ಹಿಮಪಾತಕ್ಕೆ ಸಿಲುಕಿದ್ದ ಐವರು ಯೋಧರ ರಕ್ಷಣೆ
ಕಣಿವೆ ರಾಜ್ಯದಲ್ಲಿ ಮತ್ತಷ್ಟು ಹಿಮ ಕುಸಿತ ಆಗುವ ಸಂಭವ ಇದೆಯೆಂದ ಸೇನೆ. ಕಳೆದ ಹತ್ತು ವರ್ಷಗಳಿಂದ ಕಾಣದ ಅತಿ ಹೆಚ್ಚು ಹಿಮ ಪಾತ ಉಂಟಾಗುತ್ತಿರುವುದರಿಂದಲೇ ಹಿಮ ಕುಸಿತ ಸಂಭವಿಸುತ್ತಿದೆ ಎನ್ನುತ್ತಿವೆ ಸೇನೆಯ ಮೂಲಗಳು.
ಶ್ರೀನಗರ, ಜನವರಿ 28: ಶುಕ್ರವಾರ ಸಂಭವಿಸಿದ್ದ ಭೀಕರ ಹಿಮ ಕುಸಿತದಿಂದಾಗಿ ಹಿಮದಡಿ ಹುದುಗಿಹೋಗಿದ್ದ ಐವರು ಭಾರತೀಯ ಯೋಧರನ್ನು ಸೇನೆಯು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಮಾಚ್ಚಿ ಸೆಕ್ಟರ್ ನಲ್ಲಿ ಕಾವಲು ಕಾಯುತ್ತಿದ್ದ ಗಡಿ ಭದ್ರತಾ ಪಡೆಯ ಯೋಧರು ಶುಕ್ರವಾರ ಸಂಭವಿಸಿದ್ದ ಹಿಮಕುಸಿತಕ್ಕೆ ಸಿಲುಕಿದ್ದರು. ಅದಕ್ಕೂ ಮುನ್ನಾ ದಿನ ಕಾಶ್ಮೀರ ಗುರೇಜ್ ಸೆಕ್ಟರ್ ನಲ್ಲಿ ಸಂಭವಿಸಿದ್ದ (ಗುರುವಾರ) ಹಿಮ ಕುಸಿತದಲ್ಲಿ ಭಾರತೀಯ ಸೇನೆಯ 15 ಯೋಧರು ಸೇರಿದಂತೆ 21 ಜನರು ಮೃತಪಟ್ಟಿದ್ದರು. ಆ ಘಟನೆಯಿಂದ ಹೊರಬರುವ ಮುನ್ನವೇ ಶುಕ್ರವಾರ ಮಾಚ್ಚಿ ಸೆಕ್ಟರ್ ನಲ್ಲಿಯೂ ಹಿಮ ಕುಸಿತ ಸಂಭವಿಸಿ ದೇಶವೇ ತಲ್ಲಣಗೊಳ್ಳುವಂತೆ ಮಾಡಿತ್ತು.

ಆದರೆ, ಮಾಚ್ಚಿ ಸೆಕ್ಟರ್ ನಲ್ಲಿ ನಡೆದಿದ್ದ ದುರ್ಘಟನೆಯಲ್ಲಿ ಯಾರೂ ಸಾವಿಗೀಡಾಗಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ. ಇಲ್ಲಿ ಅಡಿಗಟ್ಟಲೆ ಬಿದಿದ್ದ ಹಿಮದಾಳದಲ್ಲಿ ಸಿಲುಕಿದ್ದ ಸೈನಿಕರ ಬಳಿಗೆ ತೆರಳಲು ಪುಟ್ಟ ಸುರಂಗವೊಂದನ್ನು ಕೊರೆಯಲಾಗಿತ್ತು. ಆ ಮೂಲಕ ಸೈನಿಕರಿದ್ದ ಜಾಗಕ್ಕೆ ತೆರಳಿ ಅವರನ್ನು ರಕ್ಷಿಸಲಾಯಿತು ಎಂದು ಸೇನಾ ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಜಮ್ಮು ಕಾಶ್ಮೀರ ಕಣಿವೆಯಲ್ಲಿ ಮತ್ತಷ್ಟು ಕಡೆಗೆ ಹಿಮ ಕುಸಿತವಾಗುವ ಸಂಭವವಿದೆ ಎಂದು ಸೇನಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕಳೆದ ಹತ್ತು ವರ್ಷಗಳಲ್ಲೇ ಕಾಣದಷ್ಟು ಹಿಮ ಪಾತವಾಗುತ್ತಿರುವುದರಿಂದ ಇಂಥ ದುರ್ಘಟನೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.












Click it and Unblock the Notifications