ಮಮತಾಗೆ ಭಾರೀ ಹಿನ್ನಡೆ, ಬಿಜೆಪಿ ಸೇರಿದ 6 ಟಿಎಂಸಿ ಶಾಸಕರು
ತ್ರಿಪುರ, ಆಗಸ್ಟ್ 7: ತ್ರಿಪುರಾದ ಆರು ತೃಣಮೂಲ ಕಾಂಗ್ರೆಸ್ ಶಾಸಕರು ಒಟ್ಟಾಗಿ ಬಿಜೆಪಿ ಸೇರಿದ್ದಾರೆ.
ಸುದೀಪ್ ರಾಯ್ ಬರ್ಮನ್, ಆಶೀಶ್ ಕೆಆರ್ ಸಹಾ, ದಿಬಾ ಚಂದ್ರ ಹ್ರಂಗಖ್ವಲ್, ಬಿಸ್ವಾ ಬಂಧು ಸೇನ್, ಪ್ರಂಜಿತ್ ಸಿಂಗ್ ರಾಯ್, ದಿಲೀಪ್ ಸರ್ಕಾರ್ ಬಿಜೆಪಿ ಸೇರಿದ ಶಾಸಕರಾಗಿದ್ದಾರೆ.

ಹಾಗೇ ನೋಡಿದರೆ ಇವರು ಟಿಎಂಸಿ ಶಾಸಕರೂ ಅಲ್ಲ. ಇವರೆಲ್ಲಾ ಕಾಂಗ್ರೆಸ್ ಶಾಸಕರಾಗಿದ್ದರು. 2016ರಲ್ಲಿ ಪಶ್ಚಿಮ ಬಂಗಾಳ ಚುನಾವಣೆ ವೇಳೆ ಕಾಂಗ್ರೆಸ್ ಸಿಪಿಐ-ಎಂ ಜತೆ ಕೈ ಜೋಡಿಸಿದ್ದನ್ನು ವಿರೋಧಿಸಿ ಇವರೆಲ್ಲಾ ಒಟ್ಟಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸೇರಿದ್ದರು.
ಆದರೆ ರಾಷ್ಟ್ರಪತಿ ಚುಣಾವಣೆ ವೇಳೆ ಸಿಪಿಐ-ಎಂ ಬೆಂಬಲಿತ ಮೀರಾ ಕುಮಾರ್ ರನ್ನು ನಾವು ಬೆಂಬಲಿಸುವುದಿಲ್ಲ ಎಂದ ಈ ಶಾಸಕರು ರಾಮನಾಥ್ ಕೋವಿಂದ್ ಗೆ ಮತ ಚಲಾಯಿಸಿದ್ದರು. ಇದಾದ ನಂತರ ಆರೂ ಜನ ಶಾಸಕರನ್ನು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಪಕ್ಷದಿಂದ ಉಚ್ಛಾಟನೆ ಮಾಡಿದ್ದರು.
ಇದೀಗ ಆರೂ ಜನರು ಬಿಜೆಪಿ ಸೇರಿದ್ದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಗೆ ಭಾರೀ ಹಿನ್ನಡೆಯಾಗಿದೆ.












Click it and Unblock the Notifications