ದೇಶದ 80ರಷ್ಟು ಜಲಾಶಯಗಳು ಬರಿದು, ಜನರ ಬವಣೆ ಹೇಳತೀರದು
ನವದೆಹಲಿ, ಜೂನ್ 24: ಮಳೆಯ ಅಭಾವದಿಂದ ದೇಶದಲ್ಲಿರುವ ಶೇ. 80ರಷ್ಟು ಜಲಾಶಯಗಳು ಬರಿದಾಗಿವೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.
ಮುಂಗಾರು ಕೇರಳವನ್ನು ಪ್ರವೇಶಿಸಿ ಎರಡು ವಾರಗಳೇ ಕಳೆದಿವೆ ಆದರೂ ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗಿಲ್ಲ.
ಬೆಂಗಳೂರಲ್ಲಿ ಮಳೆ ಬಂದರೆ ಈ ರಸ್ತೆಗಳಲ್ಲಿ ಮಾತ್ರ ಹೋಗ್ಬೇಡಿ
ದೇಶದ ಶೇ.84 ರಷ್ಟು ಹವಾಮಾನ ವಿಭಾಗಗಳಲ್ಲಿ ಮಳೆ ಕೊರತೆ ಕಂಡು ಬಂದಿದ್ದರೆ ಶೇ.80ರಷ್ಟು ಜಲಾಶಯಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದ ನೀರು ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಒಡಿಶಾ ಲಕ್ಷದ್ವೀಪಗಳಲ್ಲಿ ಮಾತ್ರ ಮಳೆಯಾಗಿದೆ. ಇನ್ನುಳಿದೆಡೆ ಭಾನುವಾರದಿಂದ ಮುಂಗಾರು ಚುರುಕಾಗಿದೆ. ಜೂನ್ 29ರಷ್ಟೊತ್ತಿಗೆ ಮುಂಗಾರು ದೇಶವನ್ನು ಆವರಿಸಿಕೊಳ್ಳಲಿದೆ. ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದರೂ ಕೂಡ ಮತ್ತೆ ಚಂಡಮಾರುತ ಉಂಟಾದರೆ ಮಳೆ ಬರುವುದು ಇನ್ನಷ್ಟು ತಡವಾಗಲಿದೆ.
ಜೂನ್ 1 ರಿಂದ ಸೆಪ್ಟೆಂಬರ್ ವರೆಗಿನ ಅವಧಿಯನ್ನು ಮಳಗಾಲ ಎಂದು ಪರಿಗಣಿಸಲಾಗುತ್ತದೆ. ಈ ಬಾರಿ 8 ದಿನ ತಡವಾಗಿ ಅಂದರೆ ಜೂನ್ 8ರಂದು ಮುಂಗಾರು ಮಾರುತಗಳು ಕೇರಳವನ್ನು ಪ್ರವೇಶಿಸಿವೆ.
ಇದರ ಜೊತೆಗೆ ಚಂಡಮಾರುತದ ಪ್ರಭಾವದಿಂದಾಗಿ ಮಾರುತಗಳು ಮಂದಗತಿಯಲ್ಲಿ ಸಾಗುತ್ತಿವೆ. ಹೀಗಾಗಿ ಜೂನ್ 22ರವರೆಗೆ ದೇಶದಲ್ಲಿ ಶೇ.19ರಷ್ಟು ಮಳೆ ಕೊರತೆ ಕಂಡುಬಂದಿದೆ. ದೇಶದಲ್ಲಿ ಒಟ್ಟು 36 ಹವಾಮಾನ ಉಪವಿಭಾಗಗಳಿದ್ದು, ಆ ಪೈಕಿ ಶೇ.84ರಲ್ಲಿ ಮಳೆ ಕೊರತೆ ಉಂಟಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ದೇಶದಲ್ಲಿ 91 ಪ್ರಮುಖ ಜಲಾಶಯಗಳಿದ್ದು ಆ ಪೈಕಿ ಶೇ.80 ಡ್ಯಾಂಗಳಲ್ಲಿ ನೀರಿನ ಸಂಗ್ರಹ ಸಾಮಾನ್ಯಕ್ಕಿಂತ ಕಡಿಮೆ ಇದೆ. 11 ಜಲಾಶಯಗಳಲ್ಲಿ ಶೂನ್ಯ ಪ್ರಮಾಣದ ನೀರಿದ್ದು ನೀರಿನ ಬವಣೆ ಮಿತಿ ಮೀರಿದೆ. ಅಹಮದಾಬಾದ್, ಗಾಂಧಿನಗರ, ಸೂರತ್, ಸುರೇಂದರ್ ನಗರ, ಕರ್ನಾಟಕ, ಚೆನ್ನೈ, ಆಂಧ್ರಪ್ರದೇಶದ ಕೆಲವೆಡೆ ಮಳೆಯಾಗುತ್ತಿದೆ.