಸ್ಪ್ರೆಸ್ ಮತ್ತು ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್ಪ್ರೆಸ್ - ಮತ್ತು ಸರಕು ರೈಲುಗಳ ನಡುವೆ ಅಪಘಾತ ನಡೆದಿತ್ತು












Click it and Unblock the Notifications