ಜಮ್ಮು: ನಾಲ್ವರು ಭಯೋತ್ಪಾದಕರ ಹತ್ಯೆ, ಏಳು AK- 47 ರೈಫಲ್, ಗ್ರೆನೇಡ್ ವಶ
ಶ್ರೀನಗರ, ಡಿಸೆಂಬರ್ 28: ಇಂದು ಬೆಳಗ್ಗೆ ಜಮ್ಮುವಿನ ಹೊರವಲಯದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ನಲ್ಲಿ ನಾಲ್ವರು ಭಯೋತ್ಪಾದಕರು ಹತರಾಗಿದ್ದಾರೆ.
ಆ ನಂತರ ಏಳು ಎಕೆ -47 ರೈಫಲ್ಗಳು, ಒಂದು ಯುಎಸ್ ನಿರ್ಮಿತ ಎಂ4 ರೈಫಲ್, ಮೂರು ಪಿಸ್ತೂಲ್ಗಳು ಮತ್ತು ಗ್ರೆನೇಡ್ಗಳು ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸಿದ್ರಾ ಬೈಪಾಸ್ ಪ್ರದೇಶದ ತಾವಿ ಸೇತುವೆಯ ಬಳಿ ಬೆಳಿಗ್ಗೆ 7 ಗಂಟೆಗೆ ಗುಂಡಿನ ಚಕಮಕಿ ಪ್ರಾರಂಭವಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಪ್ರದೇಶದಲ್ಲಿ ಅನುಮಾನಸ್ಪದ ಟ್ರಕ್ ಒಂದನ್ನು ಭದ್ರತಾ ಪಡೆಗಳು ಪತ್ತೆಹಚ್ಚಿದ್ದವು. ಭದ್ರತಾ ಸಿಬ್ಬಂದಿ ಟ್ರಕ್ ಅನ್ನು ತಪಾಸಣೆಗಾಗಿ ನಿಲ್ಲಿಸುತ್ತಿದ್ದಂತೆ, ಟ್ರಕ್ನೊಳಗೆ ಅಡಗಿಕೊಂಡಿದ್ದ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪ್ರತೀಕಾರವಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್, 'ಈ ಪ್ರದೇಶದಲ್ಲಿ ಟ್ರಕ್ನ ಅನುಮಾನಾಸ್ಪದ ಚಲನವಲನ ಕಂಡುಬಂದಿದೆ. ಪೊಲೀಸರು ಚೆಕ್ ಪೋಸ್ಟ್ನಲ್ಲಿ ಟ್ರಕ್ ಅನ್ನು ನಿಲ್ಲಿಸಿದರು. ಭದ್ರತಾ ಪಡೆಗಳು ಟ್ರಕ್ ಅನ್ನು ತಪಾಸನೆ ಮಾಡಲು ಪ್ರಾರಂಭಿಸಿದಾಗ, ಒಳಗೆ ಅಡಗಿಕೊಂಡಿದ್ದ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು. ಪ್ರತೀಕಾರದ ಗುಂಡಿನ ದಾಳಿಯಲ್ಲಿ ಎಲ್ಲಾ ಭಯೋತ್ಪಾದಕರು ಕೊಲ್ಲಲ್ಪಟ್ಟರು,' ಎಂದು ಹೇಳಿದ್ದಾರೆ.
ಎಂಟಕೌಂಟರ್ ನಡೆದ ಮೇಲೆಯೂ ಟ್ರಕ್ ಚಾಲಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಆತನನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ನಾಲ್ವರು ಉಗ್ರರು ಪಾಕಿಸ್ತಾನದಿಂದ ನುಸುಳಿ ಕಾಶ್ಮೀರಕ್ಕೆ ಪ್ರಯಾಣಿಸುತ್ತಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೇಹ್-ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಗೆ ಸಂಬಂಧಿಸಿದ ವಿಷಯಗಳ ಕುರಿತು ಎರಡು ಉನ್ನತ ಮಟ್ಟದ ಸಭೆಗಳನ್ನು ನಡೆಸಲು ನಿರ್ಧರಿಸಿದ ಬಳಿಕ ಈ ಘಟನೆ ನಡೆದಿದೆ.
ಲೇಹ್-ಲಡಾಖ್ ಕುರಿತು ಇಂದು ಮಧ್ಯಾಹ್ನ 3 ಗಂಟೆಗೆ ಮತ್ತು ಜಮ್ಮು ಮತ್ತು ಕಾಶ್ಮೀರದ ಕುರಿತ ಸಭೆಯು 4 ಗಂಟೆಗೆ ಗೃಹ ಸಚಿವಾಲಯದ ನಾರ್ತ್ ಬ್ಲಾಕ್ ಕಚೇರಿಯಲ್ಲಿ ನಡೆಯಲಿದೆ ಎಂದು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ.