ತೆಲಂಗಾಣ ಉಪಚುನಾವಣೆ: 5 ಕೋಟಿ ಹಣ ವರ್ಗಾವಣೆ, ಬಿಜೆಪಿ ಅಭ್ಯರ್ಥಿಗೆ ನೋಟಿಸ್
ಹೈದರಾಬಾದ್, ಅ. 31: ತೆಲಂಗಾಣದ ಮುನುಗೋಡೆ ಕ್ಷೇತ್ರದ ಉಪಚುನಾವಣೆಗೆ ಮುನ್ನ ಹಲವು ಬ್ಯಾಂಕ್ ಖಾತೆಗಳಿಗೆ 5.24 ಕೋಟಿ ರೂಪಾಯಿ ಮೊತ್ತದ ವಹಿವಾಟು ನಡೆದಿರುವ ಬಗ್ಗೆ ಸ್ಪಷ್ಟನೆ ನೀಡುವಂತೆ ಬಿಜೆಪಿ ಅಭ್ಯರ್ಥಿಗೆ ಚುನಾವಣಾ ಆಯೋಗ ಸೂಚಿಸಿದೆ.
ತೆಲಂಗಾಣದ ಮುನುಗೋಡೆ ಬಿಜೆಪಿ ಅಭ್ಯರ್ಥಿ ಕೆ.ರಾಜಗೋಪಾಲ್ ರೆಡ್ಡಿಗೆ ಭಾರತೀಯ ಚುನಾವಣಾ ಆಯೋಗ ವಿವರಣೆ ಕೇಳಿ ನೋಟಿಸ್ ನೀಡಿದೆ.
ತೆಲಂಗಾಣ ರಾಜಕೀಯ; ದೇವಾಲಯದಲ್ಲಿ ಬಿಜೆಪಿ ನಾಯಕರ ಪ್ರಮಾಣ!
ಬಿಜೆಪಿ ಅಭ್ಯರ್ಥಿ ಕೆ.ರಾಜಗೋಪಾಲ್ ರೆಡ್ಡಿ ಅವರು ತಮ್ಮ ಕುಟುಂಬದ ಒಡೆತನದ ಗಣಿಗಾರಿಕೆ ಸಂಸ್ಥೆಯೊಂದರಿಂದ ಭಾರಿ ಮೊತ್ತವನ್ನು ಮುನುಗೋಡು ವಿಧಾನಸಭಾ ಕ್ಷೇತ್ರದ 23 ಜನರ ಬ್ಯಾಂಕ್ ಖಾತೆಗಳಿಗೆ ರವಾನಿಸಿದ್ದಾರೆ.
ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ನಾಯಕ ಸೋಮ ಭರತ್ ಕುಮಾರ್, ಕೆ.ರಾಜಗೋಪಾಲ್ ರೆಡ್ಡಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಮತದಾರರ ಪ್ರಚೋದನೆಗೆ ಹಣವನ್ನು ನಿಯೋಜಿಸಲಾಗಿದೆ ಎಂದು ಆರೋಪಿಸಿದ್ದಾರೆ.
"ನೀವು ಅಥವಾ ನಿಮ್ಮ ನಿರ್ದೇಶನದ ಮೇರೆಗೆ ಕುಟುಂಬದ ಮಾಲೀಕತ್ವದ ಕಂಪನಿಯು 23 ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾದ ಈ ನಿಧಿಯನ್ನು ಮತದಾರರ ಪ್ರಚೋದನೆಗೆ ಬಳಸಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ. ಇದು ಭ್ರಷ್ಟ ಪದ್ಧತಿಯಾಗಿದೆ" ಎಂದು ಚುನಾವಣಾ ಆಯೋಗವು ಬಿಜೆಪಿ ಅಭ್ಯರ್ಥಿಗೆ ನೋಟಿಸ್ನಲ್ಲಿ ತಿಳಿಸಿದ್ದು, ಪ್ರತಿಕ್ರಿಯೆ ನೀಡುವಂತೆ ಕೇಳಿದೆ.
ಬಿಜೆಪಿ ಅಭ್ಯರ್ಥಿ ಕೆ.ರಾಜಗೋಪಾಲ್ ರೆಡ್ಡಿಗೆ ಉತ್ತರಿಸಲು ಸೋಮವಾರ ಸಂಜೆ 4 ಗಂಟೆಯವರೆಗೆ ಸಮಯ ನೀಡಲಾಗಿದೆ. ನವೆಂಬರ್ 3 ರಂದು ತೆಲಂಗಾಣದ ಮುನುಗೋಡೆ ಉಪಚುನಾವಣೆ ನಡೆಯಲಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪಕ್ಷವು ಮುನುಗೋಡೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಆರೋಪ ಮಾಡಿದ್ದು, ಬಿಜೆಪಿಯು ತಮ್ಮ ಶಾಸಕರನ್ನು ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
20 ರಿಂದ 30 ಶಾಸಕರನ್ನು ಖರೀದಿಸಲು ದೆಹಲಿಯ ದಲ್ಲಾಳಿಗಳು ಕೋಟ್ಯಂತರ ರೂಪಾಯಿ ನೀಡಿದ್ದಾರೆ ಎಂದು ಕೆಸಿಆರ್ ಆರೋಪಿಸಿದ್ದಾರೆ.
ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮತ್ತು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ, " ನಾನು ಒಂದು ವಿಷಯವನ್ನು ತಿಳಿಸುತ್ತಿದ್ದೇನೆ. ನಿಮ್ಮ ಸರ್ಕಾರವನ್ನು ಬೀಳಿಸುವ ಉದ್ದೇಶ ನಮಗಿಲ್ಲ. ನಿಮ್ಮದೇ ಸರ್ಕಾರವನ್ನು ಬೀಳಿಸುವ ಆಲೋಚನೆಯನ್ನು ನೀವು ಹೊಂದಿರಬಹುದು. ಚುನಾವಣೆಯಲ್ಲಿ ಅದನ್ನು ಅಜೆಂಡಾದಂತೆ ಬಳಸಿ ಅನುಕಂಪ ಗಳಿಸಬಹುದು. ಈಗಾಗಲೇ ನೀವು ಜನರಲ್ಲಿ ಗೌರವವನ್ನು ಕಳೆದುಕೊಂಡಿದ್ದೀರಿ" ಎಂದು ಕಿಡಿಕಾರಿದ್ದಾರೆ.