ಗುಜರಾತ್ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಧ್ವಿ ಬಗ್ಗೆ ತಿಳಿಯಬೇಕಿರುವ ಅಂಶಗಳು
ಅಹಮದಾಬಾದ್, ನವೆಂಬರ್ 4: ಗುಜರಾತ್ ವಿಧಾನಸಭೆ ಚುನಾವಣಾ ದಿನಾಂಗಳು ಪ್ರಕಟಗೊಂಡಿವೆ. ಎರಡು ಸುತ್ತಿನ ಮತದಾನ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಡಿಸೆಂಬರ್ 1 ಹಾಗೂ 5ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್ 8ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ಇಸುದನ್ ಗಧ್ವಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ.
ಇಸುದನ್ ಗಧ್ವಿ ಎಎಪಿಯ ಗುಜರಾತ್ ಸಿಎಂ ಅಭ್ಯರ್ಥಿ: ಕೇಜ್ರಿವಾಲ್ ಘೋಷಣೆ
ಎಸ್ಎಂಎಸ್, ವಾಟ್ಸಾಪ್, ಧ್ವನಿ ಸಂದೇಶ ಮತ್ತು ಇಮೇಲ್ಗಳ ಮೂಲಕ ಪಕ್ಷವು ಸಂಗ್ರಹಿಸಿದ ಅಭಿಪ್ರಾಯಗಳ ಆಧಾರದ ಮೇಲೆ ಗಧ್ವಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಪಕ್ಷವು 16,48,500 ಅಭಿಪ್ರಾಯಗಳನ್ನು ಸ್ವೀಕರಿಸಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಅದರಲ್ಲಿ ಶೇಕಡಾ 73 ರಷ್ಟು ಜನರು ಗಧ್ವಿ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಬೇಕೆಂದು ಬಯಸಿದ್ದಾರೆ.
ಇಸುದನ್ ಗಧ್ವಿಯ ಬಗ್ಗೆ ತಿಳಿಯಬೇಕಿರುವ ಅಂಶಗಳು
*ಇಸುದನ್ ಗಧ್ವಿ ಅವರು ಜನವರಿ 10, 1982 ರಂದು ಗುಜರಾತ್ನ ದ್ವಾರಕಾ ಜಿಲ್ಲೆಯ ಜಮ್ಖಾಂಬಲಿಯಾ ಪಟ್ಟಣದ ಸಮೀಪವಿರುವ ಪಿಪಾಲಿಯಾ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಖೇರಾಜಭಾಯ್ ಗಧ್ವಿ ವೃತ್ತಿಯಲ್ಲಿ ಕೃಷಿಕರು.
*ಗಧ್ವಿ ಅವರು ಪತ್ರಕರ್ತರು. ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ವಿಟಿವಿ ನ್ಯೂಸ್ನ ಸಂಪಾದಕರಾಗಿ ಗುಜರಾತ್ನಲ್ಲಿ ಹೆಸರು ಮಾಡಿದ್ದಾರೆ. ಅವರು ವಿಟಿವಿ ಗುಜರಾತಿಯಲ್ಲಿ 'ಮಹಾಮಂಥನ್' ಎಂಬ ಕಾರ್ಯಕ್ರಮದ ನಿರೂಪಕರಾಗಿದ್ದರು. ಇದು ಗುಜರಾತ್ನಾದ್ಯಂತ ಖ್ಯಾತಿ ಗಳಿಸಿತ್ತು.
*ಗಧ್ವಿ ಅವರು 2005 ರಲ್ಲಿ ಗುಜರಾತ್ನ ವಿದ್ಯಾಪೀಠ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈ ವಿಶ್ವವಿದ್ಯಾಲಯವನ್ನು ಮಹಾತ್ಮ ಗಾಂಧಿ ಅವರು ಆರಂಭಿಸಿದ್ದಾರೆ.
*ಪತ್ರಕರ್ತ ವೃತ್ತಿಯ ಆರಂಭದ ದಿನಗಳಲ್ಲಿ ದೂರದರ್ಶನದಲ್ಲಿ ಗಧ್ವಿ ಕೆಲಸ ಮಾಡಿದ್ದರು. ನಂತರ ಅವರು 2007 ರಲ್ಲಿ ಈಟಿವಿ ಗುಜರಾತ್ನಲ್ಲಿ ಕೆಲಸ ಗಿಟ್ಟಿಸಿಕೊಂಡರು. ಅಲ್ಲಿ ಅವರು 4 ವರ್ಷಗಳ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. 2011 ರವರೆಗೆ ಈಟಿವಿಯಲ್ಲಿ ಕಾರ್ಯನಿರ್ವಹಿಸಿದರು. ಅವರು ಪತ್ರಕರ್ತರಾಗಿದ್ದ ಅವಧಿಯಲ್ಲಿ, ಡಾಂಗ್ ಮತ್ತು ಕಪರಡಾ ತಾಲೂಕುಗಳಲ್ಲಿ ನಡೆದಿದ್ದ 150 ಕೋಟಿ ರೂಪಾಯಿಗಳ ಅಕ್ರಮ ಅರಣ್ಯನಾಶದ ಹಗರಣವನ್ನು ಬಯಲು ಮಾಡಿದ್ದರು. ಇದು ಗಧ್ವಿ ಅವರಿಗೆ ಜನಪ್ರಿಯತೆ ತಂದುಕೊಡಲು ಸಹಾಯ ಮಾಡಿತು.
*ಗಧ್ವಿ ಅವರು ಜೂನ್ 2021 ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು.
*ಗಧ್ವಿ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದ್ದಾರೆ. ಇದು ಗುಜರಾತ್ನ ಜನಸಂಖ್ಯೆಯ ಶೇ 48ರಷ್ಟನ್ನು ಒಳಗೊಂಡಿದೆ.
ಗುಜರಾತ್ನಲ್ಲಿ ಬಿಜೆಪಿಗೆ ಎಎಪಿ ಸವಾಲು
ಈ ಬಾರಿಯ ಗುಜರಾತ್ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಪ್ರಧಾನಿ ಮೋದಿ ಅವರ ತವರು ರಾಜ್ಯವಾದ ಗುಜರಾತ್ನಲ್ಲಿ ಗೆಲ್ಲಲೇ ಬೇಕಿರುವ ಅನಿವಾರ್ಯತೆ ಬಿಜೆಪಿಗೆ ಬಂದಿದೆ. ಆದರೆ, ಈ ಹಾದಿ ಕೇಸರಿ ಪಾಳಯಕ್ಕೆ ಅಷ್ಟು ಸುಗಮವಿಲ್ಲ. ಇಷ್ಟು ವರ್ಷ ಗುಜರಾತ್ನಲ್ಲಿ ಬಿಜೆಪಿಗೆ ಕಾಂಗ್ರೆಸ್ ಪಕ್ಷವೊಂದೇ ಎದುರಾಳಿ ಆಗಿತ್ತು. ಆದರೆ, ಈ ಸಾರಿ ಎಎಪಿ ಅಖಾಡಕ್ಕೆ ಇಳಿದಿದೆ.
ಪಂಜಾಬ್ ಹಾಗೂ ದೆಹಲಿಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದಲ್ಲಿರುವ ಎಎಪಿ ಬಿಜೆಪಿಯನ್ನು ಸೋಲಿಸುವ ಬಗ್ಗೆ ಮಾತನಾಡುತ್ತಿದೆ. ಎರಡು ದಶಕಗಳ ಕಾಲ ಬಿಜೆಪಿಯ ಬೆನ್ನಿಗೆ ನಿಂತಿದ್ದ ನಗರ ಕೇಂದ್ರಿತ ಮತದಾರರು ಎಎಪಿ ಕಡೆಗೆ ವಾಲುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಎಎಪಿ ನಾಯಕರು ಗುಜರಾತ್ನಲ್ಲಿ ಈ ಸಾರಿ ನಾವೇ ಗೆಲ್ಲಲಿದ್ದೇವೆ. ಅಧಿಕಾರದ ಗದ್ದುಗೆಯನ್ನು ಹಿಡಿದೇ ತೀರುತ್ತೇವೆ ಎಂದು ಹೇಳುತ್ತಿದ್ದಾರೆ. ಅತ್ತು ಬಿಜೆಪಿಗೂ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ಹಣದುಬ್ಬರ, ನಿರುದ್ಯೋಗ, ಕೃಷಿ ಸಂಕಷ್ಟಗಳು ಬಿಜೆಪಿ ಪಾಲಿಗೆ ಮುಳ್ಳಾಗಿ ಪರಿಣಮಿಸಿವೆ. ಎಎಪಿ ಅಧಿಕಾರಕ್ಕೆ ಬಂದರೆ, 300 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದೆ. ಹಲವು ಜನಪ್ರಿಯ ಭರವಸೆಗಳನ್ನು ನೀಡುವ ಮೂಲಕ ಗುಜರಾತ್ನಲ್ಲಿ ಅರವಿಂದ್ ಕೇಜ್ರಿವಾಲ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.