ಜನಪ್ರತಿನಿಧಿಗಳ ವಿರುದ್ಧದ 4500 ಕ್ರಿಮಿನಲ್ ಪ್ರಕರಣದ ವಿಚಾರಣೆ ಬಾಕಿ!
ನವದೆಹಲಿ, ಸೆಪ್ಟೆಂಬರ್ 11: ಭಾರತದ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳ ವಿರುದ್ಧ ಸುಮಾರು 4,500 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. "ಇಷ್ಟು ಪ್ರಕರಣಗಳು ಜನಪ್ರತಿನಿಧಿಗಳ ಪ್ರಭಾವದ ಕಾರಣ ಬಾಕಿ ಉಳಿದಿವೆ" ಎಂದು ಸುಪ್ರೀಂಕೋರ್ಟ್ ಹೇಳಿದೆ.
ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಅರ್ಜಿಯ ವಿಚಾರಣೆ ಕುರಿತು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿಯ ವಿಚಾರಣೆ ನಡೆಸುವಾಗ 24 ಹೈಕೋರ್ಟ್ಗಳ ಅಂಕಿ-ಅಂಶಗಳನ್ನು ಮಂಡಿಸಲಾಗಿದೆ. 4,500ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳ ವಿಚಾರಣೆ ಬಾಕಿ ಇದೆ ಎಂಬುದು ಆಗ ಬಹಿರಂಗವಾಗಿದೆ.
ನ್ಯಾಯಮೂರ್ತಿಗಳಾದ ಎನ್. ವಿ. ರಮಣ, ಸೂರ್ಯಕಾಂತ್, ಹರಿಕೇಶ್ ರಾಯ್ ಅವರಿದ್ದ ತ್ರಿ ಸದಸ್ಯ ಪೀಠದ ಮುಂದೆ ವಿಚಾರಣೆ ನಡೆಯುವಾಗ ಅಂಕಿ ಅಂಶಗಳನ್ನು ತಿಳಿಸಲಾಗಿದೆ. ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿರುವ 174 ಪ್ರಕರಣಗಳು ಜೀವಾವಧಿ ಶಿಕ್ಷೆ ಆಗುವಂತಹ ಗಂಭೀರ ಅಪರಾಧಗಳು.
ಹಲವು ವರ್ಷ ಹಳೆಯ ಪ್ರಕರಣಗಳು ಬಾಕಿ ಇವೆ. 352 ಪ್ರಕರಣಗಳಲ್ಲಿ ವಿಚಾರಣೆಗೆ ಹೈಕೋರ್ಟ್ ಅಥವ ಸುಪ್ರೀಂಕೋರ್ಟ್ನಿಂದ ತಡೆ ಇದೆ. ಪಶ್ಚಿಮ ಬಂಗಾಳ ಮತ್ತು ಪಂಜಾಬ್ ರಾಜ್ಯದಲ್ಲಿ 1981, 1983ರ ಪ್ರಕರಣ, ಬಿಹಾರದಲ್ಲಿ 1991ರ ಪ್ರಕರಣದ ವಿಚಾರಣೆಗೆ ಇನ್ನೂ ಬಾಕಿ ಇದೆ.

ಚುನಾವಣೆಗೆ ನಿಲ್ಲಂದತೆ ನಿಷೇಧ
ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನ್ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂಕೋರ್ಟ್ಗೆ ಜನಪ್ರತಿನಿಧಿಗಳ ವಿರುದ್ಧ ಬಾಕಿ ಇರುವ ಪ್ರಕರಣಗಳ ವಿಚಾರಣೆ ಕುರಿತು ಅರ್ಜಿ ಸಲ್ಲಿಸಿದ್ದಾರೆ. ಕ್ರಿಮಿನಲ್ ಪ್ರಕರಣ ಸಾಬೀತಾದ ಜನಪ್ರತಿನಿಧಿಗಳು ಚುನಾವಣೆಗೆ ನಿಲ್ಲದಂತೆ ನಿಷೇಧ ಹೇರಬೇಕು ಎಂದು ಅರ್ಜಿಯಲ್ಲಿ ಅವರು ಮನವಿ ಮಾಡಿದ್ದಾರೆ.

ಹೈಕೋರ್ಟ್ ಇನ್ನೂ ಮಾಹಿತಿ ನೀಡಬೇಕು
ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳ ವಿರುದ್ಧ ಬಾಕಿ ಉಳಿದಿರುವ ಅಕ್ರಮ ಹಣ ವರ್ಗಾವಣೆ, ಭ್ರಷ್ಟಾಚಾರದಂತಹ ಬಿಳಿ ಕಾಲರ್ ಪ್ರಕರಣಗಳ ವಿವರಗಳನ್ನು ನೀಡುವಂತೆ ಸುಪ್ರೀಂಕೋರ್ಟ್ ಹೈಕೋರ್ಟ್ಗಳಿಗೆ ಸೂಚನೆ ನೀಡಿದೆ. ಹೈಕೋರ್ಟ್ಗಳು ಈ ಕುರಿತು ಮಾಹಿತಿ ನೀಡಬೇಕಿದೆ.

ವಿಶೇಷ ನ್ಯಾಯಾಲಯ ಸ್ಥಾಪನೆ
ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ಪ್ರತಿ ಜಿಲ್ಲೆಯಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಬೇಕು. ಇಂತಹ ಅರ್ಜಿಗಳನ್ನು ಬೇಗ ವಿಲೇವಾರಿ ಮಾಡಬೇಕು ಎಂದು ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಆರು ವರ್ಷಗಳ ನಿಷೇಧ
ಪ್ರಸ್ತುತ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣ ಸಾಬೀತಾದರೆ ಅವರು 6 ವರ್ಷಗಳ ಚುನಾವಣೆಗೆ ಸ್ಪರ್ಧೆ ಮಾಡುವಂತಿಲ್ಲ. ಯಾವಾಗಲೂ ಚುನಾವಣೆಗೆ ನಿಲ್ಲದಂತೆ ನಿಷೇಧ ಹೇರಬೇಕು ಎಂದು ವಕೀಲ ಅಶ್ವಿನ್ ಕುಮಾರ್ ಉಪಾಧ್ಯಾಯ ಮನವಿ ಮಾಡಿದ್ದಾರೆ.












Click it and Unblock the Notifications