8th pay commission; ಸರ್ಕಾರಿ ನೌಕರರಿಗೆ ಅಪ್ಡೇಟ್ ಕೊಟ್ಟ ಕೇಂದ್ರ
ನವದೆಹಲಿ, ಡಿಸೆಂಬರ್ 04; ಕರ್ನಾಟಕದಲ್ಲಿ ರಾಜ್ಯ ಸರ್ಕಾರಿ ನೌಕರರು 7ನೇ ವೇತನ ಆಯೋಗ ವರದಿಗಾಗಿ ಕಾಯುತ್ತಿದ್ದಾರೆ. ಅತ್ತ ಕೇಂದ್ರ ಸರ್ಕಾರಿ ನೌಕರರು 8ನೇ ವೇತನ ಆಯೋಗ ರಚನೆಯಾಗಲಿದೆಯೇ? ಎಂಬ ನಿರೀಕ್ಷೆಯಲ್ಲಿದ್ದಾರೆ. 2024ರಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ ಸರ್ಕಾರಿ ನೌಕರರ ನಿರೀಕ್ಷೆ ಹೆಚ್ಚಾಗಿದೆ.
ಕೇಂದ್ರ ಹಣಕಾಸು ಕಾರ್ಯದರ್ಶಿ ಟಿ. ವಿ. ಸೋಮನಾಥನ್ ಈ ಕುರಿತು ಹೇಳಿಕೆ ನೀಡಿದ್ದಾರೆ. ಸುಮಾರು 54 ಲಕ್ಷ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು 8ನೇ ವೇತನ ಆಯೋಗ ರಚನೆ ಕುರಿತ ಮಾಹಿತಿಗಾಗಿ ಕಾದು ಕುಳಿತಿದ್ದಾರೆ.

2013ರ ಸೆಪ್ಟೆಂಬರ್ನಲ್ಲಿ ಆಗಿನ ಯುಪಿಎ ಸರ್ಕಾರ 7ನೇ ವೇತನ ಆಯೋಗವನ್ನು ರಚನೆ ಮಾಡಿತ್ತು. ಆದರೆ ಈಗ ಕೇಂದ್ರ ಸರ್ಕಾರ 8ನೇ ವೇತನ ಆಯೋಗ ರಚನೆ ಮಾಡುವ ಬದಲು ನೂತನ ಪಿಂಚಣಿ ಯೋಜನೆಯ ಪರಿಶೀಲನೆಗೆ ಗಮನಹರಿಸಿದೆ ಎಂಬ ಮಾಹಿತಿ ಸಿಕ್ಕಿದೆ.
ಎನ್ಪಿಎಸ್ಗೆ ವಿರೋಧ; ದೇಶದ ಹಲವು ರಾಜ್ಯಗಳು ಕೇಂದ್ರ ಸರ್ಕಾರದ ನೂತನ ಪಿಂಚಣಿ ಯೋಜನೆಯನ್ನು ವಿರೋಧಿಸುತ್ತಿವೆ. ಅಲ್ಲದೇ ಹಲವು ರಾಜ್ಯಗಳು ಇದನ್ನು ರದ್ದುಗೊಳಿಸಿ ಆದೇಶ ಹೊರಡಿಸಿವೆ. ಕರ್ನಾಟಕದಲ್ಲಿ ಸಹ ಸರ್ಕಾರಿ ನೌಕರರು ಎನ್ಪಿಎಸ್ರದ್ದುಗೊಳಿಸಿ ಎಂದು ಬೇಡಿಕೆ ಇಟ್ಟಿದ್ದಾರೆ.
ನೂತನ ಪಿಂಚಣಿ ಯೋಜನೆ ಪ್ರಕಾರ ಉದ್ಯೋಗಿಗಳು ತಮ್ಮ ಮೂಲ ವೇತನದ ಶೇ 10 ಪಿಂಚಣಿಗೆ ಕೊಡುಗೆ ನೀಡುತ್ತಾರೆ ಹಾಗೂ ಸರ್ಕಾರ ಶೇ 14ರಷ್ಟು ವಂತಿಗೆ ನೀಡುತ್ತದೆ. ಆದರೆ ಪ್ರತಿಪಕ್ಷಗಳು ಸಹ ಎನ್ಪಿಎಸ್ ವಿರೋಧಿಸಿವೆ.
ಸದ್ಯದ ಮಾಹಿತಿಯಂತೆ ಕೇಂದ್ರ ಸರ್ಕಾರ 2024ರ ಬಳಿಕ 8ನೇ ವೇತನ ಆಯೋಗವನ್ನು ರಚನೆ ಮಾಡಲಿದೆ. 2026ರಲ್ಲಿ ಅಂದರೆ ಎರಡು ವರ್ಷಗಳ ಬಳಿಕ ವೇತನ ಆಯೋಗ ರಚನೆಯಾಗಲಿದೆ. ಆದರೆ ಕೇಂದ್ರ ಸರ್ಕಾರ ವೇತನ ಆಯೋಗ ರಚನೆ ಮಾಡದೇ ಸರ್ಕಾರಿ ನೌಕರರ ವೇತನವನ್ನು ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ ಈ ಕುರಿತು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. 2024ರ ಏಪ್ರಿಲ್ ಬಳಿಕ ಲೋಕಸಭೆ ಚುನಾವಣೆ ನಡೆಯಲಿದೆ. ಆದ್ದರಿಂದ 2024-25ರ ಬಜೆಟ್ನಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳದ ಕುರಿತು ಘೋಷಣೆ ಮಾಡುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರಿ ನೌಕರರ ಸಂಘ ಈಗಾಗಲೇ ಸರ್ಕಾರಕ್ಕೆ 8ನೇ ವೇತನ ಆಯೋಗ ರಚನೆ ದಿನಾಂಕ ನಿಗದಿಗೊಳಿಸಬೇಕು ಎಂದು ಮನವಿ ಸಲ್ಲಿಕೆ ಮಾಡಿವೆ. 2026ರ ಜನವರಿ 1ರಿಂದ ಜಾರಿಗೆ ಬರುವ ವರ್ಷದಲ್ಲಿ ಆಯೋಗ ರಚನೆ ಮಾಡಬೇಕು.
ಸರ್ಕಾರಿ ನೌಕರರು ಪ್ರಸ್ತುತ 7ನೇ ವೇತನ ಆಯೋದ ಶಿಫಾರಸಿನ ಅನ್ವಯ ವೇತನವನ್ನು ಪಡೆಯುತ್ತಿದ್ದಾರೆ. ಈ ಹಿಂದೆಯೂ ಸರ್ಕಾರ ಸದ್ಯಕ್ಕೆ 8ನೇ ವೇತನ ಆಯೋಗ ರಚನೆ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಹೇಳಿತ್ತು.
ವೇತನ ಏರಿಕೆ, ಪಿಂಚಣಿ ಸೇರಿದಂತೆ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಿಂದ ಸರ್ಕಾರದ ಬೊಕ್ಕಸಕ್ಕೆ ಆಗುವ ಹೊರೆಯನ್ನು ಅಂದಾಜಿಸಿ ವೇತನ ಆಯೋಗದ ರಚನೆಯ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಆದರೆ ಮುಂದಿನ ವರ್ಷ ಚುನಾವಣೆ ಇರುವುದರಿಂದ ಸರ್ಕಾರಿ ನೌಕರರ ಮತ ಸೆಳೆಯಲು ವೇತನ ಹೆಚ್ಚಳದ ಘೋಷಣೆ ಮಾಡುವ ನಿರೀಕ್ಷೆ ಇದೆ.
ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿತ್ತು. ಬಳಿಕ ರಾಜ್ಯ ಸರ್ಕಾರಗಳು ಸಹ ಡಿಎ ಹೆಚ್ಚಳ ಮಾಡಿದ್ದವು. 2024ರ ಲೋಕಸಭೆ ಚುನಾವಣೆ ಬಳಿಕ ದೇಶದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಆ ಸರ್ಕಾರ ವೇತನ ಆಯೋಗದ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ.












Click it and Unblock the Notifications