ಗುಜರಾತಿನ ದೇಗುಲ ಧ್ವಂಸಗೊಳಿಸಲು ಉಗ್ರರ ಎಂಟ್ರಿ?
ಅಹಮದಾಬಾದ್, ಮಾ. 06: ಮಹಾಶಿವರಾತ್ರಿ ವೇಳೆಯಲ್ಲಿ ಗುಜರಾತಿನ ಹಲವೆಡೆ ಬಾಂಬ್ ಸ್ಫೋಟ ಮೂಲಕ ಆತಂಕ ಮೂಡಿಸಲು ಉಗ್ರರು ಭಾರತಕ್ಕೆ ನುಸುಳಿರುವ ಮಾಹಿತಿ ಸಿಕ್ಕಿದೆ. ಪಾಕಿಸ್ತಾನ ನ್ಯಾಷನಲ್ ಸೆಕ್ಯುರಿಟಿ ಅಡೈಸರ್ (ಎನ್ಎಸ್ಎ) ನಾಸಿರ್ ಖಾನ್ ಅವರು ನೀಡಿರುವ ಮಾಹಿತಿಯಂತೆ ಗುಜರಾತಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಸುಮಾರು 10 ಮಂದಿ ಉಗ್ರರು ಗುಜರಾತಿಗೆ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊವಲ್ ಅವರಿಗೆ ನಾಸೀರ್ ಅವರು ಮಾಹಿತಿ ನೀಡಿದ್ದಾರೆ. ಲಷ್ಕರ್ ಇ ತೋಯ್ಬಾ ಹಾಗೂ ಜೈಷ್ ಇ ಮೊಹಮ್ಮದ್ ಸಂಘಟನೆಯ ಉಗ್ರ ಸಂಘಟನೆಯ ಆತ್ಮಾಹುತಿ ದಳ ಇದಾಗಿದೆ.

ಸೋಮವಾರ (ಮಾರ್ಚ್ 06) ಭಾರತದೆಲ್ಲೆಡೆ ಮಹಾಶಿವರಾತ್ರಿಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಆತಂಕ ಸೃಷ್ಟಿಸಲು ಗುಜರಾತಿನ ದೇಗುಲಗಳನ್ನು ಧ್ವಂಸಗೊಳಿಸಲು ಉಗ್ರರು ಯೋಜನೆ ಹಾಕಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ.
ಕಳೆದ 3 ತಿಂಗಳ ಅವಧಿಯಲ್ಲಿ ಭಾರತ-ಪಾಕ್ ಸಾಗರ ಗಡಿ ಪ್ರದೇಶಕ್ಕೆ ನಿಕಟವಾಗಿರುವ ಅರೇಬಿಯನ್ ಸಮುದ್ರದ ಖಾರಿ ಪ್ರದೇಶದಲ್ಲಿ 5 ಪಾಕಿಸ್ತಾನಿ ದೋಣಿಗಳು ಪತ್ತೆಯಾಗಿವೆ. ಬಳಕೆಯ ನಂತರ ದೋಣಿಗಳನ್ನು ಆ ಪ್ರದೇಶದಲ್ಲೇ ಬಿಡಲಾಗಿದೆ. 5ನೇಯ ಹಾಗೂ ಕಡೆಯ ದೋಣಿ ಶುಕ್ರವಾರ ರಾತ್ರಿ ಪತ್ತೆಯಾಯಿತು.
ಸೇನೆ, ನೌಕಾಪಡೆ, ಸಾಗರ ರಕ್ಷಕ ಪಡೆ, ವಾಯುಪಡೆ ಮತ್ತು ಗುಜರಾತ್ ಪೊಲೀಸ್ ಸೇರಿದಂತೆ ಜಂಟಿ ಭದ್ರತಾ ಸಭೆಯೊಂದನ್ನು ಕಳೆದ ಸಂಜೆ ನಡೆಸಲಾಯಿತು.
ಗಾಂಧಿ ನಗರದಲ್ಲಿ ಈ ಸಭೆ ನಡೆದು ಪರಿಸ್ಥಿತಿಯ ಸಮಗ್ರ ಅವಲೋಕನ ಕೈಗೊಳ್ಳಲಾಯಿತು. ಜಿಲ್ಲಾ ಪೊಲೀಸ್ ಮುಖ್ಯಸ್ಥರ ಜೊತೆಗೆ ಗಡಿ ಮತ್ತು ಕಡಲ ತೀರ ಪ್ರದೇಶಗಳ ಪ್ರಮುಖ ಭದ್ರತಾ ಅಧಿಕಾರಿಗಳನ್ನು ವಿಡಿಯೋ ಕಾನ್ಫ್ರೆನ್ಸ್ ಮುಖಾಂತರ ಸಭೆಯ ಕಲಾಪಕ್ಕೆ ಒಳಪಡಿಸಿಕೊಳ್ಳಲಾಯಿತು.












Click it and Unblock the Notifications