Breaking: ಕಾಶ್ಮೀರದಲ್ಲಿ ನಾಲ್ವರು ಭಯೋತ್ಪಾದಕರ ಹತ್ಯೆ
ಶ್ರೀನಗರ, ನ. 01: ದಕ್ಷಿಣ ಕಾಶ್ಮೀರದಲ್ಲಿ ಮಂಗಳವಾರ ಭದ್ರತಾ ಪಡೆಗಳು ನಡೆಸಿದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ನಾಲ್ವರು ಶಂಕಿತ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವಂತಿಪೋರಾ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಹತ್ಯೆಗೀಡಾದ ಮೂವರು ಉಗ್ರರಲ್ಲಿ ಎಲ್ಇಟಿ ಕಮಾಂಡರ್ ಮುಖ್ತಾರ್ ಭಟ್ ಕೂಡ ಸೇರಿದ್ದಾರೆ. ಬಿಜ್ಬೆಹರಾ ಪ್ರದೇಶದಲ್ಲಿ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ.
ಜಮ್ಮು ಕಾಶ್ಮೀರದ ಹಳ್ಳಿಯಲ್ಲಿ ಬೆಂಕಿಗೆ ಆಹುತಿಯಾದ 20 ಮನೆಗಳು
ಪೋಲೀಸರ ಪ್ರಕಾರ, ಅವಂತಿಪೋರಾದಲ್ಲಿ ಹತರಾದ ಮೂವರು ಭಯೋತ್ಪಾದಕರಲ್ಲಿ ಒಬ್ಬ ಈ ಪ್ರದೇಶದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಹತರಾದ ಮೂವರು ಭಯೋತ್ಪಾದಕರಲ್ಲಿ ಎಲ್ಇಟಿ ಕಮಾಂಡರ್ ಮುಖ್ತಾರ್ ಭಟ್ ಸೇರಿದ್ದಾರೆ. ಮೂಲಗಳ ಪ್ರಕಾರ, ಅವರು ವಿದೇಶಿ ಭಯೋತ್ಪಾದಕರೊಂದಿಗೆ ಭದ್ರತಾ ಪಡೆಗಳ ಶಿಬಿರದ ಮೇಲೆ ಫಿದಾಯೀನ್ ದಾಳಿಗೆ ಹೊರಟಿದ್ದರು.
ಮೃತರಿಂದ ಒಂದು ಎಕೆ -74 ರೈಫಲ್, ಒಂದು AK-56 ರೈಫಲ್ ಮತ್ತು 1 ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಅವಂತಿಪೋರಾ ಪೊಲೀಸರು ಮತ್ತು ಸೇನೆ ಸೇರಿ ಒಂದು ದೊಡ್ಡ ದುರ್ಘಟನೆಯನ್ನು ತಪ್ಪಿಸಿವೆ ಎಂದು ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ವಿಜಯ್ ಕುಮಾರ್ ಹೇಳಿದ್ದಾರೆ.
ಈ ಎನ್ಕೌಂಟರ್ಗಳು ಭದ್ರತಾ ಪಡೆಗಳಿಗೆ ದೊಡ್ಡ ಯಶಸ್ಸು ಎಂದಿರುವ ಅವರು, "ನಮ್ಮ ಮೂಲದ ಪ್ರಕಾರ, 1 ಎಫ್ಟಿ (ವಿದೇಶಿ ಭಯೋತ್ಪಾದಕ) ಮತ್ತು 1 ಎಲ್ಇಟಿಯ ಒಬ್ಬ ಸ್ಥಳೀಯ ಭಯೋತ್ಪಾದಕ ಮುಖ್ತಾರ್ ಭಟ್, ಸಿಆರ್ಪಿಎಫ್ನ ಒಬ್ಬ ಎಎಸ್ಐ ಹತ್ಯೆ ಮತ್ತು ಇಬ್ಬರು ಆರ್ಪಿಎಫ್ ಸಿಬ್ಬಂದಿ ಹತ್ಯೆ ಸೇರಿದಂತೆ ಹಲವಾರು ಭಯೋತ್ಪಾದಕ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ" ಎಂದು ಮಾಹಿತಿ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಯುರೋಪ್ನಿಂದ ಸಂಘಟಿತವಾಗಿರುವ ಭಯೋತ್ಪಾದಕ ಘಟಕವನ್ನು ಭೇದಿಸಿರುವುದಾಗಿ ಸೋಮವಾರವಷ್ಟೇ ಹೇಳಿಕೊಂಡಿದ್ದರು. ಡ್ರೋನ್ಗಳ ಮೂಲಕ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಸಾಗಿಸುವಲ್ಲಿ ತೊಡಗಿರುವ ಅದರ ಇಬ್ಬರು ಸದಸ್ಯರನ್ನು ಬಂಧಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಅವರು ಸೋಮವಾರ ಡ್ರೋನ್ಗಳ ಮೂಲಕ ಶಸ್ತ್ರಾಸ್ತ್ರಗಳು ಮತ್ತು ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡುವ "ಹೊಸ ಆಟ"ವನ್ನು ಪಾಕಿಸ್ತಾನ ಪ್ರಾರಂಭಿಸಿದೆ ಎಂದು ಆರೋಪಿಸಿದ್ದಾರೆ.