'2ಜಿ ಸಾಗಾ ಅನ್ಫೋಲ್ಡ್ಸ್ ': ರಾಜಕೀಯ ಬಿರುಗಾಳಿ ಎಬ್ಬಿಸಿದ ಎ.ರಾಜಾ ಪುಸ್ತಕ
ಚೆನ್ನೈ, ಜನವರಿ 11: 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಖುಲಾಸೆಗೊಂಡಿರುವ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಈ ಸಂಬಂಧ ಪುಸ್ತಕ ಬರೆದಿದ್ದು ರಾಜಕೀಯ ರಂಗದಲ್ಲಿ ಬಿರುಗಾಳಿ ಎಬ್ಬಿಸಿದೆ.
'2ಜಿ ಸಾಗಾ ಅನ್ಫೋಲ್ಡ್ಸ್ ' ಹೆಸರಿನ ಪುಸ್ತಕದಲ್ಲಿ ರಾಜಾ ಮಾಜಿ ಸಿಎಜಿ ವಿನೋದ್ ರೈ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ 2 ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ತಿಂಗಳಲ್ಲಿ ಪುಸ್ತಕ ಬಿಡುಗಡೆಯಾಗಲಿದ್ದು, ಪುಸ್ತಕದಲ್ಲಿ ವಿನೋದ್ ರೈ ಮೇಲೆ ರಾಜಾ ಹರಿಹಾಯ್ದಿದ್ದಾರೆ. "ಸಿಎಜಿಯ ಪವಿತ್ರತೆಯ ಜತೆ ವಿನೋದ್ ರೈ ಹೊಂದಾಣಿಕೆ ಮಾಡಿಕೊಂಡರು," ಎಂದು ಅವರು ದೂರಿದ್ದಾರೆ.

ವಿನೋದ್ ರೈ ವಿರುದ್ಧ ಆಕ್ರೋಶ
ರೈ 2ಜಿ ಹಗರಣದಿಂದ 1.76 ಲಕ್ಷ ಕೋಟಿ ನಷ್ಟವಾಗಿದೆ ಎಂದು ಹೇಳಿದ್ದರು. ಈ ಆರೋಪವನ್ನು ಕೋರ್ಟ್ ನಂತರ ಕೈಬಿಟ್ಟಿತು. ಈ ಬಗ್ಗೆ ಮಾತನಾಡಿರುವ ರಾಜ, "ಅಸಮರ್ಪಕ ಕಾನೂನು ವ್ಯಾಖ್ಯಾನಗಳು, ಅಸಂಬದ್ಧ ಹೋಲಿಕೆಗಳು ಮತ್ತು ಅಗೌರವಯುತ ಆರೋಪಗಳ ಮಿಶ್ರಣ,"ದೊಂದಿಗೆ ಈ ಪ್ರಕರಣವನ್ನು ರೂಪಿಸಲಾಗಿತ್ತು ಎಂದು ಕಿಡಿಕಾರಿದ್ದಾರೆ.

ರೈ ಭುಜದ ಮೇಲೆ ಬಂದೂಕು
"ಪ್ರಕರಣದಲ್ಲಿ ಆರೋಪಿಯಾಗಿದ್ದು ನನ್ನ ಅನುಭವದಲ್ಲಿ ಹೇಳುವುದಾದರೆ ಯುಪಿಎ 2 ಸರಕಾರವನ್ನು ಕೊಲ್ಲಲು ರಾಜಕೀಯ ಪ್ರೇರಣೆ ಈ ಪ್ರಕರಣದಲ್ಲಿ ಕೆಲಸ ಮಾಡಿದೆ. ರೈ ಭುಜದ ಮೇಲೆ ಬಂದೂಕು ಇಡಲಾಗಿತ್ತು," ಎಂದು ರಾಜಾ ಆರೋಪಿಸಿದ್ದಾರೆ.

ಯುಪಿಎ-2 ಸರಕಾರದ ಬಲಿಪಶು
ಇದೇ ವೇಳೆ ಯುಪಿಎ-2 ಸರಕಾರ ತಮ್ಮನ್ನು ಬಲಿಪಶು ಮಾಡಿತು ಎಂದೂ ರಾಜಾ ದೂರಿದ್ದಾರೆ. ಮಾತ್ರವಲ್ಲದೆ ಮನಮೋಹನ್ ಸಿಂಗ್ ಅವರ ಮೌನವನ್ನೂ ರಾಜಾ ಪ್ರಶ್ನಿಸಿದ್ದಾರೆ. ಸಿಂಗ್ ಮೌನ, "ನಮ್ಮ ರಾಷ್ಟ್ರದ ಸಾಮೂಹಿಕ ಆತ್ಮಸಾಕ್ಷಿಯ ಮೌನಗೊಳಿಸುವಿಕೆ "ಯಂತೆ ಇತ್ತು ಎಂದು ಅವರು ಹೇಳಿದ್ದಾರೆ.

ನಿಷ್ಕ್ರಿಯ ಪ್ರಧಾನಿ
"ಸರಕಾರದ ಇಮೇಜನ್ನು ರಕ್ಷಣೆ ಮಾಡಲು ತಮ್ಮನ್ನು ಕಂಬಿ ಹಿಂದೆ ಕಳುಹಿಸಲಾಯಿತು," ಎಂದೂ ರಾಜಾ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. "ಸಿಂಗ್ ಪದೇ ಪದೇ ತಮ್ಮ ಸಲಹೆಗಾರರಿಂದ ತಪ್ಪಾಗಿ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಸುಮಾರು 15 ತಿಂಗಳ ಕಾಲ ಬಂಧನಕ್ಕೊಳಗಾಗಿ, ಜೈಲಿನಲ್ಲಿದ್ದರೂ ಸಹ ಅವರು ನಿಷ್ಕ್ರಿಯ ವೀಕ್ಷಕರಾಗಿ ಉಳಿಯಲು ನಿರ್ಧರಿಸಿದ್ದರು," ಎಂದು ರಾಜಾ ಆರೋಪಿಸಿದ್ದಾರೆ.
ಮಾಧ್ಯಮ ವರದಿಗಳಿಂದ ತಾವು ಪ್ರಭಾವಿತರಾಗಿದ್ದಾಗಿ ಖಾಸಗಿಯಾಗಿ ತಮ್ಮ ಬಳಿ ಸಿಂಗ್ ಒಪ್ಪಿಕೊಂಡಿದ್ದರು ಎಂಬುದಾಗಿಯೂ ರಾಜಾ ಪುಸ್ತಕದಲ್ಲಿ ಉಲ್ಲೆಖಿಸಿದ್ದಾರೆ.












Click it and Unblock the Notifications