ಮುಂಬೈ ಸ್ಫೋಟ: ಅಪರಾಧಿಗಳಿಗೆ ಗುರುತರ ಶಿಕ್ಷೆಗೆ ಆಗ್ರಹ
ಮುಂಬೈ, ಜೂನ್ 22: 1993ರ ಮುಂಬೈ ಸರಣಿ ಸ್ಫೋಟದ ಪ್ರಮುಖ ಅಪರಾಧಿ ಭೂಗತ ಪಾತಕಿ ಅಬು ಸಲೇಂ ಹಾಗೂ ಇತರ 6 ಮಂದಿ ಭವಿಷ್ಯ ಜೂನ್ 26ರಂದು ನಿರ್ಧಾರವಾಗಲಿದೆ. ಮುಂಬೈನ ವಿಶೇಷ ನ್ಯಾಯಾಲಯವು ಅಂತಿಮ ತೀರ್ಪು ಪ್ರಕಟಿಸಬೇಕಿದೆ. ಈ ನಡುವೆ ಎಲ್ಲಾ ಅಪರಾಧಿಗಳಿಗೆ ಉಗ್ರಶಿಕ್ಷೆ ನೀಡಬೇಕೆಂದು ಆಗ್ರಹಿಸಲಾಗಿದೆ.
ಅಬು ಸಲೇಂ ಜತೆಗೆ ರಿಯಾಜ್ ಸಿದ್ದಿಕಿ , ಕರೀಂ ಉಲ್ಲಾ ಖಾನ್, ಫೆರೋಜ್ ಅಬ್ದುಲ್ ರಸೀದ್, ತಾಹಿರ್ ಮರ್ಚೆಂಟ್ ಮತ್ತು ಮುಸ್ತಫ ಜೋಸಾ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.
ನಾಗ್ಪುರ್ ಸೆಂಟ್ರಲ್ ಜೈಲಿನಲ್ಲಿ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮೊದಲ ಅಪರಾಧಿಯಾಗಿ ನೇಣಿಗೇರಿದ ಯಾಕೂಬ್ ಮೆಮನ್ ಕೂಡಾ ಅಪರಾಧಿಯಾಗಿದ್ದರು. ಭಾರತದಿಂದ ತಲೆಮರೆಸಿಕೊಂಡು ಪೋರ್ಚ್ಗಲ್ನಲ್ಲಿದ್ದ ಅಬುಸಲೇಂನನ್ನು 2012ರಲ್ಲಿ ಭಾರತಕ್ಕೆ ಕರೆ ತರಲಾಗಿತ್ತು
1993ರ ಮಾರ್ಚ್ 12ರಂದು ಮುಂಬೈನ ವಿವಿಧೆಡೆ ಸರಣಿ ಬಾಂಬ್ ಸ್ಫೋಟ ಸಂಭವಿಸಿ, 273ಮಂದಿ ಸಾವನ್ನಪ್ಪಿ, 713 ಜನರು ಗಾಯಗೊಂಡಿದ್ದರು.
ಸುಮಾರು 3000 ಕೆಜಿ ಆರ್ ಡಿ ಎಕ್ಸ್ ಪೂರೈಕೆ ಮಾಡಿದ ಆರೋಪ ಅಬು ಸಲೇಂ ಮೇಲಿದೆ. ದಾವೂದ್ ಇಬ್ರಾಹಿಂ, ಟೈಗರ್ ಮೆಮೊನ್ ಹಾಗೂ ಅಯೂಬ್ ಮೆಮೊನ್ ಇಡೀ ಸ್ಫೋಟದ ರುವಾರಿಗಳು ಹಾಗೂ ಪ್ರಮುಖ ಅಪರಾಧಿಗಳಾಗಿದ್ದಾರೆ.
12 ಜನರಿಗೆ ಮರಣದಂಡನೆ ಹಾಗೂ 20 ಜನರಿಗೆ ಜೀವಾವಧಿ ಶಿಕ್ಷೆಯನ್ನು ಟಾಡಾ ಕೋರ್ಟ್ ಪ್ರಕಟಿಸಿತ್ತು.
ಅಪರಾಧಿಗಳ ಪೈಕಿ ಮರಣದಂಡನೆ ಶಿಕ್ಷೆ ಪಡೆದಿದ್ದ ಮಹಮ್ಮದ್ ಇಕ್ಬಾಲ್ ಹಾಗೂ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕಸ್ಟಮ್ ಅಧಿಕಾರಿಯಾಗಿದ್ದ ಎಸ್ ಎನ್ ಥಾಪಾ ಅವರು ಶಿಕ್ಷೆ ಅವಧಿ ಮುಗಿಯುವ ಮುನ್ನವೇ ಮೃತಪಟ್ಟಿದ್ದಾರೆ.
ಜೀವಾವಧಿ ಶಿಕ್ಷೆ ಪಡೆದ 20 ಜನರಲ್ಲಿ ಒಬ್ಬ ಮೃತಪಟ್ಟಿದ್ದರೆ ಇಬ್ಬರಿಗೆ ಜಾಮೀನು ಮಂಜೂರಾಗಿದೆ. ಈಗ 17 ಜನ ಜೀವಾವಧಿ ಶಿಕ್ಷೆ ಹಾಗೂ 11 ಜನ ಮರಣದಂಡನೆ ಶಿಕ್ಷೆ ಅನುಭವಿಸುತ್ತಿದ್ದಾರೆ.