ದಾಲ್ ಸರೋವರ ಸ್ವಚ್ಛತೆಗೆ ಮುಂದಾದ ಐದರ ಮುದ್ದು ಕಂದ!
ಶ್ರೀನಗರ, ಜನವರಿ 23: ಚಿಕ್ಕ ವಯಸ್ಸಿನಲ್ಲೇ ಸಂಸ್ಕಾರ ಕಲಿಸಿದರೆ ಭವಿಷ್ಯದಲ್ಲಿ ಮಗು ಜವಾಬ್ದಾರಿಯುತ ಪ್ರಜೆಯಾಗುತ್ತದೆ. ತಿಂದಾದ ಮೇಲೆ ಪೊಟ್ಟಣವನ್ನು ತಂದೆಯೋ, ತಾಯಿಯೋ ರಸ್ತೆಯಲ್ಲೇ ಬಿಸಾಡಿದರೆ ಮಗುವೂ ಅದನ್ನೇ ಅನುಸರಿಸುತ್ತದೆ. ಆದರೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಐದು ವರ್ಷದ ಪುಟ್ಟ ಮಗುವೊಂದು ಸ್ವಚ್ಛ ಭಾರತಕ್ಕೆ ಕೈಜೋಡಿಸಿದೆ.
ಪ್ರಿಕೆಜಿ ಓದುತ್ತಿರುವ ಜನ್ನತ್, ತನ್ನ ತಂದೆಯೊಂದಿಗೆ ಸೇರಿ ಶ್ರೀನಗರದ ಪ್ರಸಿದ್ಧ ದಾಲ್ ಸರೋವರದ ಸ್ವಚ್ಛತೆಗೆ ಅಡಿ ಇಟ್ಟಿದ್ದಾಳೆ. ಇಲ್ಲಿಗೆ ಪ್ರವಾಸಕ್ಕೆಂದು ಬರುವ ಪ್ರತಿಯೊಬ್ಬರಿಗೂ ತನ್ನ ಮುದ್ದು ಭಾಷೆಯಲ್ಲಿಯೇ, 'ದಯವಿಟ್ಟು ಕಸದಬುಟ್ಟಿ ಉಪಯೋಗಿಸಿ' ಎಂದು ಮನವಿ ಮಾಡುತ್ತಾಳೆ.

ಸ್ವಚ್ಛತೆಯ ಬಗ್ಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಈಕೆಗಿರುವ ಕಾಳಜಿಯನ್ನು ಕಂಡು ಸ್ವತಃ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಈ ಪುಟ್ಟ ಮಗುವಿನ ಬಗ್ಗೆ ಕೇಳುತ್ತಿದ್ದರೆ ನಿಮ್ಮ ಬೆಳಗು ಸುಂದರವಾಗುತ್ತದೆ. ಸ್ವಚ್ಛತೆಯ ಬಗ್ಗೆ ಆಕೆಗಿರುವ ಬದ್ಧತೆ ಮೆಚ್ಚುವಂಥದ್ದು' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಜಮ್ಮು-ಕಾಶ್ಮೀರದ ಪ್ರವಾಸೋದ್ಯಮದಲ್ಲಿ ಅತ್ಯಂತ ಆಕರ್ಷಣೀಯ ತಾಣ ಎನ್ನಿಸಿರುವ ದಾಲ್ ಸರೋವರ ಇತ್ತೀಚೆಗೆ ಮಾಲಿನ್ಯಕ್ಕೆ ಗುರಿಯಾಗುತ್ತಿದೆ. ದಿನ ದಿನವೂ ಬರುವ ಸಾವಿರಾರು ಪ್ರವಾಸಿಗರು, ಬೇಜವಾಬ್ದಾರಿಯಾಗಿ ಬಿಸಾಡುವ ಕಸಗಳಿಂದಾಗಿ ಇಲ್ಲಿನ ಪರಿಸರ ಹಾಳಾಗುತ್ತಿದೆ. ಈ ಖ್ಯಾತ ಸರೋವರವನ್ನು ಸ್ವಚ್ಛಗೊಳಿಸಲು ಕಾಶ್ಮೀರಿ ಸರ್ಕಾರವೂ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.












Click it and Unblock the Notifications