ಅಪನಗದೀಕರಣದ ನಡುವೆಯೂ ಶೇ. 7ರ ಗಡಿ ತಲುಪಿದ ಜಿಡಿಪಿ
ನೋಟ್ ಬ್ಯಾನ್ ದೇಶದ ಆರ್ಥಿಕತೆಯ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂಬ ಭಯದ ನಡುವೆಯೇ 2016-17ನೇ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ನಿವ್ವಳ ದೇಶೀಯ ಉತ್ಪನ್ನ ದರ ಶೇಕಡಾ 7 ತಲುಪಿದೆ.
ನವದೆಹಲಿ, ಮಾರ್ಚ್ 1: ಅಪನಗದೀಕರಣ ಭೀತಿಯ ನಡುವೆಯೂ 2016-17ನೇ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ನಿವ್ವಳ ದೇಶೀಯ ಉತ್ಪನ್ನ ದರ ಶೇಕಡಾ 7 ತಲುಪಿದೆ.
ನೋಟ್ ಬ್ಯಾನ್ ದೇಶದ ಆರ್ಥಿಕತೆಯ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂಬ ಭಯದ ನಡುವೆಯೇ ಈ ಸುದ್ದಿ ಹೊರಬಿದ್ದಿದೆ. ಜತೆಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇಕಡಾ 7.1 ತಲುಪಲಿದೆ ಎಂದು ಕೇಂದ್ರ ಸಾಂಖ್ಯಿಕ ಇಲಾಖೆ ಅಂದಾಜು ಮಾಡಿದೆ.
ಇನ್ನು ಮೊದಲ ಮತ್ತು ಎರಡನೇ ತ್ರೈಮಾಸಿಕದ ಜಿಡಿಪಿ ವರದಿಯನ್ನು ಶೇಕಡಾ 7.2 ಹಾಗೂ 7.4 ಎಂದು ಪರಿಷ್ಕರಣೆ ಮಾಡಲಾಗಿದೆ.[ಜುಲೈ 1ರಿಂದ ದೇಶಾದ್ಯಂತ ಏಕಸ್ವರೂಪ ತೆರಿಗೆ ಜಾರಿ: ಕೇಂದ್ರ]
ಈ ಹಿಂದೆ 2016-17ರಲ್ಲಿ ವಾರ್ಷಿಕ ಜಿಡಿಪಿ ಶೇಕಡಾ 7 ಇರಲಿದೆ ಎಂದು ಅಂದಾಜಿಸಲಾಗಿತ್ತು. ಇದಕ್ಕೆ ಸರಿಯಾಗಿ ವಿಶ್ವಬ್ಯಾಂಕ್, ಆರ್ಬಿಐ ಹಾಗೂ ಇತರ ಹಣಕಾಸು ಸಂಸ್ಥೆಗಳು ಭಾರತದ ಜಿಡಿಪಿ ಕುಸಿತವಾಗಲಿದೆ ಎಂದಿತ್ತು. ಆದರೆ ನಿರೀಕ್ಷೆಗೂ ಮೀರಿ ಜಿಡಿಪಿ ಏರಿಕೆಯಾಗಿದೆ.
ಕಾರಣವೇನು?
ಪ್ರಧಾನಮಂತ್ರಿ ಗ್ರಾಮ ಸಡಕ್, ಹೆದ್ದಾರಿ ನಿರ್ಮಾಣ, ಗ್ರಾಮೀಣ ವಿದ್ಯುದೀಕರಣ ಮುಂತಾದ ಯೋಜನೆಗಳಲ್ಲಿ ಸರಕಾರ ಬರೋಬ್ಬರಿ ಬಂಡವಾಳ ಹೂಡಿದೆ. ಜತೆಗೆ ವಿದೇಶಿ ನೇರ ಬಂಡವಾಳವೂ ಹರಿದು ಬಂದಿದ್ದು ಸಾರ್ವಜನಿಕ ಉದ್ದಿಮೆಗಳಲ್ಲಿ ಹೂಡಿಕೆ ಪ್ರಮಾಣ ಹೆಚ್ಚಾಗಿದೆ. ಈ ಕಾರಣಗಳಿಂದ ಜಿಡಿಪಿಯಲ್ಲಿ ಏರಿಕೆಯಾಗಿದೆ.[ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಏಕೆ, ಸಿಬ್ಬಂದಿಗಳ ಬೇಡಿಕೆಗಳೇನು?]
7 ಲಕ್ಷ ಬೇನಾಮಿ ಕಂಪನಿಗಳು ಬಂದ್
ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಕೇಂದ್ರ ಸರಕಾರ 7 ಲಕ್ಷ ಬೇನಾಮಿ ಕಂಪನಿಗಳಿಗೆ ಬೀಗ ಜಡಿಯಲು ಸಿದ್ದತೆ ಮಾಡಿಕೊಂಡಿದೆ. ನಿಷ್ಕ್ರಿಯವಾಗಿರುವ ಹಾಗೂ ಸಂಶಯಾಸ್ಪದ ಕಂಪನಿಗಳನ್ನು ಮುಚ್ಚುವಂತೆ ನಿರ್ದೇಶನ ನೀಡಿದೆ. ಈ ಕಂಪೆನಿಗಳ ಮೂಲಕ ಕಪ್ಪು ಹಣವನ್ನು ಬಿಳಿ ಮಾಡುವ ದಂಧೆ ಚಾಲ್ತಿಯಲ್ಲಿರುವುದರಿಂದ ಈ ನಿರ್ಧಾರಕ್ಕೆ ಮುಂದಾಗಿದೆ.