ಮಹಾರಾಷ್ಟ್ರದಲ್ಲಿ ಶಿಂಧೆ ಬದಲಿಗೆ ಬಿಜೆಪಿಗೆ ಮುಖ್ಯಮಂತ್ರಿ ಕುರ್ಚಿ; ಸುಳಿವು ಕೊಟ್ಟ ಸಾಮ್ನಾ!
ಮುಂಬೈ, ಅಕ್ಟೋಬರ್ 24: ಮಹಾರಾಷ್ಟ್ರ ರಾಜಕಾರಣಕ್ಕೆ ಮತ್ತೊಮ್ಮೆ ಬದಲಾವಣೆಯ ಗಾಳಿ ಬೀಸಲಿದೆ ಎಂದು ಶಿವಸೇನಾ ಸುಳಿವು ನೀಡಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಪಕ್ಷವು ರಾಜ್ಯದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದಲ್ಲಿ ಬಿರುಕು ಮೂಡಿರುವ ಬಗ್ಗೆ ದೂಷಿಸಿದೆ.
ಏಕನಾಥ್ ಶಿಂಧೆ ಬಣದಲ್ಲಿ ಗುರುತಿಸಿಕೊಂಡಿದ್ದ 22 ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಈ ಬದಲಾವಣೆ ಬೆನ್ನಲ್ಲೇ ರಾಜ್ಯದಲ್ಲಿ ಏಕನಾಥ್ ಶಿಂಧೆ ಬದಲಾಗಿ ಬಿಜೆಪಿಯ ನಾಯಕರು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುವ ಸಾಧ್ಯತೆಯಿದೆ ಎಂದು ಶಿವಸೇನಾ ಮುಖವಾಣಿ ಸಾಮ್ನಾ ವರದಿ ಮಾಡಿದೆ.
ಮಹಾರಾಷ್ಟ್ರ ಗ್ರಾಮ ಪಂಚಾಯತ್ ಚುನಾವಣೆ; ಉದ್ಧವ್ ಠಾಕ್ರೆ ಬಣಕ್ಕೆ ಹೆಚ್ಚಿನ ಸ್ಥಾನ
ಭಾನುವಾರ ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಈ ಕುರಿತು ವರದಿ ಪ್ರಕಟಗೊಂಡಿದೆ. ಅದರ ಪ್ರಕಾರ, "ಶಿಂಧೆ ಬಣದ 22 ಶಾಸಕರು ಬಿಜೆಪಿಯೊಂದಿಗೆ ವಿಲೀನಗೊಳ್ಳುವ ಗುಂಪನ್ನು ರಚಿಸುತ್ತಾರೆ. ಶಿಂಧೆ-ಬಿಜೆಪಿ ಸರ್ಕಾರ ತಾತ್ಕಾಲಿಕ ವ್ಯವಸ್ಥೆಯಾಗಿದೆ. ಶಿಂಧೆ ಅನ್ನು ಯಾವಾಗ ಬೇಕಾದರೂ ಕೆಳಗಿಳಿಸುವಂತೆ ಹೇಳಲಾಗುವುದು. ಬಿಜೆಪಿ ನಾಯಕರೊಬ್ಬರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ," ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಿಜೆಪಿ ಮುಂದೆ ಮೊಂಡಿಯೂರಲೇ ಬೇಕು ಶಿಂಧೆ!
ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಕೇಂದ್ರ ಸಚಿವ ಮತ್ತು ಆರ್ಪಿಐ ನಾಯಕ ರಾಮದಾಸ್ ಅಠವಳೆ ಅವರಂತೆ ಆಗುತ್ತಾರೆ ಎಂದು "ಬಿಜೆಪಿಯ ಉನ್ನತ ನಾಯಕರನ್ನು" ಉಲ್ಲೇಖಿಸಿ ಸಾಮ್ನಾ ವಿವರಣೆ ಕೊಟ್ಟಿದೆ. ಶಿಂಧೆ ನೇತೃತ್ವದ ಬಣವು ಬಿಜೆಪಿಯೊಂದಿಗೆ ವಿಲೀನವಾಗುವುದರ ಹೊರತಾಗಿ ಬೇರೆ ಆಯ್ಕೆಗಳೇ ಇಲ್ಲ. "ಬಿಜೆಪಿಗೆ ಏಕನಾಥ್ ಶಿಂಧೆ ಎನ್ನುವವರು ಮತ್ತೊಬ್ಬ ನಾರಾಯಣ ರಾಣೆ ಆಗುತ್ತಾರೆ," ಎಂದು ಸಾಮ್ನಾ ವರದಿಯಲ್ಲಿ ತಿಳಿಸಿದೆ.
ದೆಹಲಿಯಲ್ಲಿ ಪ್ರಭಾವ ಹೊಂದಿರದ ಏಕನಾಥ್ ಶಿಂಧೆ
''ದೆಹಲಿ ಮಟ್ಟದಲ್ಲಿ ಏಕನಾಥ್ ಶಿಂಧೆ ಎನ್ನುವವರು ಯಾವುದೇ ರೀತಿ ಪ್ರಭಾವವನ್ನು ಹೊಂದಿಲ್ಲ. ಯಾವುದೇ ಕೆಲಸ ಮಾಡಿದರೂ ಅದಕ್ಕಾಗಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಿಗೆ ಮನ್ನಣೆ ಸಿಗುತ್ತದೆ. ಸಿಎಂ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ನಡುವೆ ಭಿನ್ನಾಭಿಪ್ರಾಯ ಹೆಚ್ಚುತ್ತಿದೆ. ಇತ್ತೀಚೆಗಷ್ಟೇ ಉನ್ನತ ಪೊಲೀಸ್ ಪೋಸ್ಟಿಂಗ್ ವಿಚಾರವಾಗಿ ಘರ್ಷಣೆ ನಡೆದಿವೆ ಎಂದು ಸಾಮ್ನಾ ಹೇಳಿಕೊಂಡಿದೆ.
ಗೃಹ ಸಚಿವರೂ ಆಗಿರುವ ಫಡ್ನವೀಸ್ ಅವರು ಐಪಿಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡುವಾಗ ಶಿಂಧೆ ಸಲಹೆಯನ್ನು ಪಾಲಿಸಲಿಲ್ಲ. ಇದರಿಂದ ಬೇಸರಗೊಂಡ ಶಿಂಧೆ ಮುಂಬೈ ತೊರೆದು ಸತಾರಾದಲ್ಲಿರುವ ತನ್ನ ತವರು ಮನೆಗೆ ತೆರಳಿದ್ದಾರೆ ಎಂದು ಸಾಮ್ನಾ ಹೇಳಿದೆ.
ಎಲ್ಲಿದ್ದೀರಾ ರಾಜ್ಯಪಾಲರೇ ಎಂದು ಪ್ರಶ್ನಿಸಿದ ಸಾಮ್ನಾ
ಶಿವಸೇನೆಯ ಮುಖವಾಣಿ ಇದೇ ಲೇಖನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಬಗ್ಗೆಯೂ ಉಲ್ಲೇಖಿಸಿದೆ. "ಉದ್ಧವ್ ಠಾಕ್ರೆ ಸರ್ಕಾರದ ಅವಧಿಯಲ್ಲಿ ರಾಜ್ಯಪಾಲರು ಬಹಳ ಪ್ರಾಮಾಣಿಕರು, ಸೂಪರ್ ಆಕ್ಟಿವ್ ಆಗಿದ್ದರು. ಆದರೆ ಈಗ ಅವರು ಎಲ್ಲಿದ್ದಾರೆ?, ಶಿಂಧೆ-ಫಡ್ನವೀಸ್ ಸರ್ಕಾರಕ್ಕೆ ಏಕೆ ಸಲಹೆ ನೀಡುತ್ತಿಲ್ಲ? ಎಂದು ಪ್ರಶ್ನಿಸಲಾಗಿದೆ. ಅಂಧೇರಿ-ಪೂರ್ವ ಕ್ಷೇತ್ರದ ಸ್ಪರ್ಧೆಯಿಂದ ಬಿಜೆಪಿ ಹಿಂದೆ ಸರಿದ ನಂತರ ಉದ್ಧವ್ ನೇತೃತ್ವದ ಸೇನೆಯು ಶಿಂಧೆ-ಬಿಜೆಪಿ ಮೈತ್ರಿಯನ್ನು ಆಕ್ರಮಣಕಾರಿಯಾಗಿ ಗುರಿಯಾಗಿಸಿಕೊಂಡಿದೆ.
ಉದ್ಧವ್ ಬಣದ ಸೇನಾ ಅಭ್ಯರ್ಥಿಗೆ ಸುಗಮ ಜಯ
ಅಂಧೇರಿ-ಪೂರ್ವ ಕ್ಷೇತ್ರದ ಸ್ಪರ್ಧೆಯಿಂದ ಬಿಜೆಪಿ ಹಿಂದೆ ಸರಿದ ನಂತರ ಉದ್ಧವ್ ಬಣದ ಸೇನಾ ಅಭ್ಯರ್ಥಿ ರುತುಜಾ ಲಟ್ಕೆಗೆ ಗೆಲುವಿನ ಹಾದಿ ಸುಗಮವಾಗಿದೆ. ಏಕನಾಥ್ ಶಿಂಧೆ ಬಣವು ಈಗಾಗಲೇ ಬಿಜೆಪಿಗೆ ಬೆಂಬಲವನ್ನು ವ್ಯಕ್ತಪಡಿಸಿದೆ, ಆದ್ದರಿಂದ ಪಕ್ಷವನ್ನು ಹಿಂತೆಗೆದುಕೊಳ್ಳುವಲ್ಲಿ, ಶಿಂಧೆ ಬಣವೂ ನಿರ್ಧಾರ ತೆಗೆದುಕೊಳ್ಳುವ ಭಾಗವಾಗಿದೆ ಎಂದು ಭಾವಿಸಲಾಗಿದೆ.
ಬಿಎಂಸಿಯ ನಾಗರಿಕ ಸಂಸ್ಥೆಗೆ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ. ಎಲ್ಲಾ ಪ್ರಮುಖ ಮಹಾರಾಷ್ಟ್ರ ಪಕ್ಷಗಳು ಉನ್ನತ ಸ್ಥಾನವನ್ನು ಪಡೆಯುವ ಭರವಸೆಯಲ್ಲಿ ಕಣಕ್ಕೆ ಇಳಿಯಲು ಸಜ್ಜಾಗಿವೆ. ಉದ್ಧವ್ ಬಣವು ಬಿಎಂಸಿಯ ಸ್ವತಂತ್ರ ಹಕ್ಕುದಾರ ಎಂದು ತೋರಿಸಿಕೊಳ್ಳುವ ಪ್ರಯತ್ನದಲ್ಲಿದೆ.