ಕೊವಿಡ್-19ನಿಂದ ಪ್ರಾಣ ಬಿಟ್ಟ 100ರಲ್ಲಿ 89 ಜನ ಈ ರಾಜ್ಯದವರು!
ನವದೆಹಲಿ, ಆಗಸ್ಟ್.28: ಕಳೆದ ಎರಡು ವಾರಗಳಲ್ಲಿ ಕೊರೊನಾವೈರಸ್ ನಿಂದ ಪ್ರಾಣ ಬಿಡುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕೊವಿಡ್-19 ಸೋಂಕಿನಿಂದ ಗುಣಮುಖರಾದವರ ಜೊತೆಗೆ ಬಲಿಯಾದವರ ಸಂಖ್ಯೆಯೂ ಹೆಚ್ಚುತ್ತಿದೆ.
ದೇಶದ 9 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದಲ್ಲೇ ಶೇ.89ರಷ್ಟು ಸಾವಿನ ಪ್ರಕರಣಗಳು ಬೆಳಕಿಗೆ ಬಂದಿರುವುದು ಇದೀಗ ಗೊತ್ತಾಗಿದೆ. ದೇಶದಲ್ಲಿ 100 ಜನರು ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟಿದ್ದಲ್ಲಿ, ಈ ಪೈಕಿ 89 ಜನರು ಮಹಾರಾಷ್ಚ್ರ, ತಮಿಳುನಾಡು, ಕರ್ನಾಟಕ, ತೆಲಂಗಾಣ, ಗುಜರಾತ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಪಂಜಾಬ್ ಮತ್ತು ಜಮ್ಮು ಕಾಶ್ಮೀರದವರೇ ಆಗಿರುತ್ತಾರೆ ಎಂದು ತಿಳಿದು ಬಂದಿದೆ.
ಅಕ್ಕಪಕ್ಕದ್ಮನೆಯವರಿಗೆ ಕೊರೊನಾ ಪಾಸಿಟಿವ್ ಬಂದ್ರೆ ಏನ್ಮಾಡೋದು? ಇಲ್ಲಿದೆ ಟಿಪ್ಸ್
ಈ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾವೈರಸ್ ಸಾವಿನ ಪ್ರಕರಣಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಸೂಚನೆ ನೀಡಿದ್ದಾರೆ.
ಕೊವಿಡ್-19 ಮೂಲ ಪತ್ತೆಗೆ ಒತ್ತು:
ದೇಶದ 9 ಜಿಲ್ಲೆಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾವೈರಸ್ ನಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಣಾಮಕಾರಿ ಕಂಟೇನ್ಮೆಂಟ್ ಝೋನ್ ನಿರ್ಮಾಣ, ಸೋಂಕಿನ ಮೂಲ ಪತ್ತೆ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿಯೊಂದು ಜಿಲ್ಲೆಯಲ್ಲೂ ಶೇ.1ರಷ್ಟು ಸಾವಿನ ಪ್ರಮಾಣ ತಗ್ಗಿಸಬೇಕಿದೆ.
ಕೊರೊನಾವೈರಸ್ ತಪಾಸಣೆ ವೇಗ ಹೆಚ್ಚಿಸುವುದು:
ಕಳೆದ 2 ವಾರಗಳಲ್ಲಿ ಕೊವಿಡ್-19ನಿಂದ ಮೃತಪಟ್ಟವರಲ್ಲಿ ಶೇ.89ರಷ್ಟು ಜನರು 9 ರಾಜ್ಯ ಮತ್ತು 1 ಕೇಂದ್ರಾಡಳಿತ ಪ್ರದೇಶದವರೇ ಎಂಬುದನ್ನು ಗಮನಿಸಲಾಗಿದೆ. ಈ ರಾಜ್ಯಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ. ಪ್ರತಿನಿತ್ಯ ಕೊವಿಡ್-19 ತಪಾಸಣೆ ವೇಗವನ್ನು ಹೆಚ್ಚಿಸುವ ಅಗತ್ಯವಿದ್ದು, ಪ್ರತಿ 10 ಲಕ್ಷದಲ್ಲಿ 140 ಜನರನ್ನು ಕೊರೊನಾವೈರಸ್ ಸೋಂಕಿನ ತಪಾಸಣೆಗೊಳಪಡಿಸಬೇಕು. ಈ ಪೈಕಿ ಸೋಂಕಿತ ಪ್ರಕರಣಗಳು ಶೇ.5ಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳುವ ಗುರಿಯನ್ನು ಹೊಂದಿರಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ.